ರಾಮನಗರದ ಅವ್ವೇರಹಳ್ಳಿಯಲ್ಲಿ ಕಾಡಾನೆ ಸಿದ್ದ ಸಾವು
99 ದಿನಗಳ ಹೋರಾಟದ ನಂತರ ಕಾಡಾನೆ ಸಿದ್ದ ಜೀವ ಬಿಟ್ಟಿದ್ದಾನೆ. ವನ್ಯಜೀವಿ ತಜ್ಞರ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಗುರುವಾರ ರಾತ್ರಿ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಜೀವ ಬಿಟ್ಟಿದೆ.
ಬೆಂಗಳೂರು, ಡಿಸೆಂಬರ್ 9: ಚೇತರಿಕೆ ಕಂಡಿದ್ದ ಕಾಡಾನೆ ಸಿದ್ದ ಗುರುವಾರ (ಡಿಸೆಂಬರ್ 8) ರಾತ್ರಿ ಸಾವನ್ನಪ್ಪಿದೆ. ಕಾಲು ಮುರಿದುಕೊಂಡಿದ್ದ ಸಿದ್ದ 99 ದಿನಗಳ ತೀವ್ರ ಹೋರಾಟ ನಡೆಸಿತ್ತು. ಆದರೆ ಗುರುವಾರ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಜೀವ ಬಿಟ್ಟಿದೆ. ಕ್ರೇನ್ ಸಹಾಯದಿಂದ ಗ್ಯಾಂಟ್ರಿ ಟವರ್ ನಲ್ಲಿ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
ಆಗಸ್ಟ್ ನಲ್ಲಿ ಬನ್ನೇರುಘಟ್ಟದಿಂದ ಮೇವಿಗಾಗಿ ಬಂದು ವಾಪಸಾಗುತ್ತಿದ್ದ ವೇಳೆ ಸಿದ್ದನ ಕಾಲು ಮುರಿದಿತ್ತು. ಆ ನಂತರ ಸರಕಾರವೇ ಮುತುವರ್ಜಿ ವಹಿಸಿ, ಚಿಕಿತ್ಸೆಗಾಗಿ ಸಮಿತಿಯೊಂದನ್ನು ರಚಿಸಿ, ಮಂಚನಬೆಲೆಯ ಅವ್ವೇರಹಳ್ಳಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು. ಅರಣ್ಯ ಇಲಾಖೆಯು ವೈಲ್ಡ್ ಲೈಫ್ ಎಸ್ ಒಎಸ್ ಎಂಬ ಸಂಸ್ಥೆ ಸಹಕಾರದ ಜತೆಗೆ ಸಿದ್ದನ ಚಿಕಿತ್ಸೆ ನಡೆಸುತ್ತಿತ್ತು.[ಕಾಡಾನೆ ಸಿದ್ದ ಚೇತರಿಕೆ, ವೈದ್ಯರ ರಾಜೋಪಚಾರ]

ಈ ಸಿದ್ದ ಬನ್ನೇರುಘಟ್ಟದ ಕಾಡಾನೆ. ಇಪ್ಪತ್ತೈದರಿಂದ ಮೂವತ್ತು ವರ್ಷ ವಯಸ್ಸಾಗಿತ್ತು. ಸಿದ್ದನಿಗೆ ನೋವು ನಿವಾರಕ ಔಷಧ ಮತ್ತಿತರ ಔಷಧ ನೀಡಲಾಗುತ್ತಿತ್ತು. ಅರಣ್ಯ ಇಲಾಖೆಯು ಸಿದ್ದನ ಚಿಕಿತ್ಸೆಗಾಗಿಯೇ ಸಮಿತಿಯೊಂದನ್ನು ರಚಿಸಿತ್ತು. ಅದರಲ್ಲಿ ತಜ್ಞರು ಇದ್ದರು. ಗುವಾಹತಿಯಿಂದ ಡಾ.ಕುಶಾಲ್ ಶರ್ಮಾ, ಕೇರಳದಿಂದ ಡಾ.ಅರುಣ್ ಅವರು ಬಂದು ಚಿಕಿತ್ಸೆ ನೀಡಿದ್ದರು.












Click it and Unblock the Notifications