ರಾಜ್ಯಸಭೆಗೆ ನಾನು ಹೋಗಲ್ಲ, ನಮ್ಮ ಭರವಸೆ ಸಿಎಂ ಈಡೇರಿಸುತ್ತಾರೆ- ವಿಶ್ವನಾಥ್
ಬೆಂಗಳೂರು, ಜೂನ್ 4: ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ರೋಚಕ ಬೆಳವಣಿಗೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಪೈಕಿ ಬಿಜೆಪಿ ಎರಡು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ತಲಾ ಒಂದೊಂದು ಸ್ಥಾನ ಖಚಿತ ಎನ್ನಲಾಗಿದೆ.
ಈ ಕಡೆ ಬಿಜೆಪಿಯಲ್ಲಿ ರಾಜ್ಯಸಭೆ ಟಿಕೆಟ್ಗೆ ಭಾರಿ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಜೆಡಿಎಸ್ ಬಿಟ್ಟು ಬಿಜೆಪಿ ಪಕ್ಷ ಸೇರಿ ವಿಧಾನಸಭೆ ಉಪಚುನಾವಣೆಯಲ್ಲಿ ಸೋಲು ಕಂಡಿದ್ದ ಹುಣುಸೂರ್ ಮಾಜಿ ಶಾಸಕ ಎಚ್ ವಿಶ್ವನಾಥ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಿದ್ದಾರೆ ಎಂಬ ಚರ್ಚೆಯಾಗ್ತಿದೆ.
ಈಗಾಗಲೇ ಪ್ರಭಾಕರ್ ಕೊರೆ, ರಮೇಶ್ ಕತ್ತಿ ಸೇರಿದಂತೆ ಹಲವರು ಹೆಸರು ರಾಜ್ಯಸಭೆ ಚುನಾವಣೆಗೆ ಮುಂಚೂಣಿಯಲ್ಲಿದೆ. ಈ ಬಗ್ಗೆ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

ನಾನು ರಾಜ್ಯಸಭೆಗೆ ಸ್ಪರ್ಧಿ ಅಲ್ಲ
'ರಾಜ್ಯಸಭೆಗೆ ಬೇರೆ ಜನ ಇದ್ದಾರೆ. ಬಹಳಷ್ಟು ಜನ ಪ್ರಯತ್ನ ಮಾಡ್ತಿದ್ದಾರೆ. ಪ್ರಭಾಕರ ಕೋರೆಯವರು ಇದ್ದಾರೆ, ರಮೇಶ್ ಕತ್ತಿ ಪ್ರಯತ್ನ ಮಾಡ್ತಿದ್ದಾರೆ. ನನ್ನ ಗಮನ ಏನಿದ್ದರೂ ರಾಜ್ಯ ರಾಜಕಾರಣ, ವಿಧಾನ ಪರಿಷತ್'' ಎಂದು ಎಚ್ ವಿಶ್ವನಾಥ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಮ್ಮೆಲ್ಲರಿಗೂ ಅವಕಾಶ ಕೊಡ್ತಾರೆ
''ಎಲ್ಲರಿಗೂ ಅವಕಾಶ ಸಿಗುತ್ತದೆ, ನನಗೆ, ಎಂಟಿಬಿ ನಾಗರಾಜ್, ಶಂಕರ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಎಲ್ಲರಿಗೂ ಸಿಗುತ್ತದೆ. ರಾಜ್ಯಸಭೆಗೆ ನಾನು ಎಂದೂ ಅಪೇಕ್ಷೆ ಪಟ್ಟಿಲ್ಲ. ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ, ಮತ್ತೆ ರಾಜ್ಯಸಭೆಗೆ ಹೋಗುವುದರಲ್ಲಿ ಅರ್ಥ ಇಲ್ಲ.

ಯಡಿಯೂರಪ್ಪ ಮೇಲೆ ನಂಬಿಕೆ ಇದೆ
''ವಿಧಾನ ಪರಿಷತ್ ಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ರಾಜ್ಯದಲ್ಲಿ ನಾಲಗೆಯ ಮೇಲೆ ನಡೆಯುವ ನಾಯಕ ಇದ್ದರೆ ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ಮೇಲೆ ನಾವೆಲ್ಲರೂ ನಂಬಿಕೆ ಇಟ್ಟಿದ್ದು ನಿಜ. ನಮಗೆ ಕೊಟ್ಟ ಭರವಸೆಯನ್ನು ಸಿಎಂ ಈಡೇರಿಸುತ್ತಾರೆ. ಸಿಎಂ ಅವರನ್ನು ನಾವು ಭೇಟಿ ಮಾಡ್ತಾನೇ ಇರುತ್ತೇವೆ'' ಎಂದಿದ್ದಾರೆ.

ಕೊರೊನಾ ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದಾರೆ
''ಸಮ್ಮಿಶ್ರ ಸರ್ಕಾರ ಏನಾದರೂ ಈಗ ಆಡಳಿತದಲ್ಲಿ ಇರುತ್ತಿರುತ್ತಿದ್ದರೆ. ಈಗ ಕೋವಿಡ್ ಕಾಲದಲ್ಲಿ 50 ಸಾವಿರ ಜನ ಸತ್ತಿರುತ್ತಿದ್ದರು. ಯಾಕೆಂದರೆ ಸಮನ್ವಯ ಇಲ್ಲದೇ ಇದ್ದ ಸಮ್ಮಿಶ್ರ ಸರ್ಕಾರ ಇತ್ತು. ದೊಡ್ಡ ಅನಾಹುತಕ್ಕೆ ಕಾರಣ ಆಗುವುದು ತಪ್ಪಿತು. ಸಮ್ಮಿಶ್ರ ಸರ್ಕಾರ ಇರುತ್ತಿದ್ದರೆ ಕೇಂದ್ರ ಸರ್ಕಾರದ ಯಾವುದೇ ಆದೇಶ ಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿದ್ದರು'' ಎಂದು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications