ಗೌರಿ ಹತ್ಯೆ ಚಾರ್ಜ್ ಶೀಟ್, ಭಗವಾನ್ ಹತ್ಯೆ ಸಂಚು ಹಾಗೂ ಬಂಧನ ಸುತ್ತ...
ಬೆಂಗಳೂರು, ಮೇ 30 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಗೌರಿ ಲಂಕೇಶ್ ಹತ್ಯೆಯ ಆರೋಪಿಯನ್ನಾಗಿ ಮಾಡಲಾಗಿದ್ದು, ಇದೀಗ ಆತನ ಜತೆಗೆ ಪ್ರವೀಣ್ ಅಲಿಯಾಸ್ ಸುಜಿತ್ ಕುಮಾರ್, ಅಮೂಲ್ ಕಾಳೆ, ಅಮಿತ್ ದಿಗ್ವೇಕರ್ ಅಲಿಯಾಸ್ ಪ್ರದೀಪ್ ಮಹಾಜನ್, ಮನೋಹರ್ ದುಂಡಪ್ಪ ಯಾವಡೆ ಎಂಬ ನಾಲ್ವರನ್ನು ಬಂಧಿಸಲಾಗಿದೆ.
ಈ ನಾಲ್ವರನ್ನು ನವೀನ್ ನೀಡಿದ ಮಾಹಿತಿ ಮೇಲೆ ಬಂಧಿಸಲಾಗಿದೆ. 2015ರ ಸೆಪ್ಟಂಬರ್ 9 ರಂದು ನಿವೃತ್ತ ಪ್ರೊಫೆಸರ್ ಕೆ.ಎಸ್ ಭಗವಾನ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದರಲ್ಲಿ ತಮ್ಮ ಪಾತ್ರವಿರುವುದಾಗಿ ಇವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಎಂ.ಎಂ ಕಲ್ಬುರ್ಗಿ ಹಾಗೂ ನರೇಂದ್ರ ದಾಬೋಲ್ಕರ್ ಅವರ ನಂತರ ಮುಂದಿನದ್ದು ನಿನ್ನ ಸರದಿ, ದಿನಗಳನ್ನು ಎಣಿಸುತ್ತಿರು ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಗೌರಿ ಹತ್ಯೆ ಪ್ರಕರಣದ ತನಿಖೆ ಆರಂಭದಲ್ಲಿ ಅನುಮಾನದ ಮೇಲೆ ಕೆಲ ಸಂಘಟನೆಗಳ ಮುಖಂಡರ ಹಾಗೂ ಕಾರ್ಯಕರ್ತರ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದೆವು. ಆಗ ಕೆ.ಎಸ್.ಭಗವಾನ್ ಅವರನ್ನು ಹತ್ಯೆಗೈಯ್ಯುವ ಬಗ್ಗೆ ನವೀನ್ ಹಾಗೂ ಸುಜಿತ್, ಒಂದೂವರೆ ತಾಸು ಮೊಬೈಲ್ ಸಂಭಾಷಣೆ ನಡೆಸಿದ್ದರು. ಆ ಕೂಡಲೇ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನವೀನ್ನನ್ನು ವಶಕ್ಕೆ ಪಡೆದಿದ್ದೆವು. ಆ ನಂತರ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಸುಜಿತ್ ನನ್ನು ಇತ್ತೀಚೆಗೆ ಮಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡೆವು ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿ ಹತ್ಯೆ ಬಗ್ಗೆ ಚರ್ಚೆ
ಇನ್ನು ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಯುತ್ತಿರುವ ರೀತಿ ಬಗ್ಗೆ ಗೌರಿ ಒಡನಾಡಿಯಾಗಿದ್ದ ಹಾಗೂ ಪತ್ರಕರ್ತರಾದ ಶಿವಸುಂದರ್ ಅವರ ಅಭಿಪ್ರಾಯವನ್ನು ಒನ್ಇಂಡಿಯಾ ಕನ್ನಡ ಕೇಳಿದಾಗ, ಯಾವ ಸಂಘಟನೆ ಬಗ್ಗೆ ಅನುಮಾನಗಳಿದ್ದವೋ ಸದ್ಯಕ್ಕೆ ತನಿಖೆ ನಡೆಯುತ್ತಿರುವ ದಿಕ್ಕು ಅತ್ತಲೇ ಬೊಟ್ಟು ಮಾಡುತ್ತಿವೆ. ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಆರೋಪಿಗಳ ಒಪ್ಪಿಕೊಂಡಿದ್ದಾರೆ ಹಾಗೂ ಗೌರಿ ಹತ್ಯೆ ಬಗ್ಗೆ ಚರ್ಚೆ ನಡೆಸಿದ್ದಾಗಿಯೂ ಗೊತ್ತಾಗಿದೆ ಎಂದರು.

ಸರಕಾರಗಳು ಬದಲಾಗುವುದರೊಳಗೆ ತನಿಖೆಗಳಾಗಬೇಕು
ನಾನು ಚಾರ್ಜ್ ಶೀಟ್ ಅನ್ನು ನೋಡಿಲ್ಲ. ನೂರಾ ಮೂವತ್ತೆರಡು ಸಾಕ್ಷ್ಯಗಳು ಇರುವುದಾಗಿ ಹೇಳಲಾಗುತ್ತಿದೆ. ಕೋರ್ಟ್ ನಲ್ಲಿ ಅವು ಬಹಳ ಮುಖ್ಯವಾಗುತ್ತವೆ. ಸರಕಾರಗಳು ಬದಲಾಗುವುದರೊಳಗೆ ತನಿಖೆಗಳಾಗಬೇಕು. ಇಲ್ಲದಿದ್ದಲ್ಲಿ ಪ್ರಕರಣ ದುರ್ಬಲವಾಗುತ್ತಾ ಹೋಗುತ್ತದೆ. ಗೌರಿ ಹತ್ಯೆಯ ತನಿಖೆ ನಡೆಯುವಾಗಲೇ ಇನ್ನೆರಡು ಪ್ರಕರಣಗಳು ಬಯಲಿಗೆ ಬಂದವು. ಆದರೆ ಅವೂ ತಾರ್ಕಿಕ ಅಂತ್ಯ ಕಾಣಬೇಕು ಎಂದು ಶಿವಸುಂದರ್ ಅಭಿಪ್ರಾಯ ಪಟ್ಟರು.

ವೃತ್ತಿಪರತೆ ಬಗ್ಗೆ ನಂಬಿಕೆ ಮೂಡುವಂತಿದೆ
ಈ ವರೆಗೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಯುತ್ತಿರುವ ದಿಕ್ಕಿದೆಯಲ್ಲಾ, ಅದು ಸರಿಯಾಗಿರುವಂತೆ ಕಾಣುತ್ತಿದೆ. ಜತೆಗೆ ತನಿಖೆ ಮಾಡುತ್ತಿರುವವರ ವೃತ್ತಿಪರತೆ ಬಗ್ಗೆಯೂ ನಂಬಿಕೆ ಮೂಡುವಂತಿದೆ. ಆದರೆ ಅದು ಮುಂದುವರಿಸಿಕೊಂಡು ಹೋಗುವ ಸವಾಲು ಎದುರಿಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎನ್ನುವುದಾದರೆ ಸರಕಾರ ಬದಲಾದಾಗ ತನಿಖೆಯ ದಿಕ್ಕು ಕೂಡ ಬದಲಾಗಬಹುದು ಎಂಬ ಅನುಮಾನ ಮೂಡುತ್ತದೆ ಎಂದು ಅವರು ಹೇಳಿದರು.

ಹತ್ಯೆಗೆ ಬಳಸಿದ ಗುಂಡಿನ ಲಕ್ಷಣಗಳು
ಇನ್ನು ವಿಧಿ ವಿಜ್ಞಾನ ತಜ್ಞರಾದ ಫಣೀಂದ್ರ ಅವರು ಮಾತನಾಡಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಒಂದೊಂದೇ ಸುಳುಹಿನ ಬೆನ್ನು ಹತ್ತಿ ಹೊರಟಿದ್ದಾರೆ. ಒಂದು ನಿರ್ದಿಷ್ಟ ಹಾಗೂ ಗಟ್ಟಿ ಸುಳಿವು ಇನ್ನೂ ಸಿಕ್ಕಂತೆ ಕಾಣುವುದಿಲ್ಲ. ಹತ್ಯೆಗೆ ಬಳಸಿದ ನಾಡ ಪಿಸ್ತೂಲಿನ ಗುಂಡಿನ ಲಕ್ಷಣಗಳು ನಕ್ಸಲರ ಪ್ರದೇಶದಲ್ಲಿ ಬಳಸುವಂಥದ್ದಾಗಿವೆ. ಹಾಗಂತ ಇಂತಹವರೇ ಹತ್ಯೆ ಮಾಡಿದರು ಎಂದು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದರು.












Click it and Unblock the Notifications