ಮೋದಿಯನ್ನು ಭೇಟಿ ಆಗಲ್ಲ, ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲ್ಲ ಎಂದ ಕುಮಾರಸ್ವಾಮಿ
ಬೆಂಗಳೂರು, ಜನವರಿ 16 : ವಿರೋಧ ಪಕ್ಷವಾದ ಬಿಜೆಪಿಯು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಹೀಗೆ ಉಪದ್ರವ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಆರೋಪ ಮಾಡಿದ್ದಾರೆ. ಆದರೆ ಸದ್ಯದ ಬಿಕ್ಕಟ್ಟಿನಿಂದ ಶೀಘ್ರದಲ್ಲೇ ಹೊರಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಪೂರ್ವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಅವರು, ನರೇಂದ್ರ ಮೋದಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ ಎಂಬ ವರದಿಯನ್ನು ಹಾಗೂ ಕಾಂಗ್ರೆಸ್ ನ ನಾಲ್ವರು ಸಂಪುಟ ಸಚಿವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯನ್ನು ಸಹ ನಿರಾಕರಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಭದ್ರವಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಒಟ್ಟಾಗಿ ತೆರಳಲಿದ್ದೇವೆ ಎಂದರು. ಮಂಗಳವಾರದಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ. "ಮೋದಿ ಅವರನ್ನು ಭೇಟಿ ಮಾಡುವ ಯೋಜನೆ ಇಲ್ಲ. ಕಾಂಗ್ರೆಸ್ ನ ಯಾವುದೇ ಸಚಿವರು ರಾಜೀನಾಮೆ ನೀಡುವುದಿಲ್ಲ. ಜೆಡಿಎಸ್ ಅಥವಾ ಕಾಂಗ್ರೆಸ್ ನ ಯಾವುದೇ ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸೇರುವ ಸಾಧ್ಯತೆ ಇಲ್ಲ" ಎಂದು ಹೇಳಿದ್ದಾರೆ.

ಒಂದೆರಡು ದಿನಗಳಲ್ಲಿ ಬಿಕ್ಕಟ್ಟು ಬಗೆಹರಿಯಲಿದೆ
ಈ ಎಲ್ಲ ಉಪದ್ರವವನ್ನು ಬಿಜೆಪಿ ಸೃಷ್ಟಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಥಿರವಾಗಿದೆ ಹಾಗೂ ಬಲವಾಗಿದೆ. ಬಿಜೆಪಿ ಒಡ್ಡುವ ಆಮಿಷಗಳಿಗೆ ಜೆಡಿಎಸ್ ನ ಶಾಸಕರು ಬಲಿಯಾಗುವುದಿಲ್ಲ. ಈಗಿನ ಬಿಕ್ಕಟ್ಟು ಒಂದೆರಡು ದಿನಗಳಲ್ಲಿ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೂ ನಾವು ಒಟ್ಟಿಗಿರುತ್ತೇವೆ
ನನ್ನ ಸರಕಾರ ಸ್ಥಿರವಾಗಿದೆ. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿವೆ. ಲೋಕಸಭೆ ಚುನಾವಣೆಯಲ್ಲಿ ಕೂಡ ನಾವು ಒಟ್ಟಿಗಿರುತ್ತೇವೆ. ಈ ದೇಶದ ಜನರೆದುರು ಬಿಜೆಪಿ ಏನೆಂದು ತೋರಿಸಿಕೊಟ್ಟಿದೆ. ಹೇಗಾದರೂ ಅಧಿಕಾರಕ್ಕೆ ಏರಬೇಕು ಎಂಬ ಬಿಜೆಪಿ ಮನಸ್ಥಿತಿ ಗೊತ್ತಾಗಿದೆ. ಜನರೆದುರು ತಾವೇ ಮೂರ್ಖರಾಗಿದ್ದಾರೆ. ಜೆಡಿಎಸ್ ಶಾಸಕರಿಗೆ ದೊಡ್ಡ ಮೊತ್ತದ ಆಮಿಷ ಒಡ್ಡುವ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ರೆಸಾರ್ಟ್ ನಲ್ಲಿ ಶಾಸಕರನ್ನು ಇರಿಸಿಕೊಂಡಿದ್ದೇಕೆ?
ರಾಜ್ಯದ ನೂರಾ ಅರವತ್ತೈದು ತಾಲೂಕಿನಲ್ಲಿ ಗಂಭೀರ ಬರ ಪರಿಸ್ಥಿತಿ ಇರುವಾಗ ನೂರಾನಾಲ್ಕು ಶಾಸಕರನ್ನು ಹರಿಯಾಣದ ಗುರುಗ್ರಾಮದಲ್ಲಿರುವ ರೆಸಾರ್ಟ್ ನಲ್ಲಿ ಭಾರತೀಯ ಜನತಾ ಪಕ್ಷ ಇರಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ತಪ್ಪು ಮಾಹಿತಿಗಳನ್ನು ಮಾಧ್ಯಮಗಳ ಮೂಲಕ ನೀಡುತ್ತಾ ಬಿಜೆಪಿಯು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಹಾಗಿದ್ದರೆ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ವಿಧಾನಸಭೆಯ 224 ಸದಸ್ಯ ಬಲದಲ್ಲಿ ಸ್ಪೀಕರ್ ಹೊರತು ಪಡಿಸಿ, ಕಾಂಗ್ರೆಸ್ ನ 79, ಬಿಜೆಪಿಯ 104 ಹಾಗೂ ಜೆಡಿಎಸ್ ನ 37 ಶಾಸಕರಿದ್ದಾರೆ. ಇನ್ನು ಬಿಎಸ್ ಪಿ, ಕೆಪಿಜೆಪಿ ಹಾಗೂ ಪಕ್ಷೇತರರಾಗಿ ತಲಾ ಒಬ್ಬೊಬ್ಬರು ಶಾಸಕರಿದ್ದಾರೆ.












Click it and Unblock the Notifications