ಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತ
1960ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದವು. ಈ ಸಭೆ ಸಮಾರಂಭಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡೇತರ ಹಾಡುಗಾರರು-ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿತ್ತು. ಕನ್ನಡನಾಡಿನ ಪ್ರತಿಭಾವಂತ ಕಲಾವಿದರು ಸಾಕಷ್ಟು ಮಂದಿ ಇದ್ದರೂ ಅವರು ಪ್ರಸಿದ್ಧರಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದರು.
ಅಂದು ಕನ್ನಡದ ನೆಲದಲ್ಲಿ ಕನ್ನಡಿಗ ಕಲಾವಿದನಿಗೆ ನ್ಯಾಯ ಸಿಗಬೇಕು ಮತ್ತು ಕನ್ನಡ-ಕನ್ನಡಿಗನಿಗೆ ಈ ನೆಲದಲ್ಲಿ ಸಾರ್ವಭೌಮತ್ವ ದೊರಕಿಸಿಕೊಡಲು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ ಅನಕೃ-ರಾಮಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೇ ಮಂದಿನ ಕನ್ನಡ ಚಳವಳಿಯ ಉದಯಕ್ಕೆ ನಾಂದಿಯಾಯಿತು.
In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಚಳವಳಿಯಿಂದ ಪ್ರೇರಿತರಾದ ಹಲವಾರು ಉತ್ಸಾಹಿಗಳು ನಂತರದಲ್ಲಿ ಕನ್ನಡ ಸಂಘಟನೆ, ಯುವಕ ಸಂಘ, ಗಣೇಶ ಮತ್ತು ರಾಮಸೇವಾ ಮಂಡಳಿಗಳನ್ನು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಕನ್ನಡ ಕಲೆ-ಕಲಾವಿದರ ಪೋಷಣೆಗೆ ಮುಂದಾದರು.
ಈಗ ಬೆಂಗಳೂರಿನಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಕೆಲದಿನ-ವಾರದವರೆಗೂ, ರಸ್ತೆ-ಬೀದಿ-ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಪದ್ಧತಿ ಚಾಲನೆಯಲ್ಲಿದೆ. ಈ ಗಣೇಶೋತ್ಸವಗಳಲ್ಲಿ ನಾಟ್ಯ-ಹಾಡು-ಹರಿಕತೆ-ನಾಟಕ-ಸಂಗೀತ ಕಾರ್ಯಕ್ರಮಗಳನ್ನೇರ್ಪಡಿಸುವುದು ವಾಡಿಕೆ. ಉದಯೋನ್ಮುಖ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಒದಗಿಸುವ ವೇದಿಕೆಯಾಗಿ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ಸಹ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಹಣವುಳ್ಳ ಕಾರ್ಪೊರೆಟ್ ಸಂಸ್ಥೆಗಳು, ಬಡಾವಣೆ ಅಂಗಡಿ ಮಾಲೀಕರ ಸಂಘದವರು ತಮ್ಮ ಉತ್ಪನ್ನ-ವಸ್ತುಗಳ ಪ್ರಚಾರಕ್ಕಾಗಿ ಪ್ರಾಯೋಜಕತ್ವ ನೀಡುವ ಮೂಲಕ ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ ಕಟ್ಟುವಲ್ಲಿ ಸಹ ಯಶಸ್ವಿಯಾಗಿದ್ದಾರೆ! ಆದರೆ ಮೆಲ್ಲಗೆ ಇಲ್ಲಿ ಕನ್ನಡ ಕಾರ್ಯಕ್ರಮಗಳು ಮತ್ತು ಕನ್ನಡ ಕಲಾವಿದರು ಅವಕಾಶದಿಂದ ವಂಚಿತರಾಗುತ್ತಿರುವುದು ಕಂಡು ಬರುತ್ತಿರುವ ಸತ್ಯ.
ಕನ್ನಡಿಗರೇ ಆಯೋಜಕರಾಗಿರುವೆಡೆ ಕನ್ನಡತನ ಪ್ರದರ್ಶನಕ್ಕೆ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾದರೆ, ಹೊಸ ಹೊಸ ಕನ್ನಡ ಪ್ರತಿಭೆಗಳು ಬೆಳಕಿಗೆ ಬರುವುದು ಮತ್ತು ಅವರಿಗೆ ಸೂಕ್ತ ಅವಕಾಶಗಳು ದೊರೆಯುವುದು ಹೇಗೆ? ನಮ್ಮಲ್ಲಿ ಇತರ ಭಾಷೆ-ಭಾಷಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಆಯೋಜಕರು, ಇತರ ರಾಜ್ಯಗಳಲ್ಲಿ ಕನ್ನಡ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶ ದೊರಕುತ್ತದೆಯೆ ಎಂದು ಯೋಚಿಸಿದ್ದಾರೆಯೆ?

ಅವಕಾಶ ದೊರಕದೆ ಕಣ್ಮರೆಯಾಗುತ್ತಿರುವ ನಮ್ಮದೆ ನೆಲದ ಕಲೆ-ನಿಪುಣತೆ-ಜಾನಪದ ಕೌಶಲ್ಯ ಪ್ರದರ್ಶನಕ್ಕೆ, ದೊಡ್ಡಮಟ್ಟದ ಪ್ರಾಯೋಜಕತ್ವ-ಪ್ರಚಾರದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅನುವು ಮಾಡಿಕೊಟ್ಟು, ಅವುಗಳನ್ನು ಉಳಿಸಿ ಬೆಳೆಸುವುದು ಇಂತಹ ಸಂಘಟನೆಗಳ ಮುಖ್ಯ ಕರ್ತವ್ಯವಾಗಬೇಕಿದೆ.












Click it and Unblock the Notifications