ರವೀಂದ್ರನಾಥ್ ಯುವತಿ ಫೋಟೋ ತೆಗೆದಿದ್ದು ಖಚಿತ
ಬೆಂಗಳೂರು, ಜೂ. 24 : ಕಾಫಿ ಶಾಪ್ ನಲ್ಲಿ ಯುವತಿಯ ಫೋಟೋವನ್ನು ಐಪಿಎಸ್ ಅಧಿಕಾರಿ ಡಾ. ಪಿ. ರವೀಂದ್ರನಾಥ್ ತೆಗೆದಿರುವುದು ಗುಜರಾತ್ ವಿಧಿವಿಜ್ಞಾನ ಇಲಾಖೆ ನೀಡಿದ ವರದಿ ಮುಖಾಂತರ ಖಚಿತಪಟ್ಟಿದೆ ಎಂದು ತನಿಖೆ ನಡೆಸುತ್ತಿರುವ ಸಿಐಡಿ ವರದಿ ಸಲ್ಲಿಸಿದೆ.
ಹೆಚ್ಚುವರಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿರುವ ರವೀಂದ್ರನಾಥ್ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ನಲ್ಲಿ ಯುವತಿಯ ಎರಡು ಚಿತ್ರಗಳಿದ್ದುದು ದೃಢಪಟ್ಟಿತ್ತು. ಆದರೆ, ಆ ಚಿತ್ರಗಳನ್ನು ನಾನು ತೆಗೆದಿಲ್ಲ ಎಂದು ರವೀಂದ್ರನಾಥ್ ಅವರು ಹೇಳಿಕೆ ನೀಡುವಾಗ ಗೋಗರೆದಿದ್ದರು.
ಈಗ, ಅವರೇ ಯುವತಿಯ ಫೋಟೋಗಳನ್ನು ತೆಗೆದಿರುವುದು ಅಹ್ಮದಾಬಾದ್ ಫೋರೆನ್ಸಿಕ್ ಲ್ಯಾಬ್ ನಲ್ಲಿ ನಡೆಸಿದ ಪರೀಕ್ಷೆಯಿಂದ ಖಚಿತವಾಗಿರುವುದರಿಂದ ಅವರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದೆ. ಯುವತಿಯ ಗೌರವಕ್ಕೆ ಚ್ಯುತಿ ಬರುವಂತೆ ರವೀಂದ್ರನಾಥ್ ಅವರು ವರ್ತಿಸಿದ್ದರೆಂದು ಸಿಐಡಿ ತನ್ನ ವರದಿಯಲ್ಲಿ ತಿಳಿಸಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಶಾಪ್ ನಲ್ಲಿ ಮೇ 26ನೇ ತಾರೀಖಿನಂದು ಅನುಮತಿಯಿಲ್ಲದೆ ಯುವತಿಯ ಫೋಟೋ ತೆಗೆದು ರವೀಂದ್ರನಾಥ್ ಸಿಕ್ಕಿಬಿದ್ದಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿ ರವೀಂದ್ರನಾಥ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸಿದಾಗ ಶಾಪ್ ನಲ್ಲಿದ್ದವರು ಹಿಡಿದು ಥಳಿಸಿದ್ದರು. [ಎರಡು ಫೋಟೋ ಪತ್ತೆ]
ರವೀಂದ್ರನಾಥ್ ಅವರು ತಾವು ಎಡಿಜಿಪಿ ಎಂದು ಹೇಳಿಕೊಂಡರೂ ಲೆಕ್ಕಿಸದ ಸಬ್ಇನ್ಸ್ಪೆಕ್ಟರ್ ಅವರನ್ನು ಬಂಧಿಸಿ ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ದಿದ್ದರು. ರವೀಂದ್ರನಾಥ್ ಅವರು ಠಾಣೆಯಲ್ಲಿ ತಾವೇ ಬಟ್ಟೆಕಳಚಿ ರಂಪಾಟ ನಡೆಸಿದ್ದರು ಮತ್ತು ಇದು ತನ್ನ ವಿರುದ್ಧ ಹಿರಿಯ ಅಧಿಕಾರಿಗಳು ನಡೆಸಿದ ಸಂಚು ಎಂದು ಗಂಭೀರ ಆರೋಪ ಮಾಡಿದ್ದರು.
ದೂರು ಸಲ್ಲಿಸಿದ ನಂತರ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಿಂದ ಅವರನ್ನು ಎತ್ತಂಗಡಿ ಮಾಡಿ ಧಾರವಾಡದ ರಾಜ್ಯ ಪೊಲೀಸ್ ಸಂಶೋಧನೆ ಮತ್ತು ಪುನರ್ ರಚನಾ ವಿಭಾಗಕ್ಕೆ ಮಾಡಲಾಗಿತ್ತು. ಅಲ್ಲಿ ಕೂಡ ಅವರು ಅಧಿಕಾರ ವಹಿಸಿಕೊಳ್ಳಲು ಆರಂಭಕ್ಕೆ ನಿರಾಕರಿಸಿದ್ದರು.
ರವೀಂದ್ರನಾಥ್ ಅವರನ್ನು ಕೆಎಸ್ಆರ್ಪಿಯಿಂದ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಕೆಎಸ್ಆರ್ಪಿಯ ಸಿಬ್ಬಂದಿಗಳು ಕೋರಮಂಗಲದಲ್ಲಿ ಭಾರೀ ಪ್ರತಿಭಟನೆ ನಡೆಸಿ, ರಸ್ತೆತಡೆ ಮಾಡಿದ್ದರು. ಹಾಗು, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಅವರನ್ನು ರಾಜೀನಾಮೆ ನೀಡಬೇಕೆಂದು ಆಗ್ರಹಪಡಿಸಿದ್ದರು. [ರವೀಂದ್ರನಾಥ್ ಪರ ನಿಂತ ಮೀಸಲು ಪಡೆ]
ಈಗ ರವೀಂದ್ರನಾಥ್ ಅವರೇ ಫೋಟೋ ತೆಗೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಪ್ರಕರಣ ಒಂದು ಹಂತಕ್ಕೆ ಬಂದಂತಾಗಿದೆ. ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡುತ್ತಾರಾ ಎಂಬುದು ಕಾದುನೋಡಬೇಕಾಗಿದೆ.












Click it and Unblock the Notifications