ಮೋರಿಯಲ್ಲಿ ಕೊಚ್ಚಿಹೋದ ಗೀತಾ ಶವ ಇನ್ನೂ ಸಿಕ್ಕಿಲ್ಲ
ಬೆಂಗಳೂರು, ಅ.8 : ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಬಳಿ ಕಾಲುಜಾರಿ ಚರಂಡಿಗೆ ಬಿದ್ದಿದ್ದ 9 ವರ್ಷದ ಬಾಲಕಿ ಗೀತಾ ಲಕ್ಷ್ಮೀ ಶವ 24 ಗಂಟೆ ಕಳೆದರೂ ಪತ್ತೆಯಾಗಿಲ್ಲ. ಮಂಗಳವಾರ ರಾತ್ರಿ ನಗರದಲ್ಲಿ ಪುನಃ ಮಳೆ ಸುರಿದಿದ್ದು, ಬಾಲಕಿ ಶವ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ.
ಬಿಬಿಎಂಪಿ, ಅಗ್ನಿಶಾಮಕ, ಗೃಹ ರಕ್ಷಕ ದಳ ಹಾಗೂ ಎನ್ಡಿಆರ್ಎಫ್ನ 150ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ದಿನವಿಡೀ ಶೋಧ ನಡೆಸಿದರೂ ಗೀತಾ ಶವ ಪತ್ತೆಯಾಗಿಲ್ಲ. ಆದ್ದರಿಂದ ಶೋಧ ಕಾರ್ಯ ಮುಂದುವರೆಸುವ ಬಗ್ಗೆ ಬುಧವಾರ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.

ತಮಿಳುನಾಡಿನಿಂದ ಮಂಗಳವಾರ ನಗರಕ್ಕೆ ಆಗಮಿಸಿದ ಗೀತಾ ತಂದೆ ಶಂಕರ್ ಮತ್ತು ತಾಯಿ ಕಸ್ತೂರಿ ಪುತ್ರಿಯನ್ನು ನೆನೆದು ಕಣ್ಣೀರಿಟ್ಟರು. ತಾತ, ಅಜ್ಜಿ ಕೂಡ ಮೊಮ್ಮಗಳ ನಿರೀಕ್ಷೆಯಲ್ಲೇ ಇಡೀ ದಿನ ಕಾರ್ಯಾಚರಣೆ ನಡೆದ ಸ್ಥಳದಲ್ಲಿದ್ದರು. ಆದರೆ, ಬಾಲಕಿ ದೇಹ ಮಾತ್ರ ದೊರೆಯಲಿಲ್ಲ. [ಭಾರೀ ಮಳೆ ಮೋರಿಯಲ್ಲಿ ಕೊಚ್ಚಿ ಹೋದ ಬಾಲಕಿ]
ದಸರಾ ರಜೆ ಕಳೆಯಲು ತಮಿಳುನಾಡಿನ ಕಡಲೂರಿನಿಂದ ಬೆಂಗಳೂರಿನ ಚಿಕ್ಕಮ್ಮನ ಮನೆಗೆ ಬಂದಿದ್ದ ಗೀತಾ ಲಕ್ಷ್ಮೀ ಸೋಮವಾರ ರಾತ್ರಿ 8.15ರ ಸುಮಾರಿಗೆ ಚರಂಡಿಗೆ ಕಾಲುಜಾರಿ ಬಿದ್ದಿದ್ದಳು. ಸೋಮವಾರ ರಾತ್ರಿ 9 ಗಂಟೆಯಿಂದ ಗೀತಾಳ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಾಲಕಿ ಕೊಚ್ಚಿಹೋದ ಸುಮಾರು 1.5 ಮೀಟರ್ ಆಳದ ಮೋರಿಯಲ್ಲಿ ಚಪ್ಪಡಿ ಕಲ್ಲುಗಳನ್ನು ತೆಗೆದು ಶೋಧಿಸಿದರೂ ಬಾಲಕಿಯ ಶವ ಪತ್ತೆಯಾಗಿಲ್ಲ.
ಮಂಗಳವಾರ ಪುನಃ ಮಳೆ : ಮಂಗಳವಾರ ರಾತ್ರಿ ನಗರದಲ್ಲಿ ಪುನಃ ಮಳೆಯಾಗಿದೆ. ನಾಯಂಡಹಳ್ಳಿ, ಕೆಂಗೇರಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಗರದ ಹಲವು ಬಡಾವಣೆಗಳಲ್ಲಿ ಮಳೆಯಾಗಿದ್ದು, ಬಾಲಕಿ ಮೃತದೇಹ ಹುಡುಕುವುದು ಮತ್ತಷ್ಟು ಸವಾಲಿನ ಕೆಲಸವಾಗಿದೆ.

ಎರಡು ದಿನ ಮಳೆ : ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅ.12ರಂದು ಆಂಧ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಭೀತಿ ಇದ್ದು, ಕರ್ನಾಟಕದ ಮೇಲೆ ನೇರ ಪರಿಣಾಮ ಬೀರದಿದ್ದರೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಇನ್ನೂ ಎರಡು ದಿನ ಮಳೆ ಮುಂದುವರೆಯಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications