ಬೆಂಗಳೂರು : ನೀರಿನ ತೊಟ್ಟಿಗೆ ಮತ್ತೊಂದು ಮಗು ಬಲಿ
ಬೆಂಗಳೂರು, ಜೂ. 10 : ಬೆಂಗಳೂರಿನಲ್ಲಿ ನೀರಿನ ತೊಟ್ಟಿಗೆ ಬಿದ್ದು ಮಕ್ಕಳು ಸಾವನ್ನಪ್ಪುವ ಪ್ರಕರಣಗಳು ಕಡಿಮೆ ಆಗಿಲ್ಲ. ಸೋಮವಾರ ಉದಯನಗರದಲ್ಲಿ ಮನೆ ಮುಂದಿನ ನೀರಿನ ತೊಟ್ಟಿಗೆ ಬಿದ್ದು ನಾಲ್ಕು ವರ್ಷದ ಶ್ರಾವಣ್ಯ ಎಂಬ ಮಗು ಮೃತಪಟ್ಟಿದೆ.
ಸಿಲ್ಕ್ ಕಾರ್ಖಾನೆ ಸಮೀಪ ಉದಯನಗರ 2ನೇ ಕ್ರಾಸ್ ನಿವಾಸಿಯಾಗಿರುವ ಶೋಭಾ ಮತ್ತು ಶಿವಕುಮಾರ್ ದಂಪತಿಯ ಪುತ್ರಿ ಶ್ರಾವಣ್ಯ ಸಂಪ್ ಗೆ ಬಿದ್ದು ಮೃತಪಟ್ಟಿರುವ ಮಗು. ಸೋಮವಾರ ಸಂಜೆ ಶ್ರಾಮಣ್ಯ ತಾಯಿ ಶೋಭಾ ಬಟ್ಟೆ ತೊಳೆಯುತ್ತಿದ್ದರು. ಅಲ್ಲೇ ಮಗು ಆಟವಾಡುತ್ತಿತ್ತು.

ಬಟ್ಟೆಗಳನ್ನು ಒಣಗಿಹಾಕಲು ಶೋಭಾ ಅವರು ಮಹಡಿಯ ಮೇಲೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಂಪ್ ಬಾಗಿಲು ತೆರೆದಿತ್ತು. ಶ್ರಾಮಣ್ಯ ಅದಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಮೆಡಿಕಲ್ ರೆಪ್ರೆಸೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಶ್ರಾವಣ್ಯ ತಂದೆ ಶಿವಕುಮಾರ್ ಸಂಜೆ ಕೆಲಸದಿಂದ ಆಗಮಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಮಗುವನ್ನು ಸಂಪ್ ನಿಂದ ಎತ್ತಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ. [ನೀರಿನ ಸಂಪ್ ಗೆ ಇನ್ನೆಷ್ಟು ಬಲಿ ಬೇಕು?]
ತಾಯಿ, ಮಗು ಆತ್ಮಹತ್ಯೆ ಯತ್ನ : ಮಹಿಳೆಯೊಬ್ಬರು ತನ್ನ ಮಗುವಿಗೆ ಇಲಿ ಪಾಷಾಣ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾಷಾಣ ಸೇವಿಸಿದ ನಾಲ್ಕು ವರ್ಷದ ನಿತೀಶ್ ಮೃತಪಟ್ಟಿದ್ದು, ತಾಯಿ ಪಂಕಜ (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.












Click it and Unblock the Notifications