ಜಯಲಲಿತಾ ಚಿನ್ನ, ಬೆಳ್ಳಿ ಕೋರ್ಟ್ ವಶಕ್ಕೆ!

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಗುರುವಾರದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶ ಜಾನ್ ಮೈಕಲ್ ಡಿಕುನ್ಹಾ ಮುಂದೆ ಅರ್ಜಿ ಸಲ್ಲಿಸಿದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅಳಗನ್, ಜಯಲಲಿತಾ ನಿವಾಸ ಮೇಲೆ ದಾಳಿ ನಡೆಸಿ ಜಪ್ತಿಮಾಡಲಾದ ಬೆಲೆಬಾಳುವ ವಸ್ತುಗಳನ್ನು ಕೋರ್ಟ್ ಸುಪರ್ದಿಗೆ ಪಡೆಯಬೇಕು ಎಂದು ಅರ್ಜಿ ಸಲ್ಲಿಸಿದರು.
ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಪ್ರಕರಣ ಸಂಬಂಧ ನ್ಯಾಯಸಮ್ಮತ ತೀರ್ಪು ನೀಡಲು ಜಪ್ತಿ ಮಾಡಲಾದ ವಸ್ತುಗಳನ್ನು ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿತು. ಡಿ.21ರೊಳಗೆ ಚೆನ್ನೈನ ಆರ್ಬಿಐ ಖಜಾನೆಯಲ್ಲಿರುವ ವಸ್ತುಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿದರು.
ವಸ್ತುಗಳು ಏನು : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿವಾಸದ ಮೇಲೆ 1997ರಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ, 800 ಕೆಜಿ ಬೆಳ್ಳಿ, 28 ಕೆಜಿ ಚಿನ್ನ, 750 ಜತೆ ಶೂ, 10,500 ಸೀರೆ, 91 ವಾಚ್ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಈ ವಸ್ತುಗಳು ಸದ್ಯ ಚೆನ್ನೈನಲ್ಲಿದ್ದು, ಡಿ.21ರೊಳಗೆ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ.
ಜಯಲಲಿತಾ ಪರ ವಕೀಲರು ಜಪ್ತಿ ಮಾಡಲಾದ ವಸ್ತುಗಳನ್ನು ನ್ಯಾಯಾಲಯದ ವಶಕ್ಕೆ ಪಡೆಯುವುದು ಸೂಕ್ತವಲ್ಲ. ಅರ್ಜಿಯನ್ನು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶದಿಂದ ಸಲ್ಲಿಸಲಾಗಿದೆ ಎಂದು ವಾದ ಮಂಡಿಸಿದರು. ಆದರೆ, ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿದೆ. ಇದರಿಂದಾಗಿ ಜಯಲಲಿತಾ ಮನೆಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ನ್ಯಾಯಾಲಯ ತನ್ನ ವಶಕ್ಕೆ ಪಡೆಯಲಿದೆ.
ಪ್ರಕರಣವೇನು : ಜಯಲಲಿತಾ 1991ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಸಂಬಂಧ ದೂರು ದಾಖಲಾಗಿದ್ದು. ಆ ಸಂದರ್ಭದಲ್ಲಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಸದ್ಯ ಪ್ರಕರಣದ ವಿಚಾರಣೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.












Click it and Unblock the Notifications