ಬೆಂಗಳೂರು: ಫೇಸ್ಬುಕ್ನಲ್ಲಿ ನಿಂದಿಸಿದವನನ್ನು ರಸ್ತೆಯಲ್ಲೆ ಕೊಚ್ಚಿ ಕೊಂದರು
ಬೆಂಗಳೂರು, ಜನವರಿ 30: ಫೇಸ್ಬುಕ್ನಲ್ಲಿ ನಿಂದಿಸಿದನೆಂದು ಗುಂಪೊಂದು ಸೇರಿಕೊಂಡು ವ್ಯಕ್ತಿಯನ್ನು ಬರ್ಬರವಾಗಿ ರಸ್ತೆಯಲ್ಲಿಯೇ ಕೊಚ್ಚಿ ಕೊಂದಿದೆ.
ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಲೋಕೇಶ್ ಅಲಿಯಾಸ್ ಮಶಾಣ ಲೋಕಿಯ ಕೊಲೆ ಆದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಠಾಣೆ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹೇಮಂತ ಅಲಿಯಾಸ್ ಗಿಡಿಗಿಡಿ (25), ಆರ್ಆರ್ ನಗರದ ತೇಜಸ್ ಅಲಿಯಾಸ್ ಬುಲ್ಲಿ (22), ಕತ್ರಿಗುಪ್ಪೆಯ ಯಶವಂತ್ ಅಲಿಯಾಸ್ ಯಶು (21), ಇಟ್ಟಮಡು ನಿವಾಸಿ ಚಾಲಕ ವೃತ್ತಿ ಮಾಡುತ್ತಿದ್ದ ಸಾಗರ ಅಲಿಯಾಸ್ 7-ಸಾಗರ (22), ಜಯನಗರದ ಪ್ರವೀಣ್ ಅಲಿಯಾಸ್ ಶೂಟರ್ (22), ಚಾಮರಾಜಪೇಟೆಯ ಆಜಾದ್ ನಗರದ ಸಂದೇಶ್ ಅಲಿಯಾಸ್ ಚಾರ್ಲಿ (22), ಇಟ್ಟಮಡು ಮುಖ್ಯರಸ್ತೆಯ ವಾಸಿ ಉದಯ್ ಅಲಿಯಾಸ್ ಕಪ್ಪೆ (19), ಶ್ರೀನಗರದ ನಿವಾಸಿ ವಿದ್ಯಾರ್ಥಿ ಸಾಗರ್ ಅಲಿಯಾಸ್ ಸಾಗಿ (19), ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಆರ್ ಪುರನ ರವಿ (23) ಬಂಧಿತ ಆರೋಪಿಗಳು.

ಕೊಲೆಯಾದ ಲೋಕೇಶ 'ಮುಕ್ಕು-ಮುಕ್ಕು' ಎಂಬ ಫೇಕ್ ಫೇಸ್ಬುಕ್ ಐಡಿ ಸೃಷ್ಟಿಸಿ ಸೃಷ್ಟಿಸಿಕೊಂಡು ಹೇಮಂತ ಎಂಬುವನ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಶಬ್ಧಗಳಿಂದ ಬೈದು ಪೋಸ್ಟ್ಗಳನ್ನು ಹಾಕುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಸಹ ಆಗಿತ್ತು.
ರೌಡಿ ಶೀಟರ್ ಆಗಿದ್ದ ಲೋಕೇಶನನ್ನು ಕೊಲೆ ಮಾಡಿದರೆ ಏರಿಯಾದಲ್ಲಿ ಹೆಸರು ಮಾಡಬಹುದು ಎಂದು ವಿದ್ಯಾರ್ಥಿ ಸಾಗರ ಎಂಬಾತ ಹೇಮಂತನಿಗೆ 'ಸಲಹೆ' ನೀಡಿ, ಕೊಲೆಗೆ ಪ್ರೇರಣೆ ನೀಡಿದ್ದಾನೆ. ಅದರಂತೆ ಲೋಕೇಶನನ್ನು ಕೊಲ್ಲಲು ಹನುಮ ಜಯಂತಿಯಂದೆ 'ಸ್ಕೆಚ್' ಹಾಕಿದ್ದ ಗುಂಪು ಅಂದಿನಿಂದಲೂ ದಿನವೂ ಮಚ್ಚು-ಲಾಂಗ್ಗಳೊಂದಿಗೆ ಕಾದು ಕೊನೆಗೆ ಜನವರಿ 22 ರಂದು ಹತ್ಯೆ ಮಾಡಿದ್ದಾರೆ.
ಜನವರಿ 22ರಂದು ರಾತ್ರಿ ಲೋಕೇಶ ತನ್ನ ಸಂಬಂಧಿ ನಂದಾ ಎಂಬುವನೊಂದಿಗೆ ಆಜಾದ್ ನಗರದಲ್ಲಿ ಹೋಗುತ್ತಿದ್ದ. ಇದನ್ನು ಗಮನಿಸಿದ ಸಂದೇಶ್ ಅಲಿಯಾಸ್ ಚಾರ್ಲಿ ಎಂಬಾತ ಲೋಕೇಶನನ್ನು ಮಾತನಾಡಿಸುತ್ತಾ ನಿಲ್ಲಿಸಿಕೊಂಡ. ಈಗಾಗಲೇ ಹೊಂಚು ಹಾಕಿ ಕಾಯುತ್ತಿದ್ದ ಇತರ ಆರೋಪಿಗಳಿಗೆ ವಿಷಯ ತಿಳಿದು ಎಲ್ಲರೂ ಏಕಾಏಕಿ ಸ್ಥಳಕ್ಕೆ ಬಂದು ಒಂಟಿಯಾಗಿದ್ದ ಲೋಕೇಶನ ಮೇಲೆ ಮುಗಿ ಬಿದ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಎಲ್ಲಾ ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications