ರಾಮನವಮಿ ದಿನದಿಂದ ಜೆಡಿಎಸ್ ಕಚೇರಿ ಕಾರ್ಯಾರಂಭ
ಬೆಂಗಳೂರು, ಮಾ.27: ನೂತನ ಜೆಡಿಎಸ್ ಕಾರ್ಯಾಲಯ ವಿದ್ಯುಕ್ತವಾಗಿ ಆರಂಭಗೊಂಡಿದೆ. ಕೃಷ್ಣ ಫ್ಲೋರ್ಮಿಲ್ಸ್ ಬಳಿಯಲ್ಲಿನ ಕಾರ್ಯಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ರೀರಾಮನವಮಿ ಶುಭದಿನದಂದು ಕಾರ್ಯಕಾರಿ ಸಮಿತಿ ನಡೆಸಲಿದ್ದೇವೆ ಎಂದರು.
ಜೆಡಿಎಸ್ ಕಚೇರಿಗೆ ಜೆ.ಪಿ.ಭವನ ಎಂದು ನಾಮಕರಣ ಮಾಡಲಾಗಿದೆ ಗುರುವಾರದಿಂದ ಅಧಿಕೃತವಾಗಿ ಕಚೇರಿ ಪ್ರಾರಂಭವಾಗಿದೆ. ಆದರೆ, ಶನಿವಾರ ಶ್ರೀರಾಮನವಮಿಯ ಶುಭ ದಿನದಂದು ಕಾರ್ಯಕಾರಿ ಸಮಿತಿ ನಡೆಸಲಿದ್ದೇವೆ ಎಂದು ದೇವೇಗೌಡ ಅವರು ಹೇಳಿದರು.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯಬಂದರೆ ಎರಡನೇ ಬಾರಿಗೆ ಜಯಪ್ರಕಾಶ್ ನಾರಾಯಣ್ ಅವರಿಂದ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿತ್ತು. ಹಾಗಾಗಿ ಅವರ ಹೆಸರನ್ನು ಕಚೇರಿಗೆ ಇಡಲು ನಿರ್ಧರಿಸಲಾಯಿತು ಎಂದು ಜೆ.ಪಿ.ಭವನದ ಹಿಂದಿನ ಕಥೆ ಹೇಳಿದರು.[ಆತ ಕರೆದಾಗ ಹೋಗುತ್ತೇನೆ: ದೇವೇಗೌಡ]
ಉದ್ಘಾಟನೆ ನಂತರ ಮಾತನಾಡಿದ ದೇವೇಗೌಡ ಅವರು, ಜೆಡಿಎಸ್ ನಲ್ಲಿ ಇತ್ತೀಚೆಗೆ ಉಂಟಾಗಿರುವ ಭಿನ್ನಮತ, ಭಿನ್ನಾಭಿಪ್ರಾಯಗಳು ದೂರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಎಲ್ಲರೂ ಒಂದಾಗಿ ಪಕ್ಷ ಕಟ್ಟಬೇಕಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ನೆಲೆನಿಲ್ಲುವಂತೆ ಮಾಡೋಣ ಎಂದು ಹುರಿದುಂಬಿಸಿದರು. ಜೆಡಿಎಸ್ ಹೊಸ ಕಚೇರಿ ಉದ್ಘಾಟನೆ ಚಿತ್ರಗಳು ಇಲ್ಲಿವೆ...

ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಹುಂಡಿ
ಜೆಡಿಎಸ್ ಹೊಸ ಕಚೇರಿ ಉದ್ಘಾಟನೆಗೆ ಜೆಡಿಎಸ್ ಶಾಸಕರು, ಸಂಸದರು, ಮುಖಂಡರು ಪಾಲ್ಗೊಂಡಿದ್ದರು. ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಹುಂಡಿ ಇಟ್ಟು ನೆರವು ಸಂಗ್ರಹಿಸಲು ಯೋಜಿಸಲಾಗಿದೆ. ಹಲವಾರು ಮಂದಿ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಗೌಡರು ಹೇಳಿದರು

ಪಕ್ಷಕ್ಕೆ ದೇಣಿಗೆ ನೀಡಬಯಸುವವರ ಗಮನಕ್ಕೆ
ಪಕ್ಷಕ್ಕೆ ದೇಣಿಗೆ ನೀಡಬಯಸುವವರು ಚೆಕ್, ನಗದು ಅಥವಾ ಇನ್ಯಾವುದೇ ರೀತಿಯಲ್ಲಿ ನೀಡಬಹುದು. ಜೆಡಿಎಸ್ ಕಚೇರಿ ಬಳಿ ಹುಂಡಿಯನ್ನು ಇಡಲಿದ್ದು, ದೇಣಿಗೆ ಸಲ್ಲಿಸಬಹುದು ಎಂದು ದೇವೇಗೌಡ ಅವರು ಹೇಳಿದರು.

ಜಕ್ಕರಾಯನ ಕೆರೆ ನೆನಪಿಸಿಕೊಂಡ ದತ್ತಾ
ಶಾಸಕ ವೈ.ಎಸ್.ವಿ.ದತ್ತಾ ಮಾತನಾಡಿ, ನೂತನ ಕಚೇರಿ ಆರಂಭವಾಗಲಿರುವ ಜಕ್ಕರಾಯನಕೆರೆಗೂ, ಜನತಾದಳಕ್ಕೂ ಅವಿನಾಭಾವ ಸಂಬಂಧವಿದೆ. ಜಕ್ಕರಾಯನ ಕೆರೆ ಹಿಂದಿನ ಹಲವಾರು ಹೋರಾಟಕ್ಕೆ ನೆಲೆಯಾಗಿತ್ತು. ಜೆಡಿಎಸ್ನ ಹೋರಾಟ ಶನಿವಾರ(ಮಾ.28)ದಿಂದ ಆರಂಭವಾಗಲಿದೆ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಜೆಡಿಎಸ್ ಮುಖಂಡರು
ಸಮಾರಂಭದಲ್ಲಿ ಸಂಸದರಾದ ಪುಟ್ಟರಾಜು, ಕುಪೇಂದ್ರರೆಡ್ಡಿ, ಶಾಸಕರಾದ ಚೆಲುವರಾಯಸ್ವಾಮಿ, ಮಧು ಬಂಗಾರಪ್ಪ, ಶಾರದಾ ಪೂರ್ಯಭನಾಯಕ್, ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ನಾರಾಯಣಗೌಡ, ಗೋಪಾಲಯ್ಯ, ಪಟೇಲ್ ಶಿವರಾಂ, ಶರವಣ, ಬಂಡೇಪ್ಪ ಕಾಶ್ಯಂಪೂರ್ ಸೇರಿದಂತೆ ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಹೋಮ ಹವನದ ಬಗ್ಗೆ ಗೌಡರು
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿದ್ದ ಹಳೆ ಜೆಡಿಎಸ್ ಕಚೇರಿಯನ್ನು ವಶಕ್ಕೆ ಪಡೆದಿರುವ ಕಾಂಗ್ರೆಸ್ ಪಕ್ಷ ಅಲ್ಲಿ ಹೋಮ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಅಲ್ಲಿ ನಾನು ವಾಮಾಚಾರ ಮಾಡಿಸಿದ್ದೆ ಎಂಬ ಆರೋಪ ಮಾಡಿದ್ದನ್ನು ನೆನಪಿಸಿಕೊಂಡರು.

'ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ'
ರೇಸ್ಕೋರ್ಸ್ ರಸ್ತೆಯಲ್ಲಿನ ಕಚೇರಿಯಲ್ಲಿ ಕಾಂಗ್ರೆಸ್ನವರು ಈಗ ಹೋಮ ಮಾಡಿಸುತ್ತಿದ್ದಾರೆ. 'ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ, ಅವರಿಗೆ ಒಳ್ಳೆಯದಾಗಲಿ, ನಾನು ತಪ್ಪು ಮಾಡಿರದಿದ್ದರೆ ಅವರಿಗೆ ಶಿಕ್ಷೆಯಾಗಲಿ, ದೇವರು ಕರೆದಾಗ ನಾನು ಹೋಗುತ್ತೇನೆ ಎಂದರು.












Click it and Unblock the Notifications