ಅನ್ನಭಾಗ್ಯ ಯೋಜನೆಗೆ ಬರಲಿವೆ ಕೆಲವು ನಿಯಮ
ಬೆಂಗಳೂರು, ಅ.4 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ವಿಧಿಸಿಲು ಸಜ್ಜಾಗಿದೆ. ಈ ಮೂಲಕ ಯೋಜನೆಯಲ್ಲಿ ವಿತರಣೆ ಆಗುತ್ತಿರುವ ಅಕ್ಕಿಯು ಕಾಳಸಂತೆಗೆ ಮಾರಾಟವಾಗದಂತೆ ತಡೆಯುವ ಪ್ರಯತ್ನ ನಡೆಸಿದೆ.
ಅರ್ಹರಿಗೆ ಮಾತ್ರ ಅನ್ನಭಾಗ್ಯ ಯೋಜನೆ ತಲುಪುವಂತಾಗಲು ಈ ನಿಯಮಗಳನ್ನು ರೂಪಿಸಲಾಗಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆ.28ರಂದು ಅಧಿಸೂಚನೆ ಹೊರಡಿಸಿದೆ.

ಇಲಾಖೆಯ ಅಧಿಸೂಚನೆ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯುವ ಪ್ರಕ್ರಿಯೆ ಕಠಿಣವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 70 ಮತ್ತು ನಗರ ಪ್ರದೇಶದಲ್ಲಿ ಶೇ 50ರಷ್ಟು ಜನರು ಮಾತ್ರ ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಸದ್ಯ ಬಿಪಿಎಲ್ ಕಾರ್ಡ್ ಅನರ್ಹರಿಗೂ ವಿತರಣೆಯಾಗಿದೆ ಎಂಬುದು ಸರ್ಕಾರದ ವಾದ. ಆದ್ದರಿಂದ ಇದನ್ನು ತಡೆಗಟ್ಟಿ ಅನ್ನಭಾಗ್ಯ ಯೋಜನೆಯಿಂದ ಆಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಅಧಿಸೂಚನೆ ಪ್ರಕಾರ ಹೊಸದಾಗಿ ಪಡಿತರ ಚೀಟಿಗಳನ್ನು ಪಡೆಯಲು ಅ.31 ಕೊನೆಯ ದಿನವಾಗಿರುತ್ತದೆ. ಸದ್ಯ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲಾಗುತ್ತಿದೆ. ಇದನ್ನು ತಡೆಯಲು ಈ ಕ್ರಮ ಅನುಸರಿಸಲಾಗುತ್ತಿದೆ.
ಪ್ರತಿ ತಿಂಗಳು ಸುಮಾರು 450 ರೂ.ಗಳ ವಿದ್ಯುತ್ ಬಿಲ್ ಪಾವತಿ ಮಾಡುವ ಜನರನ್ನು ಬಿಪಿಎಲ್ ಕಾರ್ಡ್ ನಿಂದ ಹೊರಗಿಡುವ ಪ್ರಸ್ತಾಪವೂ ಇದೆ. ಈ ಅಧಿಸೂಚನೆ ಸದ್ಯ ಪ್ರಕಟಣೆಯಾಗಿದೆ. ಆದರೆ, ಇದರ ನಿಯಮಗಳು ಜಾರಿಗೆ ಬಂದಿಲ್ಲ.
ಸರ್ಕಾರ ಕಟ್ಟುನಿಟ್ಟಾಗಿ ಈ ಅಧಿಸೂಚನೆಯನ್ನು ಶೀಘ್ರದಲ್ಲೇ ಜಾರಿಗೆ ತಂದು ಅನ್ನಭಾಗ್ಯ ಯೋಜನೆ ಮೂಲಕ ವಿತರಣೆಯಾದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯವ ಕಾರ್ಯಕ್ಕೆ ಚಾಲನೆ ನೀಡಲಿದೆ. ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ.












Click it and Unblock the Notifications