ಹೈಕೋರ್ಟ್: ವರ್ಗಾವಣೆಗೆ ಮಂತ್ರಿಗಳ ಶಿಫಾರಸ್ಸಿನಲ್ಲಿ ತಪ್ಪೇನಿದೆ?
ಬೆಂಗಳೂರು, ಜನವರಿ 12: ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸಮಯದಲ್ಲಿ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಶಿಫಾರಸು ಮಾಡುವುದರಲ್ಲಿ ತಪ್ಪೇನು ಇಲ್ಲ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯವನ್ನು ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಸಂಪುಟದ 28 ಸಚಿವರು ಹಾಗೂ ಇತರರು ಸುಪ್ರೀಂ ಆದೇಶಕ್ಕೆ ವಿರುದ್ಧವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾ. ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಪರಿಶೀಲಿಸಿ ವಿಚಾರಣೆ ನಡೆಸಿತು.

ಈ ವೇಳೆ ಹಿಂಚಿಗೇರಿ ಅವರು ಪೊಲೀಸರು ಮತ್ತು ಪ್ರತಿನಿಧಿಗಳಿಗೆ ನೇರ ಸಂಬಂಧವಿದ್ದು ಪೊಲೀಸರು ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಆಗದೇ ಇದ್ದ ಪಕ್ಷದಲ್ಲಿ ವರ್ಗಾವಣೆಯನ್ನು ಅಪೇಕ್ಷಿಸುವುದು ಸಾಮಾನ್ಯ. ಇದನ್ನು ಜನಪ್ರತಿನಿಧಿಗಳು, ಶಾಸಕರು, ಸಂಸದರು ಮಂತ್ರಿಗಳಿಂದ ಪಡೆಯುವುದು ತಪ್ಪಿಲ್ಲ. ಆದರೆ ಪೊಲೀಸರು ತಮ್ಮ ಮೇಲ್ದರ್ಜೆಯ ಆರಕ್ಷಕರಿಂದಲೇ ವರ್ಗಾವಣೆ ಕೋರಬೇಕು ಎಂಬುದರಲ್ಲಿ ಹುರುಳಿಲ್ಲ ಎಂದು ಮೌಖಿಕವಾಗಿ ತಿಳಿಸಿದರು.
ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಪ್ಪ ಅರ್ಜಿದಾರರ ಮನವಿಯನ್ನು ವಜಾಗೊಳಿಸಬೇಕು ಎಂದರು. ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಇಂದು(ಜ.12) ಮುಂದುವರೆಸುವುದಾಗಿ ತಿಳಿಸಿದರು.












Click it and Unblock the Notifications