Bengaluru: ಮುಂದಿನ ಕೆಲ ಗಂಟೆಗಳಲ್ಲಿ ಬೆಂಗಳೂರಿನಾದ್ಯಂತ ಮಹಾಮಳೆ- ಬಿರುಗಾಳಿ, ಗುಡುಗು, ಸಿಡಿಲಿನ ಮುನ್ಸೂಚನೆ
ಬೆಂಗಳೂರು, ಜೂನ್ 20: ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ ತುಂತುರು ಮಳೆ ಶುರುವಾಗಿದೆ. 9 ಗಂಟೆಯ ಬಳಿಕ ಮಳೆಯು ದಟ್ಟವಾಗಿ ಸುರಿಯುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಬೆಳಿಗ್ಗೆ 9:15 ರಿಂದ ಪ್ರಾರಂಭವಾಗುವ ಮಳೆಯು ಮುಂದಿನ ಮೂರು ಗಂಟೆಗಳ ಕಾಲ ಬಿರುಗಾಳಿಯೊಂದಿಗೆ ಸುರಿಯಲಿದೆ. ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.

ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ಗಳಾಗಿವೆ. ಇದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ನಿಧಾನಗತಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಜೂನ್ 24 ರ ವರೆಗೆ ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಮಂಗಳವಾರ ಬೆಳಿಗ್ಗೆ 8:30 ರ ವರೆಗೆ ಬೆಂಗಳೂರು ನಗರದಲ್ಲಿ 1.7 ಮಿಮೀ ಮಳೆಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) 4.3 ಮಿಮೀ ಮಳೆಯಾಗಿದೆ ಮತ್ತು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 2.4 ಮಿಮೀ ಮಳೆ ದಾಖಲಾಗಿದೆ.

ಮಳೆಯ ಸಂದರ್ಭದಲ್ಲಿ ಹವಾಮಾನ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.
1- ಮನೆಯೊಳಗೆ ಇರಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ.
2- ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ.
3- ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.
4- ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ.
5- ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್ಪ್ಲಗ್ ಮಾಡಿ.
6- ಜಲಮೂಲಗಳಿಂದ ದೂರವಿರಿ.
7- ವಿದ್ಯುಚ್ಛಕ್ತಿಯನ್ನು ನಡೆಸುವ ಎಲ್ಲಾ ವಸ್ತುಗಳಿಂದ ದೂರವಿರಿ.

118 ವಾರ್ಡ್ಗಳಲ್ಲಿ ಶಾಶ್ವತ ಪರಿಹಾರ
ಬೆಂಗಳೂರಿನ 198 ವಾರ್ಡ್ಗಳ ಪೈಕಿ 118 ವಾರ್ಡ್ಗಳಲ್ಲಿ ಪ್ರವಾಹ ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಬಿಬಿಎಂಪಿ ಆಯಕ್ತರು ಹೇಳಿದ್ದಾರೆ.
'ನಮ್ಮ ಸಿದ್ಧತೆಗಳನ್ನು ಪರಿಶೀಲಿಸಲು ನಾವು ನಿಯಮಿತವಾಗಿ ಮಾನ್ಸೂನ್ ಪೂರ್ವಸಿದ್ಧತಾ ಸಭೆಗಳನ್ನು ನಡೆಸುತ್ತೇವೆ. 198 ವಾರ್ಡ್ಗಳ ಪೈಕಿ 118 ವಾರ್ಡ್ಗಳಲ್ಲಿ ಶಾಶ್ವತ ಪರಿಹಾರವಿದೆ. ಇನ್ನು 70 ವಾರ್ಡ್ಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರ ಪರಿಶೀಲನೆಯ ಮೂಲಕ ಸಭೆಯಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸುತ್ತೇವೆ' ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಅಂಡರ್ಪಾಸ್ಗಳಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಗಿರಿನಾಥ್, 'ನಾವು ಎಲ್ಲಾ ಅಂಡರ್ಪಾಸ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಲೈಟ್ಗಳನ್ನು ಹಾಕಲು ನಿರ್ಧರಿಸಿದ್ದೇವೆ. ಸಿಸಿಟಿವಿ ಕ್ಯಾಮೆರಾಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ. ನೀರು ಸಂಗ್ರಹವಾಗುತ್ತಿರುವುದನ್ನು ಪರಿಶೀಲಿಸಲು ಅಂಡರ್ಪಾಸ್ಗಳಲ್ಲಿ ಮೀಟರ್ ಗೇಜ್ ಅಳವಡಿಸಲಾಗುವುದು. ಈಗಾಗಲೇ ಕೆಲವೆಡೆ ಕಾಮಗಾರಿ ಆರಂಭಿಸಿದ್ದು, ಶೀಘ್ರ ಪೂರ್ಣಗೊಳ್ಳಲಿದೆ' ಎಂದು ಭರವಸೆ ನೀಡಿದ್ದಾರೆ.
ಅಂಡರ್ಪಾಸ್ನ ಪ್ರವೇಶ ಮತ್ತು ನಿರ್ಗಮನದಲ್ಲಿ ಮಳೆನೀರು ಚರಂಡಿಗೆ ಸಂಪರ್ಕ ಕಲ್ಪಿಸುವ ನೀರನ್ನು ಹೊರಹಾಕಲು ನಾವು ಪೈಪ್ಗಳನ್ನು ಹಾಕಿದ್ದೇವೆ ಮತ್ತು ಮುಂದಿನ 2-3 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications