ಜಾತಿಯಿಂದ ಜಂಗಮನಾದರೂ ನಾನು ಬಸವಣ್ಣನ ಪಾರ್ಟಿ: ಚಂಪಾ
ಬೆಂಗಳೂರು, ನವೆಂಬರ್ 8: "ಜಾತಿಯಿಂದ ನಾನೊಬ್ಬ ಜಂಗಮ, ರಂಭಾಪುರಿ ಪೀಠದಲ್ಲಿ ಬರುವವನು. ಆದರೂ ನಾನು ಬಸವಣ್ಣನ ಪಾರ್ಟಿ" ಎಂದು ಸಾಹಿತಿ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಚಂಪಾ ಹಲವು ಪ್ರಶ್ನೆಗಳಿಗೆ ಖುಲ್ಲಂ ಖುಲ್ಲಾ ಉತ್ತರಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂಪಾ, "ನಾನು ಜನಪರ ಮೌಲ್ಯ ಹಾಗೂ ಕನ್ನಡದ ಬಗ್ಗೆ ಹೋರಾಟ ನಡೆಸಿಕೊಂಡು ಬಂದವನು. ಹಾಗಾಗಿ ನಾನು ಬಸವಣ್ಣನವರ ಪಾರ್ಟಿ ಎಂದು ಹೇಳುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬ್ಯಾಟಿಂಗ್ ಮಾಡಿದರು.
ಇನ್ನು ಧರ್ಮ ಹಾಗೂ ಜಾತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ರಜೆಗಳನ್ನು ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಈ ಸಂವಾದದಲ್ಲಿ ಕನ್ನಡದ ಬಗ್ಗೆ ಸೇರಿದಂತೆ ಹಲವು ಪ್ರಶ್ನೆಗಳಿಗೆ ಪಟ-ಒಟನೆ ಉತ್ತರಿಸಿದರು. ಚಂಪಾ ಜತೆಗಿನ ಪ್ರಶ್ನೋತ್ತರ ಸಂವಾದ ಈ ಕೆಳಗಿನಂತಿದೆ.

ಟಿಪ್ಪು ಜಯಂತಿ ಆಚರಣೆ ಸರಿಯೇ ನಿಮ್ಮ ಅಭಿಪ್ರಾಯವೇನು?
ಚಂಪಾ ಉತ್ತರ: ಟಿಪ್ಪು ತನ್ನ ಸ್ವಂತಿಕೆಗೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಎನ್ನುವುದು ಕೆಲವರ ವಾದ, ಟಿಪ್ಪು ಒಬ್ಬ ದೇಶಕ್ಕಾಗಿ ಹೋರಾಟ ಮಾಡಿದ್ದ ಮಹಾನ್ ವ್ಯಕ್ತಿಯಾಗಿದ್ದನೆ ಎನ್ನುವುದು ಮತ್ತೊಂದು ಗುಂಪಿನ ವಾದ. ಆದರೆ, ನಾನು ಇತಿಹಾಸ ತಜ್ಞ ಅಲ್ಲ. ನಾನು ಶಾಲೆಯಲ್ಲಿ ಇತಿಹಾಸದದಲ್ಲಿ ಓದಿರುವಂತೆ ಟಿಪ್ಪು ಹಿಂದೂ ವಿರೋಧಿಯಾಗಿದ್ದ ಹಾಗೂ ಪ್ರಟಿಷರ ವಿರುದ್ಧ ಹೋರಾಡಿದ್ದ ಎನ್ನುವುದನ್ನು ಓದಿದ್ದೆ ಅಷ್ಟೇ. ಹಾಗಾಗಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ನನ್ನಲ್ಲಿ ಖಚಿತ ಮಾಹಿತಿ ಇಲ್ಲ ಎಂದರು.

ಧರ್ಮ ಹಾಗೂ ಜಾತಿಗೆ ಸರ್ಕಾರಿ ರಜೆ ಬಗ್ಗೆ ಏನು ಹೇಳ್ತೀರಿ?
ಉತ್ತರ: ನಮಗೆ ಸ್ವಾತಂತ್ರ ಸಿಕ್ಕ ದಿನ ಅಗಸ್ಟ್ 15, ಗಣರಾಜ್ಯೋತ್ಸವ ಜನವರಿ 26, ಅಕ್ಟೋಬರ್ 2 ಗಾಂಧಿ ಜಯಂತಿ, ಕನ್ನಡ ದಿನವಾದ ನವೆಂಬರ್ 1 ಹಾಗೂ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ, ಈ ಐದು ದಿನಗಳಿಗೆ ಸರ್ಕಾರಿ ರಜೆ ಕೊಡಬೇಕು ಹೊರತು ಧರ್ಮ ಹಾಗೂ ಜಾತಿಗೆ ಸರ್ಕಾರಿ ರಜೆಗಳು ಬೇಡ ಎಂದು ಉತ್ತರಿಸಿದರು.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕಾ?
ಚಂಪಾ ಉತ್ತರ: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಕೂಗು ನಿನ್ನೆ ಮೊನ್ನೆಯದಲ್ಲ. ರಾಜ್ಯಕ್ಕೆ ಪತ್ಯೇಕ ಧ್ವಜ ಬೇಕು ಎನ್ನುವ ಕೂಗು ಈ ಹಿಂದೆ ಎದ್ದಿತ್ತು. ಇದೀಗ ಮತ್ತೆ ಎದ್ದಿದೆ. ಒಂದು ರಾಜ್ಯ ತನ್ನ ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪಿಲ್ಲ. ಕರ್ನಾಟಕಕ್ಕೆ ಪ್ರತ್ಯೇಕ ಧ್ವಜಬೇಕು. ಆದರೆ, ರಾಷ್ಟ್ರ ಧ್ವಜಕ್ಕಿಂತ ಸ್ವಲ್ಪ ಕೆಳಗೆ ಇರಬೇಕು. ರಾಷ್ಟ್ರ ಧ್ವಜ ಇಷ್ಟೇ ಎತ್ತರದಲ್ಲಿ ಹಾರಾಡಬೇಕು ಎನ್ನುವುದು ಇದೇ. ಆದ್ದರಿಂದ ರಾಷ್ಟ್ರ ಧ್ವಜದ ಸರಿಸಮಾನವಾಗಿ ರಾಜ್ಯ ಧ್ವಜಗಳು ಹಾರಾಡಬಾರದು ಎಂದರು.

ಉತ್ತರ ಕರ್ನಾಟಕ್ಕೆ ಪ್ರತ್ಯೇಕ ರಾಜ್ಯ ಬೇಕೋ ಬೇಡವೋ?
ಉತ್ತರ: ನೀವೂ ಒಬ್ಬ ಉತ್ತರ ಕರ್ನಾಟಕವಾಗಿದ್ದರಿಂದ ನಿಮಗೆ ಪ್ರತ್ಯೇಕ ರಾಜ್ಯ ಬೇಕಾ ಎನ್ನುವ ಪ್ರಶ್ನೆ ಉತ್ತರಿಸಿದ ಚಂಪಾ, ಅಭಿವೃದ್ಧಿಯ ಅಭಿರುಚಿಗಳು ಸರಿಯಾಗಿ ಸಮಾನವಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಉತ್ತರ ಕರ್ನಾಟಕ್ಕೆ ಪ್ರತ್ಯೇಕ ರಾಜ್ಯ ಕೂಗು ಕೇಳಿಬಂದಿದೆ, ನಾವೆಲ್ಲ ಕನ್ನಡಿಗರಾಗಿದ್ದರಿಂದ ಬೇರೆ-ಬೇರೆಯಾಗುವುದು ಬೇಡ. ಕನ್ನಡಿಗರು ಒಂದಾಗಿರಬೇಕು ಎಂದು ಹೇಳುವ ಮೂಲಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.

ಈ ಸರ್ಕಾರ ಸಾಹಿತಿಗಳಿಗೆ ತಾರತಮ್ಮ ಮಾಡುತ್ತಿದೆ ಅಲ್ಲವೇ?
ಉತ್ತರ: ತಾರತಮ್ಮ ಏನು ಇಲ್ಲ. ಒಂದು ಪಕ್ಷದ ಪ್ರಣಾಳಿಕೆಗೆ ತುತ್ತೂರಿ ಊದುವ ಸಾಹಿತಿಗಳಿಗೆ ಎಲ್ಲಾ ಸೌಕರ್ಯಗಳು ಲಭಿಸಲಿವೆ. ಸರ್ಕಾರದ ವಿರುದ್ಧ ಇರುವ ಸಾಹಿತಿಗಳಿಗೆ ಯಾವುದೇ ಸೌಲಭ್ಯಗಳು ಸಿಗಲ್ಲ. ಇದನ್ನು ಎಲ್ಲಾ ಸರ್ಕಾರಗಳು ಅನುಸರಿಸಿಕೊಂಡು ಬಂದಿದೆ. ಇಷ್ಟು ಚಂಪಾ ಸಂವಾದದಲ್ಲಿ ಕೇಳಿ ಬಂದ ಪ್ರಮುಖ ಪ್ರಶ್ನೋತ್ತರಗಳು.

ಸಿದ್ದರಾಮಯ್ಯನವರ ಸರ್ಕಾರ ಕನ್ನಡ ಸ್ನೇಹಿ ಸರ್ಕಾರ
ಕನ್ನಡದ ಏಳಿಗೆ, ಕನ್ನಡಕ್ಕೆ ಆಧ್ಯತೆ ನೀಡುವ ಕನ್ನಡ ಸ್ನೇಹಿ ಸರ್ಕಾರಗಳು ಇಲ್ಲಿಯವರೆಗೆ ಬಂದಿಲ್ಲ ಹಾಗೂ ನೋಡಿಲ್ಲ. ಸಧ್ಯ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡ ಸ್ನೇಹಿ ಸರ್ಕಾರವಾಗಿದೆ. ಕನ್ನಡ ಏಳಿಗೆಗೆ ಸದಾ ಸಿದ್ಧವಾಗಿ ನಿಂತಿದೆ. ಕಾರಣ, ಸಿಎಂ ಕುರ್ಚಿಯಲ್ಲಿರುವ ಸಿದ್ದರಾಮಯ್ಯ ಅವರು ಕನ್ನಡ ಪರ ಹೋರಾಟದಿಂದ ಬಂದವರು. ಅಷ್ಟೇ ಅಲ್ಲದೇ ಅವರು ಗೋಕಾಕ್ ಚಳುವಳಿಯಲ್ಲೂ ಸಹ ಭಾಗವಹಿಸಿದ್ದರಿಂದ. ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡ ಸ್ನೇಹಿ ಸರ್ಕಾರವಾಗಿದೆ ಎಂದು ಚಂಪಾ ಅಭಿಪ್ರಾಯಪಟ್ಟರು.












Click it and Unblock the Notifications