ಬಿಜೆಪಿಗೆ ಸೇರಿ ಅನುಭವಿಸಿದ್ದೇ ಸಾಕು ಎಂದಿದ್ದೇಕೆ ಎಸ್.ಟಿ.ಸೋಮಶೇಖರ್?
ಬೆಂಗಳೂರು, ಡಿಸೆಂಬರ್.08: ಕಾಂಗ್ರೆಸ್ ನಿಂದ ಹೊರ ಬಂದಿದ್ದು ಆಯಿತು. ಬಿಜೆಪಿ ಸೇರ್ಪಡೆ ಆಗಿದ್ದು ಆಯಿತು. ಕೊನೆಗೆ ಶಾಸಕ ಸ್ಥಾನದಿಂದ ಅನರ್ಹಗೊಂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಆಗಿದೆ. ಇದರ ಮಧ್ಯೆ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ನೀಡಿದ ಮತ್ತೊಂದು ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಸೃಷ್ಟಿಸಿದೆ.
ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ತಾವು ಅನುಭವಿಸಿದ ನೋವನ್ನು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮನ ಬಿಚ್ಚಿ ಹೇಳಿಕೊಂಡಿದ್ದಾರೆ. ಡಿಸೆಂಬರ್.05ರಂದು ನಡೆದ ಮತದಾನ ಪ್ರಕ್ರಿಯೆಗೆ ಡಿಸೆಂಬರ್.09ರಂದು ಜನರೇ ಉತ್ತರ ನೀಡಲಿದ್ದಾರೆ. ಆದರೆ, ಇದರ ಮಧ್ಯೆ ತಾವು ಅನುಭವಿಸಿದ ಸಂಕಟವನ್ನು ತೆರೆದಿಟ್ಟಿದ್ದಾರೆ.
ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು?
ಈಗಾಗಲೇ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿಗೆ ಹಾರಿರುವ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್, ವಿರೋಧ ಪಕ್ಷದ ವಿರುದ್ಧ ಗುಡುಗಿದ್ದಾರೆ. ಉಪ ಚುನಾವಣಾ ಪ್ರಚಾರದ ಬಳಿಕ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸೋಮಶೇಖರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಡಿಸೆಂಬರ್.09ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಮತ್ತೊಮ್ಮ ವಿರೋಧ ಪಕ್ಷಗಳ ವಿರುದ್ಧ ಹರಿ ಹಾಯ್ದಿದ್ದಾರೆ.
ನಮ್ಮ ಸಂಪರ್ಕದಲ್ಲಿ 8-10 ಕೈ-ದಳ ಶಾಸಕರು!
ಬೆಂಗಳೂರಿನ ಹೊರವಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಕೆಲವರಿಂದ ನಾಯಕರು ರೋಸಿ ಹೋಗಿದ್ದಾರೆ. 8 ರಿಂದ 10 ಮಂದಿ ಶಾಸಕರು ಈಗಲೇ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳಲು ತಯಾರಾಗಿದ್ದಾರೆ. ಆದರೆ, ಕಳೆದ ನಾಲ್ಕು ತಿಂಗಳಲ್ಲಿ ನಾವು ಅನುಭವಿಸಿದ್ದೇ ಸಾಕು. ಅವರು ಮತ್ತೆ ಅನುಭವಿಸುವುದು ಬೇಡ ಎಂದು ಸೋಮಶೇಖರ್ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಡುವೆ ಒಳಒಪ್ಪಂದ!
ಕಾಂಗ್ರೆಸ್ ನಿಂದ ನಾಲ್ಕು ಹಾಗೂ ಜೆಡಿಎಸ್ ನಿಂದ ಮೂವರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅವರೆಲ್ಲ ನಮ್ಮ ಜೊತೆಗೆ ಟಚ್ ನಲ್ಲಿದ್ದಾರೆ. ಆದರೆ, ನಾವು ಅನುಭವಿಸಿದ ನೋವು-ಸಂಕಟವನ್ನು ಅನುಭವಿಸಲು ಸಿದ್ಧರಿರಬೇಕು ಎಂದು ಸೋಮಶೇಖರ್ ಹೇಳಿದ್ದಾರೆ. ಅಲ್ಲದೇ, ನಾವು ಬಿಜೆಪಿ ಸೇರಿದ್ದಕ್ಕೆ ನಮ್ಮ ಕ್ಷೇತ್ರದಲ್ಲೇ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪ್ರಚಾರ ಮಾಡಲಾಗಿದೆ. ಇದರಿಂದ ನಾವು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಳಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನ ಬಳಿ ಆಡಿಯೋ ದಾಖಲೆ ಇದ್ದು ಸಮಯ ಬಂದಾಗ ಖಂಡಿತ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಈಶ್ವರಪ್ಪ ಮಾತನಿಲ್ಲೂ ಅರ್ಥ ಇದೆಯಾ?
ವಿಧಾನಸಭೆ ಉಪ ಚುನಾವಣೆ ಬಳಿಕ ರಾಜಕೀಯ ಚಿತ್ರಣ ಬದಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಪ್ರೀಂಕೋರ್ಟ್ ನಲ್ಲಿ ಹೇಳಿದ್ದನ್ನೇ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಇತ್ತೀಚಿಗಷ್ಟೇ ಮಾತನಾಡಿದ್ದ ಈಶ್ವರಪ್ಪ, ಗೆದ್ದ ಶಾಸಕರಿಗಷ್ಟೇ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದರು.
ಕಾಂಗ್ರೆಸ್ ಬಿಟ್ಟಿದ್ದಕ್ಕೆ ಬದುಕಿದೆವು ಎಂದ ಸೋಮಶೇಖರ್
ನಾವು ಕಾಂಗ್ರೆಸ್ ನಲ್ಲಿದ್ದರೆ ಸಮಾಧಿ ಆಗುತ್ತಿದ್ದೆವೇನೋ? ಆದರೆ, ಪಕ್ಷದಿಂದ ಹೊರಬಂದು ಸಮಾಧಿ ಆಗೋದರಿಂದ ತಪ್ಪಿಸಿಕೊಂಡಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಪಕ್ಷ ಬೆಳೆಸಪುವ ಉದ್ದೇಶ ಇರಲಿಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿದರು. ನಾನು ಕಾಂಗ್ರೆಸ್ ನಲ್ಲಿದ್ದಾಗ ನಾಯಕತ್ವಕ್ಕಾಗಿ ಸ್ಪರ್ಧೆ ಮಾಡಲಿಲ್ಲ. ನಾನೇನೂ ಒಕ್ಕಲಿಗ ನಾಯಕತ್ವಕ್ಕಾಗಿ ಅಶೋಕ್ ಅವರಿಗೆ ಕಾಂಪಿಟೇಶನ್ ಮಾಡಲಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಗಮನವಾಗಿದ್ದು, ಮಂತ್ರಿ ಆಸೆಯಿಂದ ಬಿಜೆಪಿ ಸೇರಿಲ್ಲ ಎಂದು ಸೋಮಶೇಖರ್ ಸ್ಪಷ್ಟಪಡಿಸಿದ್ದಾರು.