ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ವಿಧಾನಸೌಧದೆದುರು ರೈತರ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 09:ಕರ್ನಾಟಕದಲ್ಲೂ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ಒಳಗೊಂಡಂತೆ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ರೈತರು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿಸೆಂಬರ್ 8 ರಂದು ಭಾರತ ಬಂದ್ಗೆ ಬೆಂಬಲ ನೀಡಿದ್ದ ರೈತ ಪರ ಸಂಘಟನೆಗಳು ಇಂದು ಬೆಂಗಳೂರಲ್ಲಿ ಸಾಲು ಸಾಲು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.

ರೈತರ ಪರವಾಗಿ ರೈತ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳು ಬೀದಿಗಿಳಿಯಲಿವೆ. ಮುಖ್ಯವಾಗಿ 10 ಸಾವಿರಕ್ಕೂ ಹೆಚ್ಚು ರೈತರು ಇವತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಬರುತ್ತಿರುವ ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಆನಂದ್ರಾವ್ ಸರ್ಕಲ್ ಫ್ಲೈಓವರ್ ಮೂಲಕ ವಿಧಾನಸೌಧಕ್ಕೆ ಲಗ್ಗೆ ಇಡಲಿದ್ದಾರೆ.
ವಿಧಾನಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಕಡೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಸಂಗೊಳ್ಳಿರಾಯಣ್ಣ ಪ್ರತಿಮೆ, ಮೌರ್ಯ ಸರ್ಕಲ್ ಫ್ಲೈಓವರ್, ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗ್ತಿದೆ. 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತದೆ ಎಂದು ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ ಹೇಳಿದ್ದಾರೆ.
ರೈತ ವಿರೋಧಿ ಕಾನೂನುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಮನವಿ ಪತ್ರ ಸಲ್ಲಿಸಲಿದೆ.
ಕಾರ್ಪೋರೇಷನ್ ಸರ್ಕಲ್, ವಿಧಾನಸೌಧ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಇತ್ತ ರೈತರ ಬಾರುಕೋಲು ಚಳುವಳಿ, ವಿಧಾನಸೌಧ ಮುತ್ತಿಗೆಯನ್ನು ವಿಫಲಗೊಳಿಸಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.












Click it and Unblock the Notifications