ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಂಪ್ ತೆರವು ಕಾರ್ಯಾಚರಣೆ ವಾಹನ ಸವಾರರು ನಿರಾಳ
ಬೆಂಗಳೂರು, ಜುಲೈ 11: ಬೆಂಗಳೂರು-ಮೈಸೂರು ಮಧ್ಯೆ 10 ಪಥಗಳ ಹೆದ್ದಾರಿ ಸಿದ್ಧವಾಗಲು ತಿಂಗಳು ಬೇಕಾಗುತ್ತದೆ. ಸದ್ಯದ ಪರಿಸ್ಥಿಯಲ್ಲಿ ಎರಡು ನಗರಗಳ ಪ್ರಯಾಣಿಸುವವರು ನಾಲ್ಕು-ಪಥದ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಕೆಲವು ಕಡೆ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ನಾಲ್ಕು-ಪಥದ ಹೆದ್ದಾರಿಯಲ್ಲಿರುವ ಸ್ಪೀಡ್ ಬ್ರೇಕರ್ ಅಥವಾ ಹಂಪ್ಗಳು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ.
ಹೆದ್ದಾರಿಯಲ್ಲಿರುವ ಹೆಚ್ಚಿನ ಹಂಪ್ಗಳು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಸಂಚರಿಸುವ ಕಾರುಗಳಿಗೆ ಹಂಪ್ಗಳು ಹಾನಿಯನ್ನುಂಟು ಮಾಡುತ್ತದೆ. ಎಲ್ಲಾ ಸಮಸ್ಯೆಗಳನ್ನು ಗಮನಿಸಿ ಈ ಹಂಪ್ಗಳನ್ನು ತೆಗೆದುಹಾಕಲು ಕಾರ್ಯಾಚರಣೆ ನಡೆಯುತ್ತಿದೆ.
ವಿಪರ್ಯಾಸವೆಂದರೆ, ಅಪಘಾತಗಳನ್ನು ಕಡಿಮೆ ಮಾಡಲು ಹಂಪ್ಗಳನ್ನು ಹಾಕಲಾಗಿದ್ದರೂ, ಅವು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿವೆ. ನಗರದ ಹೊರವಲಯದ ಕುಂಬಳಗೋಡು ಬಳಿಯಿಂದ ಆರಂಭವಾಗಿ ರಾಮನಗರ ಪಟ್ಟಣದವರೆಗೆ ಅವೈಜ್ಞಾನಿಕ ರಸ್ತೆ ಹಂಪ್ಗಳನ್ನು ತೆಗೆಯಲಾಗಿದೆ.
ರಾಮನಗರ ಎಸ್ಪಿ ಸಂತೋಷ್ ಬಾಬು ಮಾತನಾಡಿ, "ವೇಗ ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಹಂಪ್ಗಳನ್ನು ರಚಿಸಲಾಗಿದೆ. ಆದರೆ, ಕೆಲವು ಹಂಪ್ಗಳು ಅವೈಜ್ಞಾನಿಕವಾಗಿದೆ ಎಂದು ನಮ್ಮ ಗಮನಕ್ಕೆ ಬಂದಿದೆ ಈ ಹಂಪ್ಗಳಿಂದಲೇ ಅಪಘಾತ ಸಂಭವಿಸುತ್ತಿದೆ ಆದ್ದರಿಂದ ಇವುಗಳನ್ನು ತೆರವು ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

ಅಪಘಾತಕ್ಕೆ ಕಾರಣವಾಗಿದ್ದ ಹಂಪ್ಗಳು
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಹಂಪ್ಸ್ ಮತ್ತು ಟ್ರಾಫಿಕ್ ತಿರುವುಗಳಿಂದಾಗಿ ಪ್ರಯಾಣದ ಸಮಯ ಹೆಚ್ಚಾಗಿದೆ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಸ್ಪೀಡ್ ಬ್ರೇಕರ್ಗಳು ಕಾಣದಂತಾಗಿ ರಸ್ತೆ ತುಂಬಾ ಅಪಾಯಕಾರಿಯಾಗಿದೆ. ಅಪಘಾತಗಳಿಗೆ ಕಾರಣವಾಗಿದೆ. ಹಿರಿಯ ಅಧಿಕಾರಿಯೊಬ್ಬರು ತಮ್ಮ ಕಚೇರಿ ಮತ್ತು ಕ್ವಾರ್ಟರ್ಸ್ ಮುಂದೆ ಸ್ಪೀಡ್ ಬ್ರೇಕರ್ ಹಾಕುವಂತೆ ಕಿರಿಯರಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಂಪ್ ಹೈವೆ ಎಂಬ ಹೆಸರಿನಿಂದ ಕರೆಯುತ್ತಿದ್ದರು
ಇಲ್ಲಿ ಅನೇಕ ಸ್ಪೀಡ್ ಬ್ರೇಕರ್ಗಳಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಗೆ 'ಹಂಪ್ ಹೈವೇ' ಎಂಬ ಅಡ್ಡಹೆಸರು ಇತ್ತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ರಸ್ತೆಯನ್ನು ಹಸ್ತಾಂತರಿಸುವವರೆಗೆ ನಿರ್ಮಾಣ ಕಂಪನಿಗಳು ರಸ್ತೆಯನ್ನು ನಿರ್ವಹಿಸುತ್ತಿದ್ದವು, ಹಂಪ್ಗಳನ್ನು ತೆಗೆದುಹಾಕಲು ಪೊಲೀಸ್ ರಕ್ಷಣೆಯನ್ನು ಕೋರಿದ್ದರೂ ಹಂಪ್ಗಳನ್ನು ತೆಗೆದುಹಾಕಲು ಸಾಧ್ಯವಾಗಿರಲಿಲ್ಲ.

ಹಂಪ್ ತೆರವಿಗೆ ಗ್ರಾಮಸ್ಥರಿಂದ ವಿರೋಧ
ಹಂಪ್ಗಳನ್ನು ತೆಗೆಯಲು ಹೆದ್ದಾರಿಯ ಅಕ್ಕ-ಪಕ್ಕದ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆದ್ದಾರಿಯ 140 ಕಿ.ಮೀ. ವ್ಯಾಪ್ತಿಯಲ್ಲಿ 106 ಹಂಪ್ಗಳಿದ್ದವು. ಹಂಪ್ಗಳಿಲ್ಲ ಎಂದರೆ ಅಪಘಾತಗಳು ಸಂಭವಿಸುತ್ತವೆ ಎಂದು ಗ್ರಾಮಸ್ಥರು ವಾದಿಸಿದ್ದರು. ಸ್ಥಳಿಯ ಆಡಳಿತ ಸಂಸ್ಥೆಗಳೇ ಈ ಹಂಪ್ಗಳನ್ನು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಹೆದ್ದಾರಿಯ ಎರಡೂ ಬದಿಯಲ್ಲಿ ಅನೇಕ ಗ್ರಾಮಗಳಿವೆ. ಹಂಪ್ಗಳು ಮಾತ್ರವಲ್ಲದೆ ರಸ್ತೆಯಲ್ಲಿ ಸೂಚನಾ ಫಲಕಗಳಿಲ್ಲದ ಕಾರಣ ಅಪಘಾತ ಸಂಭವಿಸಿದ ಉದಾಹರಣೆಗಳಿವೆ. ಗ್ರಾಮದ ರಸ್ತೆಗಳು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ಗಳಲ್ಲಿ ಅಪಘಾತಗಳು ವರದಿಯಾಗಿವೆ. ಅವೈಜ್ಞಾನಿಕ ಹಂಪ್ಗಳನ್ನು ವೈಜ್ಞಾನಿಕವಾಗಿ ಅಳವಡಿಸುವ ಅಗತ್ಯವಿದೆ ಮತ್ತು ಚಾಲಕರನ್ನು ಎಚ್ಚರಿಸುವ ಮಾರ್ಗದಲ್ಲಿ ಸೈನ್ ಬೋರ್ಡ್ಗಳನ್ನು ಅಳವಡಿಸುವ ಅಗತ್ಯವಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

75 ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ
ಹೊಸ ಹೆದ್ದಾರಿಯಲ್ಲಿ ಬೈ-ಪಾಸ್ಗಳನ್ನು ಹೊಂದಿರುವುದರಿಂದ ಹಂಪ್ಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಬಿಡದಿ ಬೈಪಾಸ್ 6.9-ಕಿ.ಮೀ. ಉದ್ದ, ರಾಮನಗರ-ಚನ್ನಪಟ್ಟಣ 22.35 ಕಿ.ಮೀ., ಮದ್ದೂರು 4.5 ಕಿ.ಮೀ., ಮಂಡ್ಯ 10 ಕಿ.ಮೀ. ಮತ್ತು ಶ್ರೀರಂಗಪಟ್ಟಣ 8 ಕಿ.ಮೀ. ವ್ಯಾಪ್ತಿಯಲ್ಲಿ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲ್ವೆ ಓವರ್ ಪಾಸ್ಳೊಂದಿಗೆ 8 ಕಿ.ಮೀ. ಉದ್ದದ ಕಾರಿಡಾರ್ ಇರುತ್ತದೆ. ರಸ್ತೆ ಪೂರ್ಣಗೊಂಡ ನಂತರ, ಬೆಂಗಳೂರಿನಿಂದ ಮೈಸೂರಿಗೆ 75 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದು ಎನ್ಹೆಚ್ಎಐ ಹೇಳಿದೆ.











Click it and Unblock the Notifications