ಮಂತ್ರಿ ಮಂಡಲ ರಚಿಸುವ ಮುಂಚೆಯೇ ಮೈತ್ರಿ ಮುರಿಯುತ್ತದೆ: ಸದಾನಂದಗೌಡ
ಬೆಂಗಳೂರು, ಮೇ 20: ಮಂತ್ರಿ ಮಂಡಲ ರಚಿಸುವ ಮುಂಚೆಯೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದುಬೀಳಲಿದೆ ಎಂದು ಕೇಂದ್ರ ಮಂತ್ರಿ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ. ಬಹುಮತ ಸಾಬೀತು ಮಾಡುವ ಸಂದರ್ಭದಲ್ಲೇ ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇರಬಾರದೆಂಬ ಕಾರಣಕ್ಕೆ ಜನ ಬಿಜೆಪಿಗೆ ಮತ ಹಾಕಿದ್ದರು. ಆದರೆ ಜೆಡಿಎಸ್ನವರು ಬಿಜೆಪಿಗೆ ನೀಡಿದ್ದ ಜನಾದೇಶವನ್ನು ಧಿಕ್ಕರಿಸಿದ್ದಾರೆ. ಮತ್ತೆ ಅವಕಾಶ ಬಂದರೆ ಸರ್ಕಾರ ರಚಿಸಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಶಾಸಕರನ್ನು ಸೆಳೆಯಲು ಬಿಜೆಪಿ ಹಣದ ಆಮಿಷವೊಡ್ಡಿದ್ದಾರೆಂಬ ಆರೋಪ ಸುಳ್ಳು ಎಂದ ಅವರು, ಆಡಿಯೋ, ವೀಡಿಯೋಗಳ ಬಗ್ಗೆ ತನಿಖೆ ನಡೆಯಲಿ. ಎಲ್ಲವೂ ಫೇಕ್. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಕೇಂದ್ರ ಸರ್ಕಾರ ರಾಜಭವನ ದುರುಪಯೋಗ ಪಡಿಸಿಕೊಂಡಿಲ್ಲ. ನಾವು ಅತಿದೊಡ್ಡ ಪಕ್ಷವೆಂದು ರಾಜ್ಯಪಾಲರು ಆಹ್ವಾನ ಮಾಡಿದ್ದರು ಎಂದು ಸ್ಪಷ್ಟೀಕರಣ ನೀಡಿದರು.
ಚುನಾವಣೆಗೆ ಮುಂಚೆ ಕಾಂಗ್ರೆಸ್, ಜೆಡಿಎಸ್ ವಾಚಾಮಗೋಚರವಾಗಿ ಕಚ್ಚಾಡಿದ್ದರು. ಸಿದ್ದು, ಎಚ್ಡಿಕೆ ಹಾವು ಮುಂಗಿಸಿಯಂತಿದ್ದವರು. ಅಧಿಕಾರಕ್ಕಾಗಿ ಈಗ ಒಂದಾಗಿದ್ದಾರೆ. ಕಾಂಗ್ರೆಸ್ ಜತೆ ಜೆಡಿಎಸ್ ಹೋಗಲ್ಲ ಎಂದುಕೊಂಡಿದ್ದೆವು. ಪ್ರಜಾಪ್ರಭುತ್ವ ಧಿಕ್ಕರಿಸಿ ಕಾಂಗ್ರೆಸ್ ಜೊತೆ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಕೊಳಕು ರಾಜಕೀಯ ಗೊತ್ತಾದ ಮೇಲೆ ನಾವು ಬಹುಮತ ಸಾಬೀತು ಮಾಡುವ ಪ್ರಯತ್ನ ಮಾಡಲಿಲ್ಲ ಎಂದರು.












Click it and Unblock the Notifications