ಬಿಬಿಎಂಪಿಗೆ ಹೊಸ ಮೇಯರ್ ಬರ್ತಾರಾ?
ಬೆಂಗಳೂರು, ಏ. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಏ.23ರ ಬುಧವಾರ ಕೊನೆಗೊಳ್ಳಲಿದೆ. ಆದರೆ, ಬುಧವಾರ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲು ಯಾವುದೇ ವೇಳಾಪಟ್ಟಿ ಪ್ರಕಟಗೊಂಡಿಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಹಾಲಿ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಇಂದಿರಾ ಮತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಅವಧಿಯು ಏಪ್ರಿಲ್ 23ರಂದು ಕೊನೆಗೊಳ್ಳಲಿದೆ. ಬಿಬಿಎಂಪಿ ಆಯುಕ್ತರು ಮೇಯರ್ ಅವಧಿ ಕುರಿತು ಸ್ಪಷ್ಟನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಮಾರ್ಚ್ ನಲ್ಲಿ ಪತ್ರ ಬರೆದಿದ್ದರು. ಆದರೆ, ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿರುವುದು ಗೊಂದಲ ಉಂಟುಮಾಡಿದೆ.

ಮೇಯರ್ ಆಗಿ ಕಟ್ಟೆ ಸತ್ಯನಾರಾಯಣ ಅವರು 14ನೇ ಅವಧಿಗೆ ಆಯ್ಕೆ ಆಗುವ ವೇಳಯಲ್ಲಿ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಮೇಯರ್, ಉಪಮೇಯರ್ ಸ್ಥಾನಗಳನ್ನು ಸಾಮಾನ್ಯಕ್ಕೆ ಮೀಸಲಾಗಿಟ್ಟು ಚುನಾವಣೆ ನಡೆಸಲಾಗಿತ್ತು. ಸದ್ಯ ಇದೇ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಬೇಕೆ ಎಂಬ ಕುರಿತು ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟೀಕರಣ ಕೇಳಲಾಗಿದೆ. ಆದರೆ, ಉತ್ತರ ಬಂದಿಲ್ಲ. [ಬಿಬಿಎಂಪಿಗೆ ಹೊಸ ಸಾರಥಿಗಳು]
ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ವಿವಿಧ ಕಾರಣಗಳಿಂದಾಗಿ ವಿಳಂಬವಾಗಿತ್ತು, ಅಂತಿಮವಾಗಿ 2013 ರ ಸೆ. 4ರಂದು ಆಯ್ಕೆಯಾಗಿದ್ದರು. ಕಟ್ಟೆ ಸತ್ಯನಾರಾಯಣ ಮೇಯರ್ ಆಗಿ ಇಂದಿರಾ ಉಪ ಮೇಯರ್ ಆಗಿ ಆಯ್ಕೆ ಆಗಿದ್ದರು. ಆದ್ದರಿಂದ ಇವರ ಅವಧಿ ಯಾವಾಗ ಮುಕ್ತಾಯವಾಗಲಿದೆ ಎಂಬ ಕುರಿತು ಸ್ಪಷ್ಟನೆ ಇಲ್ಲದಂತಾಗಿದೆ. [ಬಿಬಿಎಂಪಿ ಬಜೆಟ್ ಹೈಲೈಟ್ಸ್ ]
ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕೆಎಂಸಿ ಕಾಯ್ದೆಯ ಪ್ರಕಾರ ಮೇಯರ್ ಸ್ಥಾನ ಅಲಂಕರಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಮೇಯರ್ ಅಧಿಕಾರವಧಿ ಇರುತ್ತದೆ. ಈ ನಿಯಮದಂತೆ ಒಂದು ವರ್ಷ ಪೂರೈಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಯಾವುದೇ ಉತ್ತರ ಬಂದಿಲ್ಲ.
ನಗರಾಭಿವೃದ್ಧಿ ಇಲಾಖೆ ಸೂಕ್ತ ಉತ್ತರ ನೀಡಬೇಕು ಅಥವ ಸಿಎಂ ಸಿದ್ದರಾಮಯ್ಯ ಮೇಯರ್ ಅವರನ್ನು ಮುಂದುವರೆಸಲು ಅವಕಾಶ ನೀಡಬೇಕು ಬಳಿಕವಷ್ಟೇ ಹಾಲಿ ಮೇಯರ್ ಮುಂದುವರೆಯಲಿದ್ದಾರೆಯೇ ಅಥವಾ ಚುನಾವಣೆ ನಡೆಯಲಿದೆಯೇ ಎಂಬ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಗೊಂದಲ ಏಕೆ : 2010 ರ ಏ. 23ರಂದು ಪ್ರಥಮ ಕೌನ್ಸಿಲ್ ಸಭೆ ನಡೆದು ಮೇಯರ್, ಉಪ ಮೇಯರ್ ಆಯ್ಕೆ ನಡೆದಿತ್ತು. ಇದರಂತೆ ಪ್ರತಿ ವರ್ಷವೂ ಇದೇ ಅವಧಿಯಲ್ಲಿ ಮೇಯರ್ ಬದಲಾಗಬೇಕಿತ್ತು. ಆದರೆ, ಈ ಬಾರಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸೆ.4ರಂದು ನಡೆದಿದ್ದರಿಂದ ಅವಧಿ ಬಗ್ಗೆ ಗೊಂದಲ ಉಂಟಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ಸೂಚಿಸಬೇಕಾಗಿದೆ.












Click it and Unblock the Notifications