ಬೆಂಗಳೂರಲ್ಲಿ ಸಂಜೆ ಒಳಗೆ ಮನೆಗೆ ಸೇರ್ಕೊಳ್ಳಿ, ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 3: ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆ ಉರಿ ಬಿಸಿಲು, ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿದೆ.
ಮುಂಗಾರು ಆರಂಭಗೊಂಡು ಮುಕ್ತಾಯಗೊಂಡರೂ ಕೂಡ ಬೆಂಗಳೂರಲ್ಲಿ ಮೋಡಕವಿದಿದ್ದು ಬಿಟ್ಟರೆ ಮಳೆಯಾಗಿಲ್ಲ. ಆದರೆ ಮುಂಗಾರು ಮುಗಿದ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ.
ಇನ್ನೂ ಎರೆಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಕೊಂಚ ತಗ್ಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಲ್ಲಿ ಮತ್ತೆರೆಡು ದಿನ ಭಾರಿ ಮಳೆ ಸಾಧ್ಯತೆ
ನಗರದಲ್ಲಿ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ ಗರಿಷ್ಠ 30.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.2 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರಲ್ಲಿ ಗುರುವಾರವೂ ಮಳೆ ಮುಂದುವರೆಯಲಿದೆ
ನಗರದಲ್ಲಿ ಬುಧವಾರವೂ ಮಳೆ ಮುಂದುವರೆದಿದ್ದು, ಗುರುವಾರವೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕೋರಮಮಂಗಲ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮರ ಹಾಗೂ ಮರದ ಕೊಂಬೆ ಬಿದ್ದು, ಸಾರ್ವಜನಿಕರು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಕೇರಳ ಹಾಗೂ ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ
ಕೇರಳ ಹಾಗೂ ತಮಿಳುನಾಡು ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿ ಇಡೀ ಸುರಿತ ಮಳೆ ಬೆಳಗಾಗುತ್ತಿದ್ದಂತೆ ಕಡಿಮೆಯಾಯಿತು. ಬುಧವಾರ ಸಂಜೆಯವರೆಗೂ ಬಿಸಿಲಿದ್ದು ಸುಮಾರು 6 ಗಂಟೆ ಸುಮಾರಿಗೆ ಮಳೆ ಮತ್ತೆ ಆರಂಭವಾಯಿತು. ಬುಧವಾರ ಮಧ್ಯಾಹ್ನದವರೆಗೆ ಬಿಸಿಲ ತಾಪ ಹೆಚ್ಚಾಗಿ ಕಂಡುಬಂತು. ರಾತ್ರಿ 8 ಗಂಟೆಯ ನಂತರ ನಗರದ ಹೊರ ವಲಯಗಳಲ್ಲಿ ಧಾರಕಾರವಾಗಿ ಮಳೆ ಸುರಿದರೆ, ನಗರದ ಕೇಂದ್ರ ಭಾಗದಲ್ಲಿ ತುಂತುರು ಮಳೆ ಆಯಿತು.ರಾತ್ರಿ ಧಾರಾಕಾರ ಮಳೆ ಸುರಿಯಿತು. ಗುಡುಗು ಮಿಂಚು ಅಬ್ಬರ ಸಹ ಹೆಚ್ಚಾಗಿತ್ತು.
ಬೆನ್ನಿಗಾನಹಳ್ಳಿಯಲ್ಲಿ ಅತಿಹೆಚ್ಚು ಮಳೆ
ನಗರದ ಬೆನ್ನಿಗಾನಹಳ್ಳಿಯಲ್ಲಿ ಅತೀ ಹೆಚ್ಚು 5.9ಸೆಂ.ಮೀ ದೊಮ್ಮಲೂರು ರಾಮಮೂರ್ತಿನಗರ 4.3 ಸೆಂ.ಮೀ, ಮಹದೇವಪುರ, ಬಾಣಸವಾಡಿ ತಲಾ 3.6 ಸೆಂ.ಮೀ, ಎಚ್ಎಸ್ಆರ್ ಲೇಔಟ್ನಲ್ಲಿ 3.5 ಸೆಂ.ಮೀನಷ್ಟು ಮಳೆಯಾಗಿದೆ.
ಕೆರೆಯಂತಾದ ಎಚ್ಎಸ್ಆರ್ ಲೇಔಟ್
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಎಚ್ಎಸ್ಆರ್ ಲೇಔಟ್ ನ ಆರು ಮತ್ತು ಏಳನೇ ಹಂತಗಳಲ್ಲಿ ಸಾರ್ವಜನಿಕರು ಪರದಾಡಿದರು. ಮಳೆ ನೀರು ಮನೆಗಳಿಗೆ ನುಗ್ಗಿದ್ದು ಮನೆಯಿಂದ ನೀರನ್ನು ಹೊರಹಾಕಲು ನಾಗರಿಕರು ಪ್ರಯಾಸ ಪಡಬೇಕಾಯಿತು. ಈಗಾಗಲೇ ಹಲವಾರು ಬಾರಿ ಕೋಟ್ಯಂತರ ರೂಪಾಯಿ ವ್ಯಯ ಮಾಡಿ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಾಗಿದ್ದರೂ ಮಳೆ ಬಂದಾಗ ಇಡಿ ಬಡಾವಣೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ.