'ಮಾಲಿಕ ಎಷ್ಟೇ ಬಲಿಷ್ಠನಾಗಿರಲಿ, ಆತನನ್ನು ಬಿಡುವುದಿಲ್ಲ'

ಬೆಂಗಳೂರು, ಡಿಸೆಂಬರ್ 16 : ಇನ್ನೆರಡು ತಿಂಗಳಲ್ಲಿ ಏಳು ವರ್ಷಕ್ಕೆ ಕಾಲಿಡಲಿರುವ ಮೊಮ್ಮಗ ಎಲ್ಲಿ ಮೆಟ್ಟಿಲು ಇಳಿಯುವಾಗ ಬೀಳುತ್ತಾನೋ ಎಂಬ ಧಾವಂತದಲ್ಲಿ, ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅಜ್ಜಿ ಎರಡು ಹೆಜ್ಜೆ ವೇಗವಾಗಿಯೇ ಹೆಜ್ಜೆ ಹಾಕಿದರು. ಆದರೆ, ಅಷ್ಟರಲ್ಲಿ ಅನಾಹುತ ಸಂಭವಿಸಿಯೇಬಿಟ್ಟಿತ್ತು.

ಮನೆ ಬಾಗಿಲ ಪಕ್ಕದಲ್ಲಿ, ನಿರ್ಮಾಣ ಹಂತದಲ್ಲಿದ್ದ ತೆರೆದುಕೊಂಡಿದ್ದ ಲಿಫ್ಟ್ ಗುಂಡಿಯೊಳಗೆ 71 ವರ್ಷದ ವಯೋವೃದ್ಧ ಮೋಹಿನಿ ಶ್ರೀವಾಸ್ತವ ಅವರು ಬಿದ್ದುಬಿಟ್ಟಿದ್ದರು. ಬ್ಯಾಗನ್ನು ಹೊತ್ತುಕೊಂಡು ಅಮ್ಮ ಮತ್ತು ಅಪ್ಪನನ್ನು ತನ್ನ ಸಹೋದರನ ಮನೆಗೆ ಬಿಡಲೆಂದು ಹೊರಬರುತ್ತಿದ್ದ ಮಗನ ಕಣ್ಣಮುಂದೆಯೇ ದುರ್ಘಟನೆ ಸಂಭವಿಸಿತ್ತು.

ಹೆಬ್ಬಾಳದಲ್ಲಿರುವ ಈಶ್ವರಿ ಎನ್‌ಕ್ಲೇವ್ ಅಪಾರ್ಟ್ಮೆಂಟಿನಲ್ಲಿರುವ ಮೃತ್ಯುರೂಪಿ ಲಿಫ್ಟ್ ಗುಂಡಿಯೊಳಗೆ ಬಿದ್ದ ಮಾಲಿನಿಯವರ ಎರಡೂ ಕಾಲುಗಳು ಮುರಿದಿದ್ದವು. 'ಬೇಟಾ ಬಚಾವೋ, ಬೇಟಾ ಬಚಾವೋ' ಎಂದು ಅವರು ಅರಚುತ್ತಲೇ ಇದ್ದರು. 108 ಆ್ಯಂಬುಲೆನ್ಸ್ ಬಂದು ಏಳೂವರೆ ಎಂಟು ಅಡಿ ಕೆಳಗಿದ್ದ ಗುಂಡಿಯೊಳಗೆ ಬಿದ್ದಿದ್ದ ಮೋಹಿನಿ ಅವರನ್ನು ಸ್ಟ್ರೆಚರ್ ಮೇಲೆ ಮಲಗಿರುವವರೆಗೆ ಅವರಿಗೆ ಪ್ರಜ್ಞೆ ಇತ್ತು. [ವೃದ್ಧರನ್ನು ಬಲಿ ತೆಗೆದುಕೊಂಡ ಫೋರ್ಟಿಸ್ ಆಸ್ಪತ್ರೆ ಲಿಫ್ಟ್]

Elderly women falls in open lift pit and dies in Bengaluru

ಆದರೆ, ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಾಗಿಸಿದ ಕೆಲವೇ ಗಂಟೆಯೊಳಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಅವರು ಇಹಲೋಕ ತ್ಯಜಿಸಿದರು. ಆರೂ ಮುಕ್ಕಾಲು ವರ್ಷದ ಮೊಮ್ಮಗ ಅದ್ವಿತೀಯ 'ಅಜ್ಜಿ ಅಜ್ಜಿ' ಎಂದು ಹಲುಬುತ್ತಲೇ ಇದ್ದಾನೆ. ಆದರೆ ಅಜ್ಜಿ ಮಾತ್ರ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟಿದ್ದಾರೆ. 48 ವರ್ಷ ಮೋಹಿನಿಯವರೊಂದಿಗೆ ಜೀವನ ಸಾಗಿಸಿದ್ದ ಗಂಡ ಇಂದು ಏಕಾಂಗಿ!

ಬೆಂಗಳೂರಿನ ಪ್ಯಾಕೇಜಿಂಗ್ ಕಂಪನಿಯೊಂದರಲ್ಲಿ ರೀಜನಲ್ ಮ್ಯಾನೇಜರ್ ಆಗಿರುವ ಹೇಮೇಂದ್ರ ಕುಮಾರ್ ಶ್ರೀವಾಸ್ತವ ಅವರು ಆರು ತಿಂಗಳಿನಿಂದ ಈ ಅಪಾರ್ಟ್ಮೆಂಟಿನಲ್ಲಿ ಬಾಡಿಗೆಗಿದ್ದಾರೆ. ಆದರೆ, ದುರಂತ ಬಾಗಿಲ ಪಕ್ಕದಲ್ಲಿಯೇ ಬಾಯಿ ತೆರೆದುಕೊಂಡಿದೆ ಎಂಬುದರ ಅರಿವು ಅವರಿಗೆ ಎಳ್ಳಷ್ಟೂ ಇರಲಿಲ್ಲ. [ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು]

ಅಗತ್ಯಗಳು ಹೆಚ್ಚಾಗಿದ್ದರಿಂದ ಮತ್ತೊಂದು ಲಿಫ್ಟ್ ಬೇಕೆಂದು ನಿರ್ಮಾಣ ಆರಂಭಿಸಲಾಗಿತ್ತು. ಆದರೆ, ಕಟ್ಟಡ ಮಾಲಿಕ ಇಡೀ ನಾಲ್ಕು ಮಹಡಿಯಲ್ಲಿ ತೆರೆದುಕೊಂಡಿದ್ದ ಲಿಫ್ಟ್ ಜಾಗವನ್ನು ಮುಚ್ಚಿರಲಿಲ್ಲ. ಕನಿಷ್ಠಪಕ್ಷ ಕಟ್ಟಿಗೆಗಳನ್ನೂ ಅಡ್ಡ ಇಟ್ಟಿರಲಿಲ್ಲ. ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಕಟ್ಟಡ ಮಾಲಿಕನದು ದಿವ್ಯ ನಿರ್ಲಕ್ಷ್ಯ.

ಹೆಬ್ಬಾಳದ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲಾಗಿದೆ. ಯಾರ ವಿರುದ್ಧ ಸಲ್ಲಿಸುವುದು? ಹೇಮೇಂದ್ರ ಬಾಡಿಗೆಗಿದ್ದರಿಂದ ಕಟ್ಟಡ ಮಾಲಿಕನ ವಿವರ ಅವರಿಗಿಲ್ಲ. ಅಪಾರ್ಟ್ಮೆಂಟ್‌ನ ಸೊಸೈಟಿ ಅಧಿಕೃತವಾಗಿ ನೊಂದಣಿಯಾಗಿಲ್ಲದಿರುವುದು ತೊಂದರೆಯಾಗಿ ಪರಿಣಮಿಸಿದೆ. ಕಟ್ಟಡ ಮಾಲಿಕ ಯಾರೆಂದು ಕೇಳಿದಾಗ, ಆತ ಭಾರೀ ದೊಡ್ಡ ಕುಳ, ಸುಮ್ಮನೆ ಆತನ ವಿರುದ್ಧ ಯಾಕೆ ನಿಲ್ಲುತ್ತೀರಿ ಎಂಬ ಮಾತು ಕೂಡ ಕೇಳಿಬಂದಿದೆ ಎಂದು ಹೇಮೇಂದ್ರ ಒನ್ಇಂಡಿಯಾಗೆ ತಿಳಿಸಿದರು.

ಆತ ಎಷ್ಟೇ ಬಲಿಷ್ಠನಾಗಿರಲಿ ನಾನು ಆತನನ್ನು ಬಿಡುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಹೇಮೇಂದ್ರ ಕುಮಾರ್ ನುಡಿದರು. ಇದು ಈ ಕಟ್ಟಡ ಮಾಲಿಕನಿಗೆ ಮಾತ್ರವಲ್ಲ, ಈರೀತಿಯಾಗಿ ನಿರ್ಲಕ್ಷ್ಯ ತೋರುತ್ತಿರುವ ಎಲ್ಲ ರಿಯಲ್ ಎಸ್ಟೇಟ್ ಮಾಲಿಕರಿಗೆ ಪಾಠವಾಗಬೇಕು ಎಂದು ಹೇಮೇಂದ್ರ ಪಣ ತೊಟ್ಟಿದ್ದಾರೆ.

ಬೆಂಗಳೂರಿನ ಅಪಾರ್ಟ್ಮೆಂಟುಗಳಲ್ಲಿ ಇಂತಹ ದುರ್ಘಟನೆಗಳಿಗೆ ಮೊದಲುಕೊನೆ ಎಂಬುದಿಲ್ಲ. ಇಂದು ಇಲ್ಲಿ, ನಾಳೆ ಇನ್ನೆಲ್ಲೋ? ನಾಯಿಕೊಡೆಗಳಿಗಿಂತ ವೇಗವಾಗಿ ಹುಟ್ಟಿಕೊಳ್ಳುತ್ತಿರುವ ವಸತಿಸಮುಚ್ಚಯಗಳು ನಾಗರಿಕರಿಗೆ ತಂದೊಡ್ಡುತ್ತಿರುವ ಸಮಸ್ಯೆಗಳ ಗುಡ್ಡೆ ಎಂಥದೆನ್ನುವುದಕ್ಕೆ ಈ ದುರ್ಘಟನೆಯೇ ಸಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+