ಸಂತೋಷ್ ಗೆ ಅಧಿಕಾರ ಬೇಕಿಲ್ಲ, ಬಿಜೆಪಿ ಬಿಕ್ಕಟ್ಟಿನ ಅಸಲಿ ಕಾರಣ ಏನು?
ಆರೆಸ್ಸೆಸ್ ಮುಖಂಡ ಸಂತೋಷ್ ಅವರಿಂದಲೇ ಬಿಜೆಪಿಯಲ್ಲಿ ಭಿನ್ನಮತ ಎಂದಿದ್ದಾರೆ ಯಡಿಯೂರಪ್ಪ. ಈ ಬಗ್ಗೆ ಮೌನವಾಗಿರುವ ಸಂತೋಷ್, ಯಾರು ಈ ಬಗ್ಗೆ ಮಾತನಾಡಬೇಕೋ, ಮಧ್ಯಪ್ರವೇಶಿಸಬೇಕೋ ಅವರು ಆ ಕೆಲಸ ಮಾಡ್ತಾರೆ ಅಂತಾರೆ
ಬೆಂಗಳೂರು, ಏಪ್ರಿಲ್ 28: ಬಿಜೆಪಿಯಲ್ಲಿನ ಆಂತರಿಕ ಕಲಹಕ್ಕೆ ಆರೆಸ್ಸೆಸ್ ನ ಸಂತೋಷ್ ಕಾರಣ ಎಂದು ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. ಸಂತೋಷ್ ಅವರು ಪಕ್ಷದೊಳಗೆ ಭಿನ್ನಮತದ ಬೀಜ ಬಿತ್ತುತ್ತಿದ್ದಾರೆ ಎಂಬ ಅರೋಪವನ್ನು ಮಾಧ್ಯಮಗಳ ಮುಂದೆಯೇ ಮಾಡಿದ್ದರು ಬಿಎಸ್ ವೈ. ಆ ನಂತರ ಸಂತೋಷ್ ಅವರು ಮೌನವಾಗಿದ್ದಾರೆ.
ಯಾರು ಪ್ರತಿಕಿಯೆ ಕೊಡಬೇಕೋ ಅವರು ಕೊಡ್ತಾರೆ ಎಂದು ನಿರ್ಲಿಪ್ತರಾಗಿ ಹೇಳ್ತಾರೆ. "ಕರ್ನಾಟಕದಲ್ಲಿನ ಪರಿಸ್ಥಿತಿ ಬಗ್ಗೆ ನಾನು ಗಮನಿಸುತ್ತಲೂ ಇಲ್ಲ, ಆ ಬಗ್ಗೆ ಹೇಳುವುದಕ್ಕೂ ಏನಿಲ್ಲ. ಯಾರು ಕ್ರಮ ತೆಗೆದುಕೊಳ್ಳಬೇಕೋ ಅವರು ಮಧ್ಯಪ್ರವೇಶಿಸುತ್ತಾರೆ" ಎಂದು ಒನ್ ಇಂಡಿಯಾಗೆ ತಿಳಿಸಿದ್ದಾರೆ.[ಬಿಜೆಪಿ ಬಿಕ್ಕಟ್ಟಿಗೆ ಸಂತೋಷ್ ಜೀ ಮೇಲೆ ಗೂಬೆ ಕೂರಿಸಿದ ಯಡಿಯೂರಪ್ಪ]
ಆರೆಸ್ಸೆಸ್ ನ ಪ್ರಬಲ ಮುಖಂಡರಾದ ಸಂತೋಷ್ ಅವರು ಈಶ್ವರಪ್ಪನವರನ್ನು ದಾಳವಾಗಿ ಮಾಡಿಕೊಂಡು ಯಡಿಯೂರಪ್ಪನವರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಸಂತೋಷ್ ಮಾತ್ರ, ನಾನು ರಾಜಕಾರಣಿ ಅಲ್ಲ, ಒಬ್ಬ ಕಾರ್ಯಕರ್ತ. ಈ ಬಗ್ಗೆ ಏನೂ ಹೇಳುವುದಕ್ಕಿಲ್ಲ ಎನ್ನುತ್ತಿದ್ದಾರೆ.
ಹಾಗಿದ್ದರೆ ಅವರ ಮಾತಿನ ಅರ್ಥ ಏನು ಅಂದರೆ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಅಂತಲೇ. ಆ ಕಾರಣಕ್ಕೆ ಸಂಬಂಧಪಟ್ಟವರು ಏನು ಮಾಡಬೇಕೋ ಅದನ್ನು ಮಾಡ್ತಾರೆ ಅಂತ ಹೇಳಿ ಸುಮ್ಮನಾಗ್ತಾರೆ.[ಬಿಜೆಪಿಯಲ್ಲಿ ಒಳಜಗಳ ಎಲ್ಲಿದೆ, ಬಿಎಸ್ ವೈ ಮುಖ್ಯಮಂತ್ರಿ ಕ್ಯಾಂಡಿಡೇಟು: ಈಶ್ವರಪ್ಪ]

ಬುಸುಗುಟ್ಟಿದರು ಬಿಎಸ್ ವೈ
ಯಡಿಯೂರಪ್ಪನವರು ಗುರುವಾರ ಸಂತೋಷ್ ಅವರ ವಿರುದ್ಧ ನೇರವಾಗಿ ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿಂದ ಬಿಜೆಪಿಯಲ್ಲಿ ಇಂಥ ಬೆಳವಣಿಗೆ ನಡೆಯುವುದಕ್ಕೆ ಸಂತೋಷ್ ಅವರೇ ಕಾರಣ ಎಂದು ಬಿಎಸ್ ವೈ ಬೆಂಬಲಿಗರು ಕೂಡ ಆರೋಪ ಮಾಡಿದ್ದಾರೆ.

ಬೇರೆಯವರನ್ನು ತರುವ ಹುನ್ನಾರ
ಬಿಎಸ್ ವೈ ಬೆಂಬಲಿಗರು ಮಾಡುವ ಆರೋಪದ ಪ್ರಕಾರ, ಬಿಎಲ್ ಸಂತೋಷ್ ಭಿನ್ನಮತೀಯ ಚಟುವಟಿಕೆ ಸೂತ್ರಧಾರರು. ಅವರ ಉದ್ದೇಶ ಏನೆಂದರೆ ಯಡಿಯೂರಪ್ಪ ಬದಲು ಬೇರೆಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಬೇಕು. ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಭಿನ್ನಮತ ಹೆಚ್ಚಾಗಿದೆ.

ಕಿಂಗ್ ಮೇಕರ್ ಆಗಬೇಕಾ?
ಈ ಸನ್ನಿವೇಶವನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಸಂತೋಷ್ ಪ್ರಯತ್ನಿಸುತ್ತಿದ್ದಾರೆ ಎಂಬುದು ಆರೋಪ. ಆದರೆ ಯಾವುದೇ ಬಣದ ಜತೆಗೆ ಗುರುತಿಸಿಕೊಳ್ಳದ ಮುಖಂಡರು, ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. "ಸಂತೋಷ್ ಗೆ ತಾವೇ ಅಧಿಕಾರ ಹಿಡಿಯಬೇಕು ಎಂಬ ಆಸೆಯಿಲ್ಲ. ಆದರೆ ತಾವು ಕಿಂಗ್ ಮೇಕರ್ ಆಗಬೇಕು ಎಂಬ ಆಲೋಚನೆ ಇದೆ" ಎನ್ನುತ್ತಾರೆ.

ಆರೆಸ್ಸೆಸ್ ಮಾತು ಕೇಳುವವರು ಬೇಕು
ಆರೆಸ್ಸೆಸ್ ಹಿನ್ನೆಲೆಯ ಸಂತೋಷ್, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅವರು ಉದ್ದೇಶ ಏನೆಂದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ವ್ಯಕ್ತಿ ತನ್ನ ಇಷಾರೆಯಂತೆ ನಡೆಯುವಂತಿರಬೇಕು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅದು ಸಾಧ್ಯವಿಲ್ಲ.

ಹಿಡಿತಕ್ಕಾಗಿ ಹೋರಾಟ-ಕಾದಾಟ
ಆದ್ದರಿಂದ ಈಗಿನ ಆಸಕ್ತಿ ಏನೆಂದರೆ, ಆರೆಸ್ಸೆಸ್ ನ ಹತೋಟಿಯಲ್ಲಿರುವ ವ್ಯಕ್ತಿಯೊಬ್ಬರು ಬೇಕು. ಬಿಜೆಪಿ ಮೇಲೆ ಆರೆಸ್ಸೆಸ್ ಹಿಡಿತ ಸಾಧಿಸುವುದಕ್ಕಾಗಿ ಈ ಕಾದಾಟ, ಹೋರಾಟಗಳೆಲ್ಲ ಆಗುತ್ತಿವೆ. ಇದರ ಹೊರತಾಗಿ ಬೇರೇನೂ ಅಲ್ಲ ಎನ್ನುತ್ತಾರೆ ಪಕ್ಷದ ಮುಖಂಡರು.











Click it and Unblock the Notifications