ಬಿಜೆಪಿ ಮುಖಂಡ ಕದಿರೇಶ್ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಶರಣು
ಬೆಂಗಳೂರು, ಫೆಬ್ರವರಿ 12: ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಬಿಜೆಪಿ ಮುಖಂಡ ಕದಿರೇಶ್ ಹತ್ಯೆ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಕೊಲೆಯ ಹಿಂದಿನ ಪ್ರಮುಖ ಆರೋಪಿಗಳಾದ ನವೀನ್ ಮತ್ತು ವಿನಯ್ ಎಂಬುವರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾಗಿದ್ದು, ಉಳಿದ ಆರೋಪಿಗಳ ಬಗ್ಗೆ ಸುಳಿವು ತಿಳಿದುಬಂದಿಲ್ಲ.
ಕಾಟನ್ಪೇಟೆಯ ಆಂಜನಪ್ಪ ಗಾರ್ಡನ್ನಲ್ಲಿ ವಾಸವಿದ್ದ ಕದಿರೇಶ್ ಅವರನ್ನು ಫೆಬ್ರವರಿ 7ರಂದು ಮನೆ ಸಮೀಪದ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಬಿಜೆಪಿ ಕಾರ್ಪೊರೇಟರ್ ರೇಖಾ ಅವರ ಪತಿಯೂ ಆಗಿದ್ದ ಕದಿರೇಶ್ ಹತ್ಯೆ ನಂತರ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಆರೋಪ ಮಾಡಲಾಗಿತ್ತು.
2012ರಿಂದ ಕದಿರೇಶ್ ರೌಡಿ ಶೀಟರ್ ಆಗಿದ್ದು, ಅವರ ಮೇಲೆ 13 ಪ್ರಕರಣಗಳು ದಾಖಲಾಗಿದ್ದವು. ಹಾಗಾಗಿ ಇದು ವೈಯಕ್ತಿಕ ದ್ವೇಷದ ಕೊಲೆ ಎಂದು ಕಾಂಗ್ರೆಸ್ ಹೇಳಿತ್ತು.
ಇದೀಗ ಇಬ್ಬರು ಆರೋಪಿಗಳು ಶರಣಾಗಿದ್ದು, ಕದಿರೇಶ್ ಅವರ ಕೊಲೆ ರಾಜಕೀಯ ಪ್ರೇರಿತವೊ ಅಥವಾ ವೈಯಕ್ತಿಕ ದ್ವೇಷವೋ ಎಂಬುದು ತನಿಖೆ ಬಳಿಕ ತಿಳಿಯಲಿದೆ.












Click it and Unblock the Notifications