ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ: ಕುಮಾರಸ್ವಾಮಿ
ಬೆಂಗಳೂರು: ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ, ಬಿಜೆಪಿ, ಕಾಂಗ್ರೆಸ್ & ಜೆಡಿಎಸ್ ಜಿದ್ದಿಗೆ ಬಿದ್ದು ಮತದಾರನ ಮನವೊಲಿಸುತ್ತಿವೆ. ಈಗ ರಾಷ್ಟ್ರೀಯ ಮಾಧ್ಯಮಕ್ಕೆ ಮಾಜಿ ಸಿಎಂ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ವಿಶೇಷ ಸಂದರ್ಶನ ನೀಡಿದ್ದಾರೆ. 'ದಿ ಪ್ರಿಂಟ್'ಗೆ ನೀಡಿರುವ ಈ ಸಂದರ್ಶನದಲ್ಲಿ ಎಚ್ಡಿಕೆ, ನಾನೇ ಮುಂದಿನ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ನಾನು ಕರ್ನಾಟಕದಲ್ಲಿ ಸಿಎಂ ಆಗುತ್ತೇನೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ, ಬಿಜೆಪಿ ಕೂಡ ಇದನ್ನೇ ನಂಬಿದೆ' ಎಂದು ಸಂದರ್ಶನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ಎಚ್ಡಿಕೆ ನೀಡಿರುವ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. 'ದಿ ಪ್ರಿಂಟ್'ಗೆ ಎಚ್ಡಿಕೆ ನೀಡಿರುವ ಸಂದರ್ಶನದ ಕಂಪ್ಲೀಟ್ ಮಾಹಿತಿಯನ್ನ ನಾವು ಇಲ್ಲಿ ತಿಳಿಯುತ್ತಾ ಹೋಗೋಣ.

ಪ್ರಶ್ನೆ: 2023ರ ಚುನಾವಣೆ ನಿಮಗೆ ಹೇಗೆ ನೆರವಾಗಬಲ್ಲದು?
ಎಚ್ಡಿಕೆ ಉತ್ತರ: 2023ರ ಚುನಾವಣೆ ಅಚ್ಚರಿಯ ಫಲಿತಾಂಶ ಕಾಣಲಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು 140 ಸ್ಥಾನದಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ ಎನ್ನುತ್ತಿವೆ, ಹೀಗಾಗಿ ಅವರ ಮೇಲೆ ಮಾತ್ರ ಗಮನ ಹರಿಸಲಾಗುತ್ತಿದೆ. ಆದ್ರೆ ಸಮೀಕ್ಷೆಗಳು ವಾಸ್ತವ ಸ್ಥಿತಿ ಆಧರಿಸಿಲ್ಲ. 5 ತಿಂಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರದ 60-70 ಗ್ರಾಮಗಳಿಗೆ ಭೇಟಿ ನೀಡಿ 106 ಕ್ಷೇತ್ರಗಳಲ್ಲಿ ಸಂಚರಿಸಿದ ಏಕೈಕ ರಾಜಕಾರಣಿ ನಾನು. ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಜನರ ನಾಡಿಮಿಡಿತವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ 2023ರ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನಿರೀಕ್ಷಿಸಬಹುದು.
ಪ್ರಶ್ನೆ: JDS ಮತ ಹಂಚಿಕೆ 18%-20% ಇರುತ್ತದೆ
ಎಚ್ಡಿಕೆ ಉತ್ತರ: ಈ ವಿಚಾರವನ್ನು ನಾನು ಸಕಾರಾತ್ಮಕವಾಗಿಯೇ ವಿಶ್ಲೇಷಣೆ ಮಾಡುತ್ತೇನೆ. ಕಳೆದ 3 ಚುನಾವಣೆಗಳಲ್ಲಿ ಮತ ಹಂಚಿಕೆ ಪ್ರಮಾಣದಲ್ಲಿ ಕೇವಲ ಸಣ್ಣ ವ್ಯತ್ಯಾಸವಿದೆ. ಇದೆಲ್ಲವನ್ನ ವಿಶ್ಲೇಷಿಸಿ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ. ನಾವು ಶೇ.19 ರಷ್ಟು ಮತ ಪಡೆದಿದ್ದರೂ 25ರಿಂದ 30 ಕ್ಷೇತ್ರಗಳನ್ನು ಕೇವಲ 400ರಿಂದ 5000 ಮತಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ. ಆ ಕ್ಷೇತ್ರಗಳಲ್ಲಿ ನಮ್ಮ ಪ್ರಚಾರ ಕಾರ್ಯ ಅಂದುಕೊಂಡ ಮಟ್ಟಕ್ಕೆ ತಲುಪಿರಲಿಲ್ಲ. ಆದರೆ ಈಗ ಎಲ್ಲಾ ತಪ್ಪು ಸರಿಪಡಿಸಿಕೊಂಡು, ವರ್ಷದ ಹಿಂದೆ 95 ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಗ್ರೌಂಡ್ ವರ್ಕ್ ಮಾಡಿದ್ದೇವೆ.

ಪ್ರಶ್ನೆ: ಒಕ್ಕಲಿಗರ ಪಕ್ಷ ಎನ್ನುವ ಬಗ್ಗೆ
ಎಚ್ಡಿಕೆ ಉತ್ತರ: ಕಳೆದ ವರ್ಷದವರೆಗೂ ನಮ್ಮನ್ನು ಹಾಗೆ ನೋಡಲಾಗಿತ್ತು. ಆದರೆ ನಮ್ಮ ಪಂಚರತ್ನ ಯಾತ್ರೆ ಹಾಗೂ ಜನತಾ ಜಲಧಾರೆ ಯಾತ್ರೆಗಳು ಆ ಅಭಿಪ್ರಾಯ ಬದಲಾಯಿಸಿವೆ. ದಕ್ಷಿಣದಿಂದ ಉತ್ತರ ಭಾಗಕ್ಕೆ ನಮ್ಮ ಬಲವನ್ನು ವಿಸ್ತರಿಸಿ ಶಕ್ತಿ ಗಳಿಸಿದ್ದೇವೆ. ಮತ್ತೊಂದ್ಕಡೆ ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಿರಸ್ಕೃತಗೊಂಡ ಉತ್ತಮ ಅಭ್ಯರ್ಥಿಗಳು JDS ಜೊತೆ ನಿಂತಿದ್ದಾರೆ. 28 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಂತಹವರಿಗೆ ಟಿಕೆಟ್ ನೀಡಿದ್ದೇವೆ. ಇದೆಲ್ಲದರ ಪರಿಣಾಮ ನಾವು ಈ ಬಾರಿ ಉತ್ತರ ಕರ್ನಾಟಕದಿಂದ 30ರಿಂದ 35 ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲುವ ನಿರೀಕ್ಷೆಯೂ ಇದೆ.
ಪ್ರಶ್ನೆ: ಉರಿಗೌಡ ಮತ್ತು ನಂಜೇಗೌಡರ ವಿಚಾರ
ಎಚ್ಡಿಕೆ ಉತ್ತರ: ಉರಿಗೌಡ ಮತ್ತು ನಂಜೇಗೌಡರ ವಿಚಾರದಲ್ಲಿ ಬಿಜೆಪಿ ಐಡಿಯಾ ವಿಫಲವಾಗಿದ್ದು, ಅದರ ಜೊತೆಗೆ ತಿರುಗುಬಾಣವಾಗಿದೆ. ಒಕ್ಕಲಿಗರ ವಿಚಾರದಲ್ಲಿ ಮಾತ್ರ ಅಲ್ಲ ಲಿಂಗಾಯತರ ವಿಚಾರದಲ್ಲೂ ಬಿಜೆಪಿಗೆ ಹಿನ್ನಡೆಯಾಗಿದೆ. ಉರಿಗೌಡ, ನಂಜೇಗೌಡರ ವಿಚಾರದ ಆಧಾರದಲ್ಲಿ ಬಿಜೆಪಿಗೆ ಏನೂ ವರ್ಕೌಟ್ ಆಗುವುದಿಲ್ಲ. ಭಾವನಾತ್ಮಕ ಕಥೆಯನ್ನು ಸೃಷ್ಟಿಸುವ ತಂತ್ರ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ ಕರ್ನಾಟಕದಲ್ಲಿ ಇಂತಹ ತಂತ್ರಗಳು ವರ್ಕೌಟ್ ಆಗುವುದಿಲ್ಲ.

ಪ್ರಶ್ನೆ: ಕಾಂಗ್ರೆಸ್ or ಬಿಜೆಪಿ, ಯಾರ ಜೊತೆ ಮೈತ್ರಿ?
ಎಚ್ಡಿಕೆ ಉತ್ತರ: ಈ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರಸಕ್ತ ಬಿಜೆಪಿ ಸರ್ಕಾರದ ಆಡಳಿತ ನೋಡಿ ಜನ ಬೇಸರಗೊಂಡಿದ್ದಾರೆ. ಹಾಗೇ ಕಾಂಗ್ರೆಸ್ ವಿರುದ್ಧವೂ ಜನ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜೆಡಿಎಸ್ ಅನ್ನು ಜನರು ಬಯಸಿದ್ದಾರೆ. ಈ ಹಿಂದೆ ನಮಗೆ ಬಹುಮತ ಸಿಗದೇ ಇದ್ದಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ಜೆಡಿಎಸ್ ಉತ್ತಮ ಆಳಿತ ನೀಡಿದೆ. ಜನ ಅದನ್ನು ನೆನಪು ಮಾಡಿಕೊಳ್ಳುತ್ತಾರೆ.
ಪ್ರಶ್ನೆ: ಜೆಡಿಎಸ್ಗೆ ಯಾರಿಂದ ಹೆಚ್ಚು ಅಪಾಯ?
ಎಚ್ಡಿಕೆ ಉತ್ತರ: ನಮಗೆ ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಸಮಸ್ಯೆ ಅಲ್ಲ. JDS ಎರಡೂ ರಾಷ್ಟ್ರೀಯ ಪಕ್ಷಗಳ ತಪ್ಪುಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪ್ರತಿಸ್ಪರ್ಧಿಗಳು. ಹೀಗಾಗಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ವಿರುದ್ಧವೂ ಹೋರಾಟವನ್ನು ಮುಂದುವರಿಸಲಿದೆ. ನಮ್ಮ ಶಕ್ತಿ ನಮ್ಮದು, ಅವರ ಶಕ್ತಿ ಅವರದ್ದು.
ಕೃಪೆ: 'ದಿ ಪ್ರಿಂಟ್'












Click it and Unblock the Notifications