ಗೀತಾ ವಿಷ್ಣು ಹಿಟ್ ಎಂಡ್ ರನ್ ಪ್ರಕರಣಕ್ಕೆ ಸ್ಫೋಟಕ ತಿರುವು
ಬೆಂಗಳೂರು, ಜನವರಿ 07 : ಉದ್ಯಮಿ ದಿ.ಆದಿಕೇಶವಲು ಮೊಮ್ಮಗ ಗೀತಾವಿಷ್ಣು ನಡೆಸಿದ ಹಿಟ್ ಎಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 2017ರ ಸೆಪ್ಟೆಂಬರ್ 28ರಂದು ಅಪಘಾತ ನಡೆದಿತ್ತು.
ಸಿಸಿಬಿ ಪೊಲೀಸರು ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 9 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಎಲ್ಲಾ ಆರೋಪಿಗಳು ಗಾಂಜಾ ಸೇವಿಸಿದ್ದರು ಎಂಬುದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಅಪಘಾತ ನಡೆದ ಎಸ್ಯುವಿ ಕಾರಿನಲ್ಲಿ 110 ಗ್ರಾಂ ಗಾಂಜಾ ಮತ್ತು 10 ಸಾವಿರ ರೂ. ಕ್ಯಾಶ್ ಪತ್ತೆಯಾಗಿದೆ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಹೇಳಿದ್ದಾರೆ. ಎಲ್ಲಾ ಆರೋಪಿಗಳ ರಕ್ತದ ಮಾದರಿಯಲ್ಲೂ ಗಾಂಜಾದ ಅಂಶ ಪತ್ತೆಯಾಗಿದೆ.
ಮೊದಲು ಜಯನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ ಸರ್ಕಾರ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಎಲ್ಲಾ ಆರೋಪಗಳ ರಕ್ತದ ಮಾದರಿಯನ್ನು ಸಂಗ್ರಹ ಮಾಡಿ ತನಿಖೆ ಆರಂಭಿಸಿತ್ತು.

ಹಿಟ್ ಎಂಡ್ ರನ್ ಪ್ರಕರಣ
2017ರ ಸೆಪ್ಟೆಂಬರ್ 28ರಂದು ಉದ್ಯಮಿ ದಿ.ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಮತ್ತು ಇತರರು ಪ್ರಯಾಣಿಸುತ್ತಿದ್ದ ಎಸ್ಯುವಿ ಕಾರು ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಬೆಂಗಳೂರಿನ ಸೌತ್ ಎಂಡ್ ವೃತ್ತದಲ್ಲಿನ ನಾಮಫಲಕಕ್ಕೆ ಗುದ್ದಿತ್ತು. ಈ ಪ್ರಕರಣದಲ್ಲಿ 6 ಜನರು ಗಾಯಗೊಂಡಿದ್ದರು. ಗೀತಾವಿಷ್ಣುವನ್ನು ಬಂಧಿಸಿದ್ದ ಪೊಲೀಸರು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಿಂದ ಅವರು ಪರಾಗಿಯಾಗಿದ್ದು, ದೊಡ್ಡ ಸುದ್ದಿಯಾಗಿತ್ತು.

ಸಿಸಿಬಿ ಮುಂದೆ ಶರಣಾಗಿದ್ದರು
ಮೊದಲು ಜಯನಗರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ಬಳಿಕ ಸರ್ಕಾರ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಿತ್ತು. ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಗೀತಾವಿಷ್ಣು ಕೆಲವು ದಿನಗಳ ಬಳಿಕ ಸಿಸಿಬಿ ಪೊಲೀಸರ ಮುಂದೆ ಶರಣಾಗಿದ್ದರು.

ಚಾರ್ಜ್ಶೀಟ್ನಲ್ಲಿ ಏನಿದೆ?
ಗೀತಾ ವಿಷ್ಣು ಗಾಂಜಾ ಸೇವನೆ ಮಾಡಿ ಕಾರು ಚಾಲಾಯಿಸಿದ್ದ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಹೇಳಿದ್ದಾರೆ. ಅಪಘಾತಗೊಂಡ ಎಸ್ಯುವಿ ಕಾರಿನಲ್ಲಿ 110 ಗ್ರಾಂ ಗಾಂಜಾ ಮತ್ತು 10 ಸಾವಿರ ರೂ. ಕ್ಯಾಶ್ ಪತ್ತೆಯಾಗಿದೆ. ಕಾರಿನಲ್ಲಿದ್ದ ಎಲ್ಲಾ ಆರೋಪಿಗಳ ರಕ್ತದ ಮಾದರಿಯಲ್ಲೂ ಗಾಂಜಾದ ಅಂಶ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಮಾದಕ ವ್ಯಸನಿಯಲ್ಲ
'ನಾನು ಮಾದಕ ವ್ಯಸನಿಯಲ್ಲ ಹೀಗಿರುವಾಗ ನನ್ನ ಕಾರಿನಲ್ಲಿ ಹೇಗೆ ಗಾಂಜಾ ಪತ್ತೆಯಾಗುತ್ತದೆ. ಅಪಘಾತವಾದ ಬಳಿಕ ಗದ್ದಲ ಉಂಟಾದಾಗ, ಯಾರೋ ಅದನ್ನು ನನ್ನ ಕಾರಿನಲ್ಲಿ ತಂದಿಟ್ಟಿರಬಹುದು. ಈ ಕುರಿತು ಎಂಥ ತನಿಖೆಗೂ ಸಿದ್ಧನಿದ್ದೇನೆ' ಎಂದು ಗೀತಾ ವಿಷ್ಣು ಹೇಳಿದ್ದರು.

9 ಆರೋಪಿಗಳು ಯಾರು?
ಸಿಸಿಬಿ ಪೊಲೀಸರು 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳು
* ಗೀತಾವಿಷ್ಣು
* ಪ್ರಣಮ್ ದೇವರಾಜ್
* ಶಶಾಂಕ್
* ಮಹಮದ್ ಫೈಜಲ್
* ಜುನೈದ್
* ವಿನೋದ್
* ರಾಜೇಶ್ ನಾಯ್ಡು
* ಚೈತನ್ಯ
* ಆನಂದ್












Click it and Unblock the Notifications