ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆ
ಬೆಂಗಳೂರು, ನವೆಂಬರ್ 18 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆ ಮಾಡಲು ಸೋಮವಾರ ಕಡೆಯ ದಿನವಾಗಿತ್ತು. ಉಪ ಚುನಾವಣೆಗೆ ಒಟ್ಟಾರೆ 27 ಅಭ್ಯರ್ಥಿಗಳಿಂದ 33 ನಾಮಪತ್ರ ಸಲ್ಲಿಕೆಯಾಗಿದೆ.
ಹಲವು ಕಾರಣಗಳಿಗೆ ಹೊಸಕೋಟೆ ಉಪ ಚುನಾವಣೆ ಕುತೂಹಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರ ಸೂಚನೆಗಳನ್ನು ಧಿಕ್ಕರಿಸಿ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರ ನಡೆ ಪಕ್ಷಕ್ಕೆ ಬಿಸಿತುಪ್ಪವಾಗಿದೆ.
ಬಿಜೆಪಿಯಿಂದ ಎಂಟಿಬಿ ನಾಗರಾಜ್, ಕಾಂಗ್ರೆಸ್ನಿಂದ ಪದ್ಮಾವತಿ ಸುರೇಶ್ ಅಭ್ಯರ್ಥಿಗಳು. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ಮಾತಿಗೆ ಶರತ್ ಬಚ್ಚೇಗೌಡರು ಬೆಲೆ ಕೊಟ್ಟಿಲ್ಲ.
ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ನವೆಂಬರ್ 19 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 21 ಕೊನೆಯ ದಿನವಾಗಿದೆ. ಉಪ ಚುನಾವಣೆ ಕಣ ಕುತೂಹಲಕ್ಕೆ ಕಾರಣವಾಗಿದೆ.

ನಾಮಪತ್ರ ವಾಪಸ್ ಪಡೆಯಲ್ಲ
"ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಕೆ ಮಾಡಿರುವ ನಾಮಪತ್ರವನ್ನು ವಾಪಸ್ ಪಡೆಯುವುದಿಲ್ಲ" ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನವೆಂಬರ್ 21 ಕೊನೆಯ ದಿನವಾಗಿದೆ.

ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ
"ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿರುವಾಗ ಮತದಾರರು ಆಶೀರ್ವಾದ ಮಾಡಿದರು. ಈಗ ಟಿಕೆಟ್ ನೀಡಿದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕಾರ್ಯಕರ್ತರು ಒತ್ತಾಯ ಮಾಡಿದರು. ಹೀಗಾಗಿ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲ್ಲ" ಎಂದು ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದರು.

ದ್ವೇಷದ ರಾಜಕಾರಣ
"ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಮಗ ಎಂದು ಭಾವಿಸಿದ್ದರು. ಆದರೆ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ದ್ವೇಷದ ರಾಜಕಾರಣದಿಂದಾಗಿ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಯಡಿಯೂರಪ್ಪ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ" ಎಂದು ಶರತ್ ಬಚ್ಚೇಗೌಡ ಹೇಳಿದರು.

ಕುತೂಹಲದ ಕಣವಾದ ಹೊಸಕೋಟೆ
ಹೊಸಕೋಟೆ ಉಪ ಚುನಾವಣೆ ಕಣ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಶರತ್ ಬಚ್ಚೇಗೌಡಗೆ ಬೆಂಬಲ ಕೊಟ್ಟಿದೆ. 2018ರ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಬಿಜೆಪಿಯಿಂದ ಕಣಕ್ಕಿಳಿದು ಎಂಟಿಬಿ ನಾಗರಾಜ್ ವಿರುದ್ಧ 7,597 ಮತಗಳ ಅಂತರದಲ್ಲಿ ಸೋತಿದ್ದರು.












Click it and Unblock the Notifications