ಬೆಂಗಳೂರಿಗರ ಹೊಸ ಅಳಲು: ಈ ಕ್ಯಾಬ್ ನಂಬಿಕೊಂಡ್ರೆ ಕೊನೆಗೆ ಆಟೋನೇ ಗತಿ!
ಯಾವ ಸಮಸ್ಯೆಯಿಲ್ಲದ ಒಂದು ಆಟೋ ಸಿಗೋದಕ್ಕೂ ಅದೃಷ್ಟ ಬೇಕು ಎಂಬ ಪರಿಸ್ಥಿತಿಯಲ್ಲಿದ್ದ ಬೆಂಗಳೂರಿಗರಿಗೆ ನೆರವಾದ ಉಬರ್, ಓಲಾ ಕ್ಯಾಬ್ ಗಳು ಆರಂಭದಲ್ಲಿ ಅದೆಷ್ಟು ನಾಜೂಕಿನಿಂದ ಕೆಲಸ ನಿರ್ವಹಿಸದವೆಂದರೆ ಎಂಥವರಾದರೂ ಶಹಬ್ಬಾಶ್ ಎನ್ನಬೇಕು!
ಬೆಂಗಳೂರು, ಮೇ 23: ಅಯ್ಯೋ, ಮಲ್ಲೇಶ್ವರಮ್ಮಾ? ತುಂಬಾ ಟ್ರಾಫಿಕ್ಕು ಮೇಡಂ, 30 ರೂಪಾಯಿ ಜಾಸ್ತಿ ಕೊಟ್ರೆ ಬರ್ತೀನಿ..., ರೈಲ್ವೇ ಸ್ಟೇಶನ್ನಾದ್ರೆ ಬರೋಕಾಗಲ್ಲ ಸಾರ್ ಬೇರೆ ಆಟೋ ನೋಡ್ಕೊಳ್ಳಿ... ಹೀಗೆ ತರಹೇವಾರಿ ಕಾರಣಗಳನ್ನು ಕೊಟ್ಟು ಸತಾಯಿಸುವ ಆಟೋ ಡ್ರೈವರ್ ಗಳಿಗೆ ಸೆಡ್ಡು ಹೊಡೆಯೋದಕ್ಕಾಗಿ ಬೆಂಗಳೂರಿಗರು ಕಂಡುಕೊಂಡ ಉಪಾಯ ಉಬರ್, ಓಲಾ, ಟ್ಯಾಕ್ಸಿ ಫಾರ್ ಶ್ಯೂರ್ ಮುಂತಾದ ಕ್ಯಾಬ್ ಗಳು.
ಯಾವ ಸಮಸ್ಯೆಯಿಲ್ಲದ ಒಂದು ಆಟೋ ಸಿಗೋದಕ್ಕೂ ಅದೃಷ್ಟ ಬೇಕು ಎಂಬ ಪರಿಸ್ಥಿತಿಯಲ್ಲಿದ್ದ ಬೆಂಗಳೂರಿಗರಿಗೆ ನೆರವಾದ ಉಬರ್, ಓಲಾ ಕ್ಯಾಬ್ ಗಳು ಆರಂಭದಲ್ಲಿ ಅದೆಷ್ಟು ನಾಜೂಕಿನಿಂದ ಕೆಲಸ ನಿರ್ವಹಿಸದವೆಂದರೆ ಎಂಥವರಾದರೂ ಶಹಬ್ಬಾಶ್ ಎನ್ನಬೇಕು![ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆಗೆ ಬಿತ್ತು ಕತ್ತರಿ!]

ಬುಕ್ ಮಾಡುತ್ತಿದ್ದಂತೆಯೇ ಆಚೆಯಿಂದ ಚಾಲಕನೇ ಕರೆ ಮಾಡಿ ವಿಳಾಸ ಪಡೆದು, ಹೇಳಿದ ಸಮಯಕ್ಕೆ ಸರಿಯಾಗಿ ಮನೆಯ ಮುಂದೆ ಬಂದು ನಿಲ್ಲುವ, ಕೈಗೆಟಕುವ ಪಾರದರ್ಶಕ ದರದ ಈ ಕ್ಯಾಬ್ ಸೇವೆಗೆ ಮಾರುಹೋಗದವರೇ ಇಲ್ಲ. ಆದರೆ ಆರಂಭದಲ್ಲಿ ಅಗಸ ಬಟ್ಟೆನಾ ಎತ್ತಿ ಎತ್ತಿ ಒಗೆದಿದ್ದ ಅನ್ನೋ ಗಾದೆ ಈ ಕ್ಯಾಬ್ ಸೇವೆಗೂ ಅನ್ವಯವಾಗುವಂತಾಗಿದೆಯಾ?
ಕ್ಯಾಬ್ ಸೇವೆಗಳು ಬೆಂಗಳೂರಿಗರಿಗೆ ಎಷ್ಟು ಉಪಕಾರಿಯಾಗಿವೆಯೋ, ಅಷ್ಟೇ ಸಮಸ್ಯೆಯನ್ನೂ ತಂದಿಟ್ಟಿವೆ. ತೀರಾ ತುರ್ತು ಅಂದ್ರೆ ಟ್ರೈನೋ, ಬಸ್ಸೊ ಕ್ಯಾಚ್ ಮಾಡಬೇಕೆಂದು ಕ್ಯಾಬ್ ಬುಕ್ ಮಾಡಿ, ಹದಿನೈದು ನಿಮಿಷ ಕಾದ ಮೇಲೆ, ಅತ್ತೆಡೆಯಿಂದ ಡ್ರೈವರ್ ಫೋನಾಯಿಸುತ್ತಾನೆ, 'ಸ್ಸಾರಿ ಸರ್, ಇಲ್ಲಿ ಟ್ರಾಫಿಕ್ ಜಾಸ್ತಿ, ಈ ಟ್ರಿಪ್ ಕ್ಯಾನ್ಸಲ್ ಮಾಡ್ಬಿಡಿ' ಅಂತಾನೆ. ಮೊದ್ಲೆ ಯಾಕಪ್ಪ ಹೇಳಿಲ್ಲ, ಅಂದ್ರೆ ಹಲ್ಲುಗಿಂಜುತ್ತಾನೆ! ಕಾದಿದ್ದಕ್ಕೆ ಕ್ಯಾಬೂ ಇಲ್ಲ, ಇತ್ತ ಟೈಮೂ ವೇಸ್ಟು! ಹಲವರಿಗೆ ಈ ಅನುಭವವಾಗಿ, ಮೈಯೆಲ್ಲಾ ಉರಿದುಹೋಗಿರಬಹುದು.[ಬೆಂಗಳೂರಲ್ಲಿ ಭಾರೀ ಗಾಳಿ ಸಹಿತ ಮಳೆ, ವಿದ್ಯುತ್ ವ್ಯತ್ಯಯ]
ಅದಿರಲಿ, ಮೊನ್ನೆ ಶನಿವಾರ (ಮೇ 20) ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಈ ಕ್ಯಾಬ್ ಗಳಿಗೆ ಹಲವರು ಹಿಡಿಶಾಪ ಹಾಕುವಂತೆ ಮಾಡಿತ್ತು. ಇಂದಿರಾ ನಗರಕ್ಕೆ ತೆರಳಬೇಕಿದ್ದ ಭಾಗ್ಯಶ್ರೀ ಕುಲಕರ್ಣಿ ಕ್ಯಾಬ್ ಬುಕ್ ಮಾಡಿದ ಮೇಲೆ, ಅವರಿರುವ ಸ್ಥಳಕ್ಕೆ ಬರುತ್ತೇನೆ ಎಂದ ಚಾಲಕ, ಕೆಲ ಹೊತ್ತಲ್ಲೇ ಫೋನ್ ಮಾಡಿ, ಟ್ರಿಪ್ ಕ್ಯಾನ್ಸಲ್ ಮಾಡುವುದಕ್ಕೆ ಹೇಳಿದ್ದಾನೆ. ಮತ್ತೆ ಬುಕ್ ಮಾಡುವುದಕ್ಕೆ ಹೋದರೆ ಸಾಧ್ಯವಾಗಿಲ್ಲ. ನಂತರ ಎರಡುಪಟ್ಟು ಬೆಲೆ ನೀಡಿ ಆಟೋಕ್ಕೆ ತೆರಳಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಭಾಗ್ಯಶ್ರೀ.
ಹೆಚ್ಚು ಬೇಡಿಕೆ ಇರುವುದರಿಂದ ಕ್ಯಾಬ್ ಗಳು ಸಿಗುತ್ತಿಲ್ಲ ಎಂಬ ಸಂದೇಶ ಯಾವಾಗಲೂ ಈ ಕ್ಯಾಬ್ ಗಳ ಆಪ್ ನಲ್ಲಿ ಕಾಣಿಸುತ್ತದೆ. ಎಂಜಿ ರಸ್ತೆಯಂಥ ಪ್ರಸಿದ್ಧ ರಸ್ತೆಗಳಲ್ಲೇ ಕ್ಯಾಬ್ ಗಳು ಸಿಗೋದು ಕಷ್ಟ ಅಂತಾರೆ ಸಮೀರ್ ಬ್ಯಾನರ್ಜಿ ಎನ್ನುವವರು.
ಕ್ಯಾಬ್ ಗಳ ಸೇವೆ ಇದೇ ರೀತಿ ಸಾಗಿದರೆ, ಮತ್ತೆ ಜನರು ಆಟೋಗಳನ್ನೇ ನೆಚ್ಚಿಕೊಂಡು ಕೂರುವ ಪರಿಸ್ಥಿತಿ ಎದುರಾದರೆ ಅಚ್ಚರಿಯೇನಿಲ್ಲ.












Click it and Unblock the Notifications