ಐಎಂಎ ಹಗರಣ: ರೋಷನ್ ಬೇಗ್ಗೆ ಜಾಮೀನು ಮಂಜೂರು
ಬೆಂಗಳೂರು, ಡಿಸೆಂಬರ್ 5: ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಕೊನೆಗೂ ನೆಮ್ಮದಿ ದೊರಕಿದೆ. ಬಂಧನದಲ್ಲಿರುವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ರೋಷನ್ ಬೇಗ್ ಅವರು ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರನ್ನು ಬಿಟ್ಟು ಹೊರ ಹೋಗುವಂತಿಲ್ಲ ಮತ್ತು ಸಿಬಿಐ ನಡೆಸುವ ಎಲ್ಲ ತನಿಖೆಗೂ ಸಂಪೂರ್ಣವಾದ ಸಹಕಾರ ನೀಡುವಂತೆ ವಿಶೇಷ ನ್ಯಾಯಾಲಯ ಷರತ್ತು ವಿಧಿಸಿದೆ.
ರೋಷನ್ ಬೇಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಬೇಕು. ಅವರು ತನಿಖೆಗೆ ಸಹಕರಿಸಿದ್ದಾರೆ. ಈಗಾಗಲೇ ತನಿಖೆ ಮುಕ್ತಾಯವಾಗಿದೆ ಎಂದು ರೋಷನ್ ಬೇಗ್ ಅವರ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದಿಸಿದ್ದರು.

ರೋಷನ್ ಬೇಗ್ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಅದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿತು. ರೋಷನ್ ಬೇಗ್ ಅವರು ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಪ್ರಕರಣದ ಬಾಕಿ ಇರುವ ತನಿಖೆಗೂ ಸಹಕಾರ ನೀಡಬೇಕು. ಪ್ರತಿ 2 ಮತ್ತು 4ನೇ ಸೋಮವಾರ ಹಾಗೂ ಸೂಚನೆ ನೀಡಿದಾಗ ಹಾಜರಾಗಬೇಕು. ಮತ್ತೆ ಇದೇ ರೀತಿಯನ್ನು ತಪ್ಪನ್ನು ಮಾಡಬಾರದು. ಅವರು ಪಾಸ್ಪೋರ್ಟ್ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ತಮ್ಮ ವಿಳಾಸ ಬದಲಾದರೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ, ಇಬ್ಬರು ಶೂರಿಟಿ ಪಡೆದು ಜಾಮೀನು ಮಂಜೂರು ಮಾಡಿತು.
2018ರಲ್ಲಿ ನಡೆದ ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ರೋಷನ್ ಬೇಗ್ ಅವರನ್ನು ಸಿಬಿಐ ನವೆಂಬರ್ 22ರಂದು ಬಂಧಿಸಿತ್ತು. ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿಂದ ಸುಮಾರು ನಾನೂರು ಕೋಟಿ ರೂಪಾಯಿ ಪಡೆದ ಆರೋಪ ರೋಷನ್ ಬೇಗ್ ಮೇಲಿದೆ.
ತಮ್ಮೊಂದಿಗೆ ವ್ಯವಹಾರ ನಡೆಸಿದ ರೋಷನ್ ಬೇಗ್ ಅವರ ಮಾತುಕತೆಯ ಆಡಿಯೋವನ್ನು ಖುದ್ದು ಮನ್ಸೂರ್ ಖಾನ್ ನಗರ ಪೊಲೀಸ್ ಆಯುಕ್ತರಿಗೆ ರವಾನೆ ಮಾಡಿದ್ದರು. ಐಎಂಎ ವಂಚನೆ ಪ್ರಕರಣವನ್ನು ವಿಶೇಷ ತನಿಖಾ ತಂಡ ತನಿಖೆಗೆ ಕೈಗೆತ್ತಿಕೊಂಡಿತ್ತು. ಈ ವೇಳೆಯೇ ರೋಷನ್ ಬೇಗ್ ವಿಚಾರಣೆಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮುಂದಾಗಿದ್ದರು. ರೋಷನ್ ಬೇಗ್ ಅಲ್ದಾಣದ ಬಳಿ ವಿಚಾರಣೆಗೆ ಬರಲು ನಿರಾಕರಿಸಿದ್ದರು. ಇದೇ ಹಂತದಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.












Click it and Unblock the Notifications