ಬೆಂಗಳೂರು: ನಾಲ್ಕು ಮಂದಿ ನೇಪಾಳಿ ಕಳ್ಳರ ಬಂಧನ
ಬೆಂಗಳೂರು, ಮೇ.14: ಆರ್ಪಿಸಿ ಲೇಔಟ್ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ವಿಜಯನಗರ ಪೊಲೀಸರು ಭೇದಿಸಿದ್ದಾರೆ. ವಿಜಯನಗರದ ಪೊಲೀಸರು ಮಹತ್ವದ ಕಾರ್ಯಾಚರಣೆಯಲ್ಲಿ ನಾಲ್ಕು ಜನ ನೇಪಾಳ ಆರೋಪಿಗಳನ್ನು ಬಂಧಿಸಿ ಅವರಿಂದ 68 ಲಕ್ಷ ಮೌಲ್ಯದ 2 ಕೆ.ಜಿ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಅರ್ಜುನ್ ಬಹದ್ದೂರ್(27),ನರೇಂದ್ರ ಬಹದ್ದೂರ್(35),ದೀಪಕ್ ಬಹದ್ದೂರ್(28),ಜಗತ್ ಬೋರ(35) ಬಂಧಿತ ಆರೋಪಿಗಳು. ಬಂಧಿತರಿಂದ 68 ಲಕ್ಷ ಮೌಲ್ಯದ 2 ಕೆ.ಜಿ. 218 ಗ್ರಾಂ ಚಿನ್ನಾಭರಣ, ಸುಮಾರು 3 ಕೆ.ಜಿ. 110 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರ್ಪಿಸಿ ಲೇಔಟ್ನ ಕೆ.ಎನ್.ರಾಮಚಂದ್ರ ಅವರ ಮನೆಯಲ್ಲಿ ಕಾರು ತೊಳೆಯುವ ಕೆಲಸ ಮಾಡಿಕೊಂಡಿದ್ದ ಅರ್ಜುನ್ ಬಹದ್ದೂರ್ ತಾಪ ಈ ಕಳ್ಳತನ ಪ್ರಮುಖ ರೂವಾರಿಯಾಗಿದ್ದಾನೆ. ಕೆ.ಎನ್.ರಾಮಚಂದ್ರ ಕುಟುಂಬ ಬೀಗ ಹಾಕಿ ಹೊರಗಡೆ ಹೋಗಿದ್ದಾಗ ಗೂರ್ಖಾ ಕೆಲಸ ಮಾಡಿಕೊಂಡಿರುವ ತನ್ನ ನಾಲ್ವರು ಸ್ನೇಹಿತರನ್ನು ಸೇರಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ ಐಷಾರಾಮಿ ಜೀವನ ನಡೆಸುವುದಕ್ಕಾಗಿ ಈ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾನೆ.

ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಾಚರಣೆ:
ಒಂಟಿ ಮಹಿಳೆಯರಿಗೆ ಸಿಹಿ ತಿಂಡಿ ನೀಡಿ ಅವರನ್ನು ಪ್ರಜ್ಞೆ ತಪ್ಪಿಸಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕಾಮಾಕ್ಷಿ ಪಾಳ್ಯದ ಪೊಲೀಸರು ಬಂಧಿಸಿದ್ದಾರೆ.
ಚಂದ್ರ ಅಲಿಯಾಸ್ ಡೊಂಗಿ ಚಂದ್ರ(25 ) ಬಂಧಿತ ಆರೋಪಿ. ಬಂಧಿತನಿಂದ 3 ಲಕ್ಷ ಮೌಲ್ಯದ 104 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2013ರಲ್ಲಿ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣ ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ಈ ಆರೋಪಿಯನ್ನು ಬಂಧಿಸಿದೆ.
ಆರೋಪಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರನ್ನು ಪರಿಚಯ ಮಾಡಿ ಸ್ನೇಹಿತನಂತೆ ವರ್ತಿಸುತ್ತಿದ್ದ. ಮಹಿಳೆಯರು ಒಬ್ಬರೆ ಮನೆಯಲ್ಲಿದ್ದಾಗ ಮನೆಗೆ ಹೋಗಿ ಅವಿಲ್ ಮಾತ್ರೆ ಮಿಶ್ರಿತ ಪುಡಿಯ ತಿಂಡಿಯನ್ನು ನೀಡಿ ಪ್ರಜ್ಞೆ ತಪ್ಪಿಸಿ, ಮಹಿಳೆಯರ ಮೇಲಿದ್ದ ಒಡವೆ ಮತ್ತು ಮನೆಯಲ್ಲಿದ್ದ ಒಡವೆಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications