ಸಿದ್ದರಾಮಯ್ಯರಿಂದ 80 ಲಕ್ಷ ಉದ್ಯೋಗ ಸೃಷ್ಟಿ ಭರವಸೆ
ಬೆಂಗಳೂರು, ಅ.23: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಕ್ಷೇತ್ರದಲ್ಲಿ 2020ರ ವೇಳೆಗೆ ರಾಜ್ಯದಲ್ಲಿ 80 ಲಕ್ಷ ಉದ್ಯೋಗ ಅವಕಾಶ ಸೃಷ್ಟಿ, ಐಟಿ ಉದ್ಯೋಗಿಗಳ ಮೇಲೆ ಎಸ್ಮಾ ಜಾರಿ, ರಿಯಾಯಿತಿ ದರದಲ್ಲಿ ವಿದ್ಯುತ್, ಜಮೀನು ಹಂಚಿಕೆ, ಕಾರ್ಮಿಕ ಕಾಯ್ದೆಯಿಂದ ಹೊರಗಿಡುವುದು, 2 ಮತ್ತು 3ನೇ ಸ್ತರದ ನಗರಗಳಲ್ಲಿ ಐಟಿ ಬಿಟಿ ವಿಸ್ತರಣೆ ಇವೇ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡ ನೂತನ ಐಟಿ ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಅಗತ್ಯ ಸೇವೆಗಳ ನಿರ್ವಹಣಾ ಸೇವೆ (ಎಸ್ಮಾ) ವ್ಯಾಪ್ತಿಗೆ ತರುವ ಮೂಲಕ ಸಿಬ್ಬಂದಿಯ ಮುಷ್ಕರ ನಿರ್ಬಂಧಿಸುವ, ಒಂದು ಸಾವಿರ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ರಿಯಾಯಿತಿ ಬೆಲೆಗೆ ಒಂದು ಎಕರೆ ಜಮೀನು, ರಿಯಾಯಿತಿ ದರದಲ್ಲಿ ವಿದ್ಯುತ್ ಹಾಗೂ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವ ಬಂಪರ್ ಕೊಡುಗೆಗಳನ್ನು ಒಳಗೊಂಡ ಹೊಸ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ನೀತಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ.
ನಗರದ ಲಲಿತ್ ಅಶೋಕ ಹೋಟೆಲ್ ನಲ್ಲಿ ಮಂಗಳವಾರ ಪ್ರಾರಂಭಗೊಂಡಿರುವ ಮೂರು ದಿನಗಳ 'ಬೆಂಗಳೂರು ಐಟಿಇ ಬಿಜ್'ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಐಟಿ-ಬಿಟಿ ನೀತಿಯನ್ನು ಬಿಡುಗಡೆಗೊಳಿಸಿದರು.
ಈ ಹೊಸ ನೀತಿಯಲ್ಲಿ ಸರ್ಕಾರವು ರಾಜ್ಯದಲ್ಲಿ ಐಟಿ-ಬಿಟಿ, ಅನಿಮೇಷನ್ ಕಂಪನಿಗಳ ಉತ್ತೇಜನಕ್ಕೆ ಕೆಲವು ಕೊಡುಗೆಗಳನ್ನು ಘೋಷಣೆ ಮಾಡಿದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಒದಗಿಸುವ ಕಂಪನಿಗಳಿಗೆ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಜಮೀನು-ಸಹಾಯಧನಗಳನ್ನು ನೀಡುವುದನ್ನು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಐಟಿ-ಬಿಟಿ ಕಂಪನಿಗಳನ್ನು ಕಾರ್ಮಿಕ ಕಾಯ್ದೆಯಿಂದ ಹೊರಗಿಡುವ ತೀರ್ಮಾನ ಕೂಡ ಕೈಗೊಳ್ಳಲಾಗಿದೆ. ನೂತನ ಐಟಿ ನೀತಿ ಹಾಗೂ ಐಟಿಇ ಬಿಜ್ ಸಮ್ಮೇಳನದ ಚಿತ್ರಗಳು ಮುಂದಿದೆ ನೋಡಿ

ಐಟಿ ಕಂಪನಿಗಳು ಎಸ್ಮಾ ವ್ಯಾಪ್ತಿಗೆ
ಅಗತ್ಯ ವಸ್ತುಗಳ ಸೇವೆ(ಎಸ್ಮಾ) ವ್ಯಾಪ್ತಿಗೆ ಐಟಿ-ಬಿಟಿ, ಬಿಪಿಓ ಕಂಪನಿಗಳನ್ನು ಕಾಂಗ್ರೆಸ್ ಸರ್ಕಾರ ತಂದಿದೆ.ಇನ್ಮುಂದೆ ಬಂದ್ ವೇಳೆ ಕಂಪನಿಗಳ ಕೆಲಸಕ್ಕೆ ಅಡ್ಡಿಪಡಿಸಿದರೆ ಕಾಯ್ದೆ ಜಾರಿಗೊಳಿಸಿ ಕಡ್ಡಾಯವಾಗಿ ಸೇವೆಗೆ ಮರಳುವಂತೆ, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ದೊರಕಿದೆ.

ಕಾರ್ಮಿಕ ಕಾಯ್ದೆಯಿಂದ ಹೊರಕ್ಕೆ
ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1946ರ ಕರ್ನಾಟಕ ಕೈಗಾರಿಕಾ ಕಾರ್ಮಿಕ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೊಸ ನೀತಿ ಹೇಳಿದೆ. ಐಟಿ-ಬಿಟಿ ಕಂಪನಿಗಳನ್ನು ಮುಂದಿನ 5 ವರ್ಷಗಳಿಗೆ ಕಾರ್ಮಿಕ ಕಾಯ್ದೆಯಿಂದ ಹೊರಗಿಡಲಾಗಿದೆ. ಇದು ನ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ

ಉದ್ಯೋಗಾವಕಾಶಕ್ಕೆ ಹೆಚ್ಚಿನ ಒತ್ತು
ಒಂದು ಸಾವಿರ ಹೊಸ ಕಂಪನಿಗಳಿಗೆ ಪ್ತ್ರೋತ್ಸಾಹ ಸೇರಿದಂತೆ ಅನಿಮೇಷನ್, ಬಿಪಿಒ ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳಿಗೆ ಪೂರ್ಣ ಸಹಕಾರ. 20 ಲಕ್ಷ ನೇರ ಉದ್ಯೋಗ ಹಾಗೂ 60 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸಲು ಯೋಜನೆ.
ಮೈಸೂರು ಮತ್ತು ಮಂಗಳೂರು ಶೇ 75 ವಿನಾಯತಿ ಸೌಲಭ್ಯ ಸಿಗಲಿದೆ.

ರಿಯಾಯತಿ ದರದಲ್ಲಿ ಜಮೀನು
ಐಟಿ-ಬಿಟಿ ಕಂಪನಿ ಸ್ಥಾಪಿಸುವುದಾಗಿ ಹೇಳಿ ಸರ್ಕಾರದಿಂದ ರಿಯಾಯಿತಿ ಬೆಲೆಗೆ ಜಮೀನು ಪಡೆದು ನಂತರ ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ಹೊಸ ನೀತಿಯಲ್ಲಿ ಹಲವು ಷರತ್ತುಗಳನ್ನು ವಿಧಿಸಿದೆ.
ಯಾವುದೇ ಕಂಪನಿ ಸರ್ಕಾರದಿಂದ ರಿಯಾಯತಿಯಲ್ಲಿ ಜಮೀನು ಪಡೆಯಬೇಕಾದರೆ ಕನಿಷ್ಠ ಒಂದು ಸಾವಿರ ಉದ್ಯೋಗ ಅಥವಾ 2 ವರ್ಷಗಳ ಕಾಲ ಉದ್ಯೋಗಿಗಳಿಗೆ 10 ಸಾವಿರಕ್ಕಿಂತ ಹೆಚ್ಚಿನ ವೇತನ ನೀಡಬೇಕು.
ಹೆಚ್ಚಿನ ಉದ್ಯೋಗ ಸೃಷ್ಟಿಸಿದರೆ ಒಟ್ಟಾರೆ 60 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಈ ಸಬ್ಸಿಡಿ ಮೊತ್ತವನ್ನು ಕಂಪನಿ ಸ್ಥಾಪಿಸುವ ವೇಳೆ ಸರ್ಕಾರದಿಂದ ನೀಡುವ ಜಮೀನು ಬೆಲೆಯಲ್ಲಿ ಕಡಿತಗೊಳಿಸಲಾಗುತ್ತದೆ.

ಮುದ್ರಾಂಕ ಶುಲ್ಕ ವಿನಾಯ್ತಿ
ಮೈಸೂರು ಮತ್ತು ಮಂಗಳೂರಿನಲ್ಲಿ ಕಂಪನಿಗಳ ಸ್ಥಾಪನೆಗೆ ಶೇ.75ರಷ್ಟು ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಉಳಿದ ನಗರಗಳಿಗೆ ಇದು ಅನ್ವಯವಾಗುವುದಿಲ್ಲ. ಅಲ್ಲದೆ, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ಜತೆ ಚರ್ಚಿಸಿ ಆಯೋಗದ ಅನುಮತಿ ಪಡೆದು ರಾಜ್ಯದಲ್ಲಿರುವ ಎಲ್ಲ ಐಟಿ-ಬಿಟಿ-ಬಿಪಿಓ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುವುದಾಗಿ ನೀತಿಯಲ್ಲಿ ಹೇಳಲಾಗಿದೆ.

ಸೌಲಭ್ಯಗಳ ಮಹಾಪೂರ
* ಐಟಿ ಬಿಪಿಒ, ಅನಿಮೇಷನ್, ಕೆಪಿಒಗಳಿಗೆ ಸಾರ್ವಜನಿಕ ಉದ್ಯಮಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿದೆ.
*ಪಿಎಫ್ ಮತ್ತು ಇಎಸ್ ಐ ಮರುಪಾವತಿ: ಎರಡನೇ ಹಾಗೂ ಮೂರನೆ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸಿದಲ್ಲಿ ಆ ಸಂಸ್ಥೆ ಉದ್ಯೋಗಿಗಳಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು ತಲಾ 2 ಸಾವಿರ ರು ಮರು ಪಾವತಿ
* ಐಟಿ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ












Click it and Unblock the Notifications