ಬೆಂಗಳೂರಿಗೆ ಮತ್ತೆ ಬಿರುಗಾಳಿ, ಭೀಕರ ಮಳೆಯ ಹೊಡೆತ
ಬೆಂಗಳೂರು, ಸೆಪ್ಟೆಂಬರ್ 14 : ನಾಲ್ಕು ದಿನಗಳ ಬಿಡುವು ಪಡೆದಿದ್ದ ಮಳೆ, ಬೆಂಗಳೂರಿನ ಮೇಲೆ ಗುರುವಾರ ಸಂಜೆ ಮತ್ತೆ ಅಪ್ಪಳಿಸಿದೆ. ಇದರ ಜೊತೆ ಬಿರುಗಾಳಿಯೂ ಸೇರಿದ್ದರಿಂದ ಅಬ್ಬರ ಜೋರಾಗಿದೆ.
ಇಡೀ ದಿನ ಆಕಾಶದಲ್ಲಿ ಆಗಾಗ ಮೋಡಗಳು ಸೂರ್ಯನ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಮಳೆ ತರಿಸುವಂಥ ಮೋಡಗಳು ಆವರಿಸಿಕೊಂಡಿರಲಿಲ್ಲ.
ಆದರೆ, ಸಂಜೆ 6 ಗಂಟೆಯ ನಂತರ ಜೋರು ಗಾಳಿಯ ಜೊತೆ ಅದೆಲ್ಲಿ ಅಡಗಿಕೊಂಡಿದ್ದವೋ, ಕಾರ್ಮೋಡಗಳು ಬೆಂಗಳೂರಿನ ಮೇಲೆ ಆವರಿಸಿಕೊಂಡು ಜೋರು ಮಳೆ ಸುರಿಸಲು ಆರಂಭಿಸಿವೆ.
6 ಗಂಟೆಯಿಂದ ಸುಮಾರು 20 ನಿಮಿಷಗಳ ಕಾಲ ಸುರಿದಿದ್ದ ಮಳೆ, ಕೆಲಹೊತ್ತು ಕಡಿಮೆಯಾಗಿದ್ದರೂ 9 ಗಂಟೆಯ ನಂತರ ಮತ್ತೆ ಆವೇಶ ಪಡೆದುಕೊಂಡಿದೆ. ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ನಿದ್ದೆ ಕೆಡಿಸಿದೆ ಮಳೆ.
ಹವಾಮಾನ ತಜ್ಞರ ಪ್ರಕಾರ, ನಗರದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಇನ್ನೆರಡು ದಿನ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
ಶುಕ್ರವಾರ ಸಂಜೆ ಮತ್ತು ಶನಿವಾರ ಇಡೀ ರಾತ್ರಿ ಸುರಿದಿದ್ದ ಮಳೆ ಭಾರೀ ಆವಾಂತರ ಸೃಷ್ಟಿಸಿತ್ತು. ಕೆಂಗೇರಿ ಬಳಿ ವೃಷಭಾವತಿ ನದಿ ಚರಂಡಿಯಿಂದ ಉಕ್ಕಿ ಹರಿದಿದ್ದರೆ, ಕೊಮ್ಮಘಟ್ಟ ಕೆರೆ ತುಂಬಿ ಹರಿದು ಕೆರೆ ರಸ್ತೆ ಒಂದು ಮಾಡಿದ್ದವು.