ಬೆಂಗಳೂರು: ಕೇವಲ 10 ದಿನದಲ್ಲಿ ಸೋಂಕಿತರು, ಮರಣ ಪ್ರಮಾಣ ಎರಡೂ ದುಪ್ಪಟ್ಟು
ಬೆಂಗಳೂರು, ಏಪ್ರಿಲ್ 26:ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ ಕನಿಷ್ಠ 15-16 ಮಂದಿಗೆ ಕೊರೊನಾ ಸೋಂಕು ತಗುಲುತ್ತಿದೆ ಎಂದು ತಿಳಿದುಬಂದಿದೆ.
ಕೆಲವೇ ದಿನಗಳ ಹಿಂದೆ ಪ್ರತಿ ನಿಮಿಷಕ್ಕೆ ಕನಿಷ್ಠ 6-8 ಮಂದಿ ಸೋಂಕಿಗೆ ತುತ್ತಾಗುತ್ತಿದ್ದರು, ಅದೀಗ ದುಪ್ಪಟ್ಟು ಏರಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ.
ಕೇವಲ ಹತ್ತು ದಿನಗಳಲ್ಲಿ ಸೋಂಕಿತರು ಹಾಗೂ ಮರಣ ಪ್ರಮಾಣ ದುಪ್ಪಟ್ಟಾಗಿದೆ. ಸೋಂಕು ಹಬ್ಬದಂತೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆಯಾದರೂ ಈಗಾಗಲೇ ಸೋಂಕಿತರಾಗಿರುವವರನ್ನು ನಿಭಾಯಿಸುವುದು ಕೂಡ ದೊಡ್ಡ ಸವಾಲೇ ಸರಿ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ 7 ಚಿತಾಗಾರಗಳನ್ನು ಕೋವಿಡ್-19 ಮೃತರಿಗೆ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಬಿಬಿಎಂಪಿ ಬೆಂಗಳೂರಿನ 12 ಚಿತಾಗಾರಗಳ ಪೈಕಿ 7 ಚಿತಾಗಾರಗಳನ್ನು ಕೋವಿಡ್-19 ಸೋಂಕಿತ ಮೃತದೇಹಗಳಿಗೆ ಮೀಸಲಿಡಲಾಗಿದೆ. ಈ ಏಳು ಚಿತಾಗಾರಗಳೆಂದರೆ ಮೆಡಿ, ಅಗ್ರಹಾರ, ಕುಡ್ಲು, ಪಣಥೂರ್, ಸುಮ್ಮನಹಳ್ಳಿ, ಪೀಣ್ಯಾ, ಮತ್ತು ಬನಶಂಕರಿ ಶವಾಗಾರಗಳಾಗಿವೆ.
ಟಿಆರ್ ಮಿಲ್ಸ್ ಮತ್ತು ತಾವರೆಕೆರೆಯಲ್ಲಿರುವ ಚಿತಾಗಾರ ಸೇರಿದಂತೆ ಉಳಿದ ಐದು ಚಿತಾಗಾರಗಳು ಸಾಮಾನ್ಯರಿಗೆ ಮೀಸಲಾಗಿರುತ್ತದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ, ಘನತ್ಯಾಜ್ಯ ನಿರ್ವಹಣೆ ವಿಭಾಗ, ಡಿ ರಂದೀಪ್ ಅವರು, ಈ ಏಳು ಕೋವಿಡ್-19 ಗೊತ್ತುಪಡಿಸಿದ ಚಿತಾಗಾರಗಳಿಗೆ ಎಲ್ಲಾ ಆನ್ಲೈನ್ ಬುಕಿಂಗ್ ಅನ್ನು ನಿಷ್ಕ್ರಿಯಗೊಳಿಸುವಂತೆ ಐಟಿ ಸೆಲ್ಗೆ ನಿರ್ದೇಶನ ನೀಡಲಾಗಿದೆ.
ಇದರಿಂದಾಗಿ ಉಂಟಾಗಬಹುದಾದ ಗೊಂದಲವನ್ನು ತಪ್ಪಿಸಬಹುದು ಮತ್ತು ಮೃತರ ಕುಟುಂಬಸ್ಥರು ಶವ ಸಂಸ್ಕಾರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಅಂತೆಯೇ ಕೋವಿಡ್-19 ಮೃತರ ದೇಹಗಳನ್ನು ಆರ್ಎಫ್ಐಡಿ ಹಿಯರ್ಸ್ ವ್ಯಾನ್ಗಳಲ್ಲಿ ಸ್ವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಏಳು ಚಿತಾಗಾರಗಳಲ್ಲಿ ಮಾರ್ಷಲ್ಗಳನ್ನು ಕೂಡ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications