Duplex House: ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಡ್ಯೂಪ್ಲೆಕ್ಸ್ ಮನೆ ಖರೀದಿಸುವುದು ಹೇಗೆ? ಅಬ್ಬಬ್ಬಾ ಲಾಟ್ರಿ!
ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಮಾಡಬೇಕು ಅನ್ನೋದು ಬಹುತೇಕರ ಕನಸು. ಆದರೆ ದುಬಾರಿ ನಗರದಲ್ಲಿ ಮನೆ ಕಟ್ಟಿಕೊಳ್ಳಲು ಹೆಣಗಾಡಬೇಕು. ಸದ್ಯ ಬೆಂಗಳೂರು ನಗರದಲ್ಲಿ ವಾಸದ ಕನಸು ಕಂಡಿರುವವರಿಗೆ ಸಂತಸದ ಸುದ್ದಿ ನೀಡಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್ಬಿ) ಹೊಸ ಯೋಜನೆ ಪರಿಚಯಿಸುತ್ತಿದ್ದು, ಕಡಿಮೆ ಬೆಲೆ ಡ್ಯೂಪ್ಲೆಕ್ಸ್ ಮನೆ ಖರೀದಿಸಬಹುದಾಗಿದೆ. ಇದಕ್ಕಾಗಿ ಮಂಡಳಿಯು ಡ್ಯೂಪ್ಲೆಕ್ಸ್ ಹೌಸಿಂಗ್ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ಮೊದಲ ಹಂತವಾಗಿ 1,000ಕ್ಕೂ ಹೆಚ್ಚು ಪ್ಲಾಟ್ಗಳಿಗೆ ಅನುಮೋದನೆ ಸಿಕ್ಕಿದ್ದು, ಆರಂಭದಲ್ಲಿ 100 ಡ್ಯುಪ್ಲೆಕ್ಸ್ ಮನೆಗಳ ಪೈಲಟ್ ಯೋಜನೆ ಜಾರಿಯಾಗುತ್ತಿದೆ.
ಹೌಸಿಂಗ್ ಬೋರ್ಡ್ನ ಪ್ರಕಾರ ಈ ಪೈಲಟ್ ಹಂತದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪರಿಶೀಲಿಸಿದ ನಂತರ ಮುಂದಿನ ಹಂತಗಳಲ್ಲಿ ಹೆಚ್ಚಿನ ಮನೆಗಳನ್ನು ನಿರ್ಮಿಸುವ ಯೋಜನೆ ಇದೆ. ಬೆಂಗಳೂರಿನಲ್ಲಿ ವಾಸಿಸಲು ಆಧುನಿಕ ಸೌಲಭ್ಯಗಳಿರುವ ಮನೆಗಳನ್ನು ಹುಡುಕುತ್ತಿರುವವರಿಗೆ ಈ ಯೋಜನೆ ಹೊಸ ಅವಕಾಶ ಒದಗಿಸಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯ ಯಶಸ್ಸನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಡ್ಯೂಪ್ಲೆಕ್ಸ್ ಮನೆಗಳ ನಿರ್ಮಾಣ ನಡೆಯಲಿದೆ. ನಗರದಲ್ಲಿ ವಾಸಿಸುವವರಿಗೆ ಸುಧಾರಿತ ಮತ್ತು ಆಧುನಿಕ ಮನೆಗಳ ಕನಸು ನನಸು ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ಮಂಡಳಿಯು ಸೂರ್ಯನಗರ, ಕೆಂಗೇರಿ ಮತ್ತು ಯಲಹಂಕ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ 3 ಬಿಎಚ್ಕೆ ಫ್ಲಾಟ್ಗಳು ಮತ್ತು ಡ್ಯೂಪ್ಲೆಕ್ಸ್ ಮನೆಗಳನ್ನು ನಿರ್ಮಿಸಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷ ಮತ್ತು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ. ಎಲ್ಲ ಕಡೆ 3 ಬಿಎಚ್ಕೆ ಮುಖ್ಯವಾಗಿ ಘೋಷಣೆಯ ಸಮಯದಲ್ಲಿ ಬೆಲೆಗಳು ಸ್ಥಿರವಾಗಿರುತ್ತವೆ. ಅದು ಮಾರುಕಟ್ಟೆ ದರಗಳೊಂದಿಗೆ ಏರಿಳಿತಗೊಳ್ಳುವುದಿಲ್ಲ, ಜೊತೆಗೆ ಇದು ಖರೀದಿದಾರರಿಗೆ ನ್ಯಾಯವನ್ನು ಖಚಿತಪಡಿಸುತ್ತದೆ ಎನ್ನಲಾಗಿದೆ.
ಬೆಲೆ ಎಷ್ಟು?
ಈ ಹೊಸ ಯೋಜನೆಯಡಿ ಆರಂಭದಲ್ಲಿ 1,000ಕ್ಕೂ ಹೆಚ್ಚು ಪ್ಲಾಟ್ಗಳಿಗೆ ಮಂಜೂರಾಗಿದ್ದು, ಸಾರ್ವಜನಿಕ ಪ್ರತಿಕ್ರಿಯೆಯನ್ನು ನಿರ್ಣಯಿಸಲು 100 ಡ್ಯೂಪ್ಲೆಕ್ಸ್ ಮನೆಗಳು ಪೈಲಟ್ ಯೋಜನೆಯಲ್ಲಿ ಲಭ್ಯವಾಗಲಿವೆ. ಮೂರು ಅಳತೆಯ ಡ್ಯೂಪ್ಲೆಕ್ಸ್ ಮನೆಗಳ ದರ ಈ ಕೆಳಗಿನಂತಿವೆ..
* 35x40 ಅಳತೆಯ ಪ್ಲಾಟ್ಗೆ 99 ಲಕ್ಷ ರೂಪಾಯಿ
* 35x50 ಅಳತೆಯ ಪ್ಲಾಟ್ಗೆ 1.4 ಕೋಟಿ ರೂಪಾಯಿ
* 60x40 ಅಳತೆಯ ಪ್ಲಾಟ್ಗೆ 1.8 ಕೋಟಿ ರೂಪಾಯಿ
ಈ ಮನೆಗಳನ್ನು ಲಾಟರಿ ಆಧಾರಿತ ವ್ಯವಸ್ಥೆಯ ಮೂಲಕ ಹಂಚಿಕೆ ಮಾಡಲಾಗುವುದು. ಪೂರ್ಣ ಪಾವತಿಯ ನಂತರ, ಅರ್ಜಿದಾರರಿಗೆ ಡ್ರಾದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ವಿಜೇತರಿಗೆ ಮನೆಗಳನ್ನು ನೀಡಲಾಗುತ್ತದೆ. ಉಳಿದ ಅರ್ಜಿದಾರರಿಗೆ ಹಣ ಮರುಪಾವತಿ ಮಾಡಲಾಗುವುದು. ಈ ವ್ಯವಸ್ಥೆಯು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ಯಾರಿಗೆಲ್ಲ ಅರ್ಹತೆ?
ಎಲ್ಲ ಯೋಜನೆಗಳಲ್ಲಿ ಮಂಡಳಿಯು ಒಟ್ಟು ಪ್ಲಾಟ್ಗಳಲ್ಲಿ ಶೇ 5ರಷ್ಟು ಮನೆಗಳನ್ನು ವಿವೇಚನಾ ಕೋಟಾದಡಿ ಕಾಯ್ದಿರಿಸಿದೆ. ಇವುಗಳನ್ನು ಮಾಜಿ ಸೈನಿಕರು, ಸರ್ಕಾರಿ ನೌಕರರು, ಶಾಸಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪತ್ರಕರ್ತರಿಗೆ ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಕೆಲವು ಮಾನದಂಡಗಳೂ ಇವೆ. ಈ ಮಾನದಂಡಗಳನ್ನು ಪರಿಷ್ಕರಿಸಲು ಮಂಡಳಿಯು ರಾಜ್ಯ ಸಚಿವ ಸಂಪುಟವನ್ನು ಸಂಪರ್ಕಿಸಲಿದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.












Click it and Unblock the Notifications