ಉಭಯ ಕುಶಲೋಪರಿ ಸಾಂಪ್ರತ ಸಿದ್ದರಾಮಯ್ಯ- ದೇವೇಗೌಡ ಭೇಟಿ
ಬೆಂಗಳೂರು, ಆಗಸ್ಟ್ 03: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೆಲ ಕಾಲ ವಿಶ್ರಾಂತಿ ಬಳಿಕ ಸಕ್ರಿಯ ರಾಜಕೀಯ ಚಟುವಟಿಕೆಗೆ ಮರಳಿದ್ದಾರೆ. ಇತ್ತ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗನ ಅಗಲಿಕೆಯ ನೋವಿನ ನಡುವೆಯೂ ಬುಧವಾರ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು. ಬುಧವಾರ ಸಂಜೆ ಈ ಇಬ್ಬರು ರಾಜಕೀಯ ಮುಖಂಡರ ಭೇಟಿಗೆ ಸಿಎಂ ಅಧಿಕೃತ ನಿವಾಸ ಕೃಷ್ಣಾ ವೇದಿಕೆ ಒದಗಿಸಿದೆ.
ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ನಿಧನದ ಸುದ್ದಿ ತಿಳಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ ಸಂದೇಶ ಕಳಿಸಿದ್ದರು.[ಕಂಬನಿ ಮಿಡಿಯುತ್ತಲೇ ಜನತೆಗೆ ಧನ್ಯವಾದ ಅರ್ಪಿಸಿದ ಸಿದ್ದರಾಮಯ್ಯ]
ಅನಾರೋಗ್ಯ ನಿಮಿತ್ತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರಣ, ದೇವೇಗೌಡ ಅವರು ಮೈಸೂರಿಗೆ ಆಗಮಿಸಿ ರಾಕೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕೂಡಾ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬದ ಪ್ರತಿನಿಧಿಯಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಕೇಶ್ ಅವರ ಅಂತಿಮ ದರ್ಶನ ಪಡೆದು, ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳಿ ಬಂದಿದ್ದರು.[ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ]

ದೇವಗೌಡರಿಗೆ ಧನ್ಯವಾದ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
'ದೂರವಾಣಿ ಕರೆ ಮಾಡಿ ದೇವೇಗೌಡರೊಂದಿಗೆ ಅವರು ಮಾತನಾಡಿದರು. ಅನಾರೋಗ್ಯದ ಕಾರಣ ಅಂತ್ಯಕ್ರಿಯೆ ವೇಳೆ ಹಾಜರಿರಲು ಆಗಲಿಲ್ಲ' ಎಂದು ಗೌಡರು ತಿಳಿಸಿದರು. ಆರೋಗ್ಯದ ಕಡೆ ಗಮನ ಕೊಡಿ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಗೌಡರಿಗೆ ವಿನಂತಿಸಿದರು.[ರಾಕೇಶ್ ವಿರುದ್ಧ ಕಾಮೆಂಟ್ ಮಾಡಿದ ಯುವಕರ ವಿರುದ್ಧ ಕೇಸ್]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಜಾತಿ, ಪಕ್ಷ, ಪಂಥ ಬೇಧ ಮರೆತು ನೈತಿಕ ಸ್ಥೈರ್ಯ ತುಂಬಿ ಸಾಂತ್ವನ ಹೇಳಿರುವ ರಾಜ್ಯದ ಸಹೃದಯಿಗಳ ಪ್ರೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications