ಆಹಾರ ಸುರಕ್ಷತೆ ನೋಂದಣಿ ಮಾಡಿಸದ ಇಂದಿರಾ ಕ್ಯಾಂಟೀನ್
ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಡೆಸಲು ಆಹಾರ ಮತ್ತು ಸುರಕ್ಷತಾ ಕಾಯ್ದೆ ಅಡಿ ನೋಂದಣಿಯೇ ಮಾಡಿಸಿಲ್ಲ ಎಂಬ ಸಂಗತಿ ಬಯಲಾಗಿದೆ. ಆತುರಾತುರವಾಗಿ ಕ್ಯಾಂಟೀನ್ ನಿರ್ಮಿಸುವ ಭರದಲ್ಲಿ ಬಿಬಿಎಂಪಿ ಆಹಾರ ಸುರಕ್ಷತೆ ಕಾಯ್ದೆ ಅಡಿ ನೋಂದಣಿ ಮಾಡಿಸುವುದನ್ನೇ ಮರೆತಂತಿದೆ.
ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದು, ನೂರಾ ಒಂದು ಇಂದಿರಾ ಕ್ಯಾಂಟೀನ್ ಒಂದು ವಾರ ನೋಂದಣಿ ಮಾಡಿಸದೆ ಕಾರ್ಯ ನಿರ್ವಹಿಸಿವೆ. ಆಹಾರ ಸುರಕ್ಷತೆ ಕಾಯ್ದೆ ಆಯುಕ್ತ ಮನೋಜ್ ಕುಮಾರ್ ಮೀನಾ ಅವರ ಹೇಳಿಕೆಯನ್ನು ಪ್ರಸ್ತಾಪ ಮಾಡಿರುವ ವರದಿಯಲ್ಲಿ, ಪರವಾನಗಿ ಸದ್ಯದಲ್ಲೇ ಪಡೆಯಲಾಗುವುದು ಎಂದಿದೆಯೇ ಹೊರತು ಈ ಹಿಂದೆ ಏಕೆ ಪಡೆದಿಲ್ಲ ಎಂಬ ಬಗ್ಗೆ ವಿವರಣೆ ಇಲ್ಲ.

ಇನ್ನು ಸರಕಾರದಿಂದ ನಡೆಸುವ ಕ್ಯಾಂಟೀನ್ ಗೆ ಏಕೆ ಪರವಾನಗಿ ಎಂಬ ಧೋರಣೆ ಬಿಬಿಎಂಪಿಗೆ ಇದ್ದಂತಿದೆ. ಬಿಬಿಎಂಪಿ ಅಧಿಕಾರಿಗಳು ಅದೇ ಮಾತನ್ನು ಆಡಿದ್ದಾರೆ. ಖಾಸಗಿ ಹೋಟೆಲ್ ನವರಿಗೆ ಲೈಸೆನ್ಸ್ ಬೇಕು, ಸರಕಾರದ ಕ್ಯಾಂಟೀನ್ ಗೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಇನ್ನು ಒಂದು ವಾರದೊಳಗೆ ಅರ್ಜಿ ಹಾಕ್ತೀವಿ. ಅರವತ್ತು ದಿನದೊಳಗೆ ಲೈಸೆನ್ಸ್ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಒಪ್ಪಿಗೆ ನೀಡದೆ ಆಹಾರ ಪದಾರ್ಥಗಳನ್ನು ಮಾರುವ ಹಾಗಿಲ್ಲ. ಅದರಲ್ಲೂ ಅಡುಗೆ ಒಂದು ಕಡೆ ಮಾಡಿ, ಮಾರಾಟ ಮತ್ತೊಂದು ಕಡೆ ಆದರೆ ಪ್ರತ್ಯೇಕ ಪರವಾನಗಿ ಬೇಕು. ಇನ್ನು ಇಂದಿರಾ ಕ್ಯಾಂಟೀನ್ ವಿಚಾರವಾಗಿ ಲೈಸೆನ್ಸ್ ಒಂದೇ ಸಮಸ್ಯೆಯಲ್ಲ.
ಬಿಬಿಎಂಪಿ 66ನೇ ವಾರ್ಡ್ ನ ಸುಬ್ರಮಣ್ಯನಗರದಲ್ಲಿ ಸೋಮವಾರ ಇಂದಿರಾ ಕ್ಯಾಂಟೀನ್ ತೆಗೆದೇ ಇಲ್ಲ. ಕ್ಯಾಂಟೀನ್ ನ ಮುಂದೆ ಬಂದ್ ಆದ ಬಗ್ಗೆ ಸಣ್ಣ ಒಕ್ಕಣೆ ಇತ್ತು. ಇದನ್ನು ಮೇಯರ್ ಪದ್ಮಾವತಿ ಅವರ ಗಮನಕ್ಕೆ ತಂದ ಮೇಲೆ, ತಕ್ಷಣ ತೆರೆಯುವಂತೆ ಆದೇಶ ಮಾಡಿದರು.
ಯಾಕೆ ಹೀಗೆ ದಿಢೀರ್ ಅಂತ ಬಂದ್ ಮಾಡಲಾಯಿತು ಎಂಬ ಬಗ್ಗೆ ಅಲ್ಲಿನ ಕೌನ್ಸಿಲರ್ ಎಚ್.ಮಂಜುನಾಥ್ ಮಾಹಿತಿ ನೀಡಿದ್ದಾರೆ. "ಭಾನುವಾರ ಸಂಪ್ ನಲ್ಲಿ ತುಂಬ ಕಡಿಮೆ ನೀರಿತ್ತು. ಆರೋಗ್ಯ ನಿರೀಕ್ಷಕರಿಗೆ ಈ ಬಗ್ಗೆ ಹೇಳಿದೆ. ಆದರೆ ಅದಕ್ಕೆ ಅವರೇನೂ ಪ್ರತಿಕ್ರಿಯಿಸಲಿಲ್ಲ. ಮಂಗಳವಾರ ಬೆಳಗ್ಗೆ ಕ್ಯಾಂಟೀನ್ ತೆಗೆದ್ಯೋದು ಬೇಡ ಎಂದು ಸಿಬ್ಬಂದಿ ನಿರ್ಧರಿಸಿದರು" ಎಂದಿದ್ದಾರೆ.












Click it and Unblock the Notifications