ಬೆಂಗಳೂರು: ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು
ಬೆಂಗಳೂರು, ಜು.03 : ಸಾಲದ ಸುಳಿಗೆ ಸಿಲುಕಿದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸಂದ್ರದ ತಮ್ಮ ಮನೆಯಲ್ಲಿ ಭಾನುವಾರ ಗಂಡ, ಹೆಂಡತಿ ಸೇರಿ ಇಬ್ಬರು ಗಂಡು ಮಕ್ಕಳು ನೇಣಿಗೆ ಶರಣಾಗಿದ್ದಾರೆ.
45 ವರ್ಷದ ಜಗದೀಶ್ ಆತನ ಪತ್ನಿ ಕಸ್ತೂರಿ (38), ಮಕ್ಕಳಾದ ವಿನೋದ್ ಮತ್ತು ಬಾಲಚಂದ್ರ ಮೃತ ದುರ್ದೈವಿಗಳು. ಈ ನಾಲ್ವರು ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆಯಾದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಂಬಂಧಿಕರು ಕಿಟಕಿ ಒಡೆದು ನೋಡಿದಾಗ ನಾಲ್ವರು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತ ಜಗದೀಶ್ ಮೂಲತಃ ತಮಿಳುನಾಡಿನವರು. ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲೆ ನಲೆಸಿದ್ದಾರೆ. ಅಷ್ಟೇ ಅಲ್ಲದೆ ಕಷ್ಟಪಟ್ಟು ದುಡಿದು ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ್ದರು.
ಇದರ ಜತೆಗೆ ವರ್ಕ್ ಶಾಪ್ ಇಟ್ಟುಕೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಬ್ಯುಸಿನೆಸ್ ನಲ್ಲಿ ನಷ್ಟ ಆಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮನೆಯಲ್ಲಿ ಬೋಗ್ಯಕ್ಕೆ ಹಾಗೂ ಬಾಡಿಗೆಗೆ ಇದ್ದವರಿಗೆ ಇದೇ ತಿಂಗಳು 7 ಲಕ್ಷ ಹಣ ನೀಡಬೇಕಿತ್ತು. ಜಗದೀಶ್ ಗೆ ಈ ಸಾಲದ ಹಣ ಮತ್ತು ಬೋಗ್ಯದ ಹಣ ನೀಡಲಾಗದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.