Hosur Airport: ಹೊಸೂರು ಏರ್ಪೋರ್ಟ್ ನಿರ್ಮಾಣವಾದ್ರೆ ಬೆಂಗಳೂರಿಗೆ ಏನೆಲ್ಲ ನಷ್ಟ?
ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಮೂಲಕ ಕರ್ನಾಟಕಕ್ಕೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಟಕ್ಕರ್ ಕೊಡಲು ಸಜ್ಜಾಗಿದೆ. ಏಪ್ರಿಲ್ ವೇಳೆಗೆ ಹೊಸೂರು ಏರ್ಪೋರ್ಟ್ಗೆ ಸ್ಥಳ ಫೈನಲ್ ಆಗಲಿದ್ದು, ತಮಿಳುನಾಡು ಸರ್ಕಾರ ಚುರುಕಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಇನ್ನೊಂದು ವಾರದಲ್ಲಿ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿರುವ ಎರಡು ಜಾಗಗಳ ವಿವರವಾದ ಅಧ್ಯಯನ ನಡೆಸಲಿದೆ.
ಈಗಾಗಲೇ ವಿಮಾನ ನಿಲ್ದಾಣ ಪ್ರಾಧಿಕಾರವು ಹೊಸೂರು ಬಳಿ ಗುರುತಿಸಿರುವ ಎರಡು ಸ್ಥಳಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಇದರಲ್ಲಿ ಒಂದು ಜಾಗ ಬೆಳಗೊಂಡಪಲ್ಲಿಯಲ್ಲಿರುವ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (ಟಿಎಎಎಲ್) ನಿರ್ವಹಿಸುವ ಖಾಸಗಿ ಏರ್ಪೋರ್ಟ್ ಬಳಿಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲೇ ಇದೆ. ಮತ್ತೊಂದು ಸ್ಥಳ ಹೊಸೂರಿನ ಪೂರ್ವ ದಿಕ್ಕಿನಲ್ಲಿರುವ ಉಲಗಂ ಬಳಿ ಇದೆ. ಈ ಎರಡೂ ಸ್ಥಳಗಳು 20 ಕಿಲೋಮೀಟರ್ ವ್ಯಾಪ್ತಿಯಲ್ಲೇ ಇವೆ. ಈ ಹಿಂದೆ ರಾಜ್ಯ ಸರ್ಕಾರವು ಐದು ಸ್ಥಳಗಳನ್ನು ಗುರುತಿಸಿತ್ತು. ಇದೀಗ ಅಂತಿಮವಾಗಿ ಈ ಎರಡು ಜಾಗಗಳನ್ನು ಫೈನಲ್ ಮಾಡಲಾಗಿದೆ.

ರಸ್ತೆ ಹಾಗೂ ಇತರೆ ಸಂಪರ್ಕ, ಭೂಮಿಯ ಲಭ್ಯತೆ, ಕನಿಷ್ಠ ಮಾನವ ವಾಸಸ್ಥಳ, ಪ್ರಮುಖ ಜಲಮೂಲಗಳು ಇಲ್ಲದಿರುವಿಕೆ ಹಾಗೂ ಸರ್ಕಾರಿ ಸ್ವಾಮ್ಯದ ಭೂಮಿ ಸೇರಿದಂತೆ ಹಲವು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಗುತ್ತಿದೆ. ಇದೇ ಆಧಾರದ ಮೇಲೆ ಹೊಸೂರು ಆರ್ಪೋರ್ಟ್ಗೆ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಈಗಾಗಲೇ ಈ ಎರಡು ಜಾಗಗಳ ಸಂಬಂಧ ವರದಿ ನೀಡಲಾಗಿದ್ದು, ಸ್ಥಳಪರಿಶೀಲನೆಗೆ ಮುಂದಾಗಿದೆ. ಶೀಘ್ರದಲ್ಲೇ ಒಂದು ಜಾಗ ಫೈನಲ್ ಆಗಲಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕಳೆದ ಜೂನ್ನಲ್ಲೇ ಹೊಸೂರಿನಲ್ಲಿ ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದ್ದರು. ಈ ಹೊಸ ವಿಮಾನ ನಿಲ್ದಾಣವು 2,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಬಳಿಕ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಈ ವಿಚಾರವಾಗಿ ಬೆಂಗಳೂರಿನ ಬಿಐಎಎಲ್ ಪ್ರತಿನಿಧಿಗಳೊಂದಿಗೆ ಚರ್ಚೆಯೂ ನಡೆಸಿದ್ದು, ಇದಕ್ಕೆ ಬಿಐಎಎಲ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗಿದೆ.
ಬೆಂಗಳೂರಿನ ಹಿರಿಮೆಗೆ ಪೆಟ್ಟು: ಐಟಿ ಸಿಟಿಯಾಗಿ ಬೆಳೆದಿರುವ ಬೆಂಗಳೂರಿಗೆ ಪೈಪೋಟಿ ನೀಡಲು ಹೊಸೂರಿನಲ್ಲೇ ಏರ್ಪೋರ್ಟ್ ನಿರ್ಮಾಣ ಮಾಡಬೇಕು ಎಂದು ತಮಿಳುನಾಡು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಕೈಗಾರಿಗಳಿಗೆ ಹೆಸರುವಾಸಿಯಾಗಿರುವ ಹೊಸೂರಿನಲ್ಲಿ ಈ ಏರ್ಪೋರ್ಟ್ ನಿರ್ಮಾಣ ಮಾಡುವುದರಿಂದ ಐಟಿ ಕಂಪನಿಗಳು ಕೂಡ ಈ ಭಾಗಕ್ಕೆ ಶಿಫ್ಟ್ ಆಗುತ್ತವೆ ಎಂಬ ಲೆಕ್ಕಾಚಾರದಲ್ಲಿದೆ ತಮಿಳುನಾಡು. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗಾವಕಾಶವೂ ಸಿಗಲಿದ್ದು, ಒಂದೇ ನಿರ್ಧಾರದಿಂದ ಹಲವು ಲಾಭ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹೊಸೂರಿನಲ್ಲೇ ಏರ್ಪೋರ್ಟ್ ಮಾಡಬೇಕು ಎಂದು ಪಟ್ಟು ಹಿಡಿದಿದೆ ಎನ್ನಲಾಗಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಹಾಗೂ ಕೇಂದ್ರ ಸರ್ಕಾರದ ನಡುವಿನ ಈಗಾಗಲೇ ಒಪ್ಪಂದ ನಡೆದಿದೆ. 2030 ರವರೆಗೆ ಬಿಐಎಎಲ್ನಿಂದ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಆದರೂ ಈಗಿನಿಂದಲೇ ಏರ್ಪೋರ್ಟ್ ನಿರ್ಮಾಣಕ್ಕೆ 2,000 ಎಕರೆಗಳನ್ನು ವಿಸ್ತರಿಸಲು ಉದ್ದೇಶಿಸಲಾಗಿದ್ದು, ಆರಂಭದಲ್ಲಿ ಈ ಏರ್ಪೋರ್ಟ್ನಲ್ಲಿ ಒಂದೇ ರನ್ವೇ ಇರಲಿದೆ. ಈ ಏರ್ಪೋರ್ಟ್ ನಿರ್ಮಾಣದ ಹಿಂದೆ ಹೊಸೂರಿನ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೂ ಒತ್ತು ನೀಡಬಹುದು. ಜೊತೆಗೆ ಈ ಪ್ರದೇಶಕ್ಕೆ ಅಗತ್ಯವಾದ ಮೂಲಸೌಕರ್ಯ ಉತ್ತೇಜನವನ್ನು ಒದಗಿಸುತ್ತದೆ.












Click it and Unblock the Notifications