Ejipura Flyover : ಕೋರಮಂಗಲ ಈಜಿಪುರ ಮೇಲ್ಸೆತುವೆ ಕಾಮಗಾರಿ 2024 ಮಾರ್ಚ್ಗೆ ಪೂರ್ಣ ಸಾಧ್ಯತೆ
ಬೆಂಗಳೂರು, ಜನವರಿ 04: ನಿರೀಕ್ಷಿತ ಗಡುವಿನಲ್ಲಿ ಪೂರ್ಣಗೊಳ್ಳದ ಬೆಂಗಳೂರಿನ ಈಜಿಪುರ ಕೇಂದ್ರೀಯ ಸದನ ಮೇಲ್ಸೇತುವೆಯು 2024 ಮಾರ್ಚ್ ಒಳಗೆ ಸಿದ್ಧಗೊಳ್ಳಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭರವಸೆ ನೀಡಿದೆ.
ವಿವಿಧ ಬಡಾವಣೆಗಳ ಕಲ್ಯಾಣ ಸಂಘಗಳ ಪ್ರತಿನಿಧಿಗಳಿಗೆ ಬಿಬಿಎಂಪಿ ಮೇಲ್ಸೇತುವೆ ಕಾಮಗಾರಿ ಕುರಿತು ಭರವಸೆ ನೀಡಿತು. ಕೋರಮಂಗಲದ ಈಜಿಪುರದಲ್ಲಿನ 100 ಅಡಿ ರಸ್ತೆಯಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 2.5 ಕಿಮೀ ಉದ್ದದ ಮೇಲ್ಸೇತುವೆಯ ಕಾಮಗಾರಿ ಮೇ 2017 ರಲ್ಲಿ ಆರಂಭವಾಗಿತ್ತು. ಈ ಯೋಜನೆಗೆ 2019ರೊಳಗೆ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿತ್ತು. ಆದರೆ ನಿರೀಕ್ಷಿತ ಅವಧಿಯಲ್ಲಿ ಮೇಲ್ಸೇತುವೆ ನಿರ್ಮಿಸುವಲ್ಲಿ ಬಿಬಿಎಂಪಿ ವಿಫಲವಾಯಿತು.
ಸದ್ಯ 50 ಕೋಟಿ ರೂ. ಯೋಜನಾ ವೆಚ್ಚ ಮೀರಿರುವ ಈ ಮೇಲ್ಸೇತುವೆ ನಿರ್ಮಾಣವನ್ನು 2017ರಲ್ಲಿ ಕೋಲ್ಕತ್ತಾ ಮೂಲದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಆರಂಭಿಸಿತು. ಖಾಸಗಿ ಭೂಮಿ ವರ್ಗಾವಣೆ ಪ್ರಕ್ರಿಯೆ, 40 ಕ್ಕೂ ಹೆಚ್ಚು ಮರಗಳ ತೆರವು, ಗುತ್ತಿಗೆದಾರರ ದಿವಾಳಿತನ ಸೇರಿದಂತೆ ಕಾನೂನು ಸಮಸ್ಯೆಗಳನ್ನು ನಿಭಾಯಿಸಲು ಬಿಬಿಎಂಪಿ ವಿಫಲವಾಗಿದ್ದರಿಂದ ಹಲವು ಗಡುವುಗಳು ಮೀರಿದವು.

12 ರಿಂದ 15 ತಿಂಗಳೊಳಗೆ ಯೋಜನೆ ಪೂರ್ಣ
ಯೋಜನೆಯ ಬಗ್ಗೆ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದ್ದರಿಂದ ಬಿಬಿಎಂಪಿ ಗುತ್ತಿಗೆಯನ್ನು ರದ್ದುಗೊಳಿಸಿತು. ಇದಾದ ಬಳಿಕ ಕಳೆದ ವರ್ಷ 2022 ಆಗಸ್ಟನಲ್ಲಿ ಹೊಸ ಟೆಂಡರ್ ಕರೆಯಿತು. ಅದು ಸಹ ರದ್ದಾಗಿದ್ದರಿಂದ ತಿಂಗಳ ಹಿಂದಷ್ಟೇ ಮತ್ತೆ ಬಿಬಿಎಂಪಿ ಟೆಂಡರ್ ಕರೆದಿದ್ದು, ಆ ಪ್ರಕ್ರಿಯೆಯು ನಡೆಯುತ್ತಿದೆ. ಒಮ್ಮೆ ಯಶಸ್ವಿ ಗುತ್ತಿಗೆದಾರರಿಗೆ ಕೆಲಸವನ್ನು ನೀಡಿದರೆ, ಫೆಬ್ರವರಿ 2023 ರಿಂದ 12 ರಿಂದ 15 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ದಕ್ಷಿಣ ವಿಭಾಗದ ಜಂಟಿ ಆಯುಕ್ತ ಡಾ ಜಗದೀಶ್ ಕೆ ನಾಯಕ್ ಹೇಳಿದರು.

ಯೋಜನೆಗಾಗಿ 12 ಆಸ್ತಿಗಳ ಸ್ವಾಧೀನ ಪ್ರಕ್ರಿಯೆ ಬಾಕಿ
ಅಲ್ಲದೇ ಯೋಜನೆಗೆ ಬೇಕಾದ ಆಸ್ತಿಗಾಗಿ ಮಾಲೀಕರಿಗೆ 35 ಕೋಟಿ ಪರಿಹಾರ ನೀಡುವ ಮೂಲಕ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸಲಿದ್ದೇವೆ. ರಾಜ್ಯ ಸರ್ಕಾರದ ಮಧ್ಯಪ್ರವೇಶದ ನಂತರ ರಕ್ಷಣಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿದೆ. ಪ್ರಸ್ತುತ ಗುರುತಿಸಲಾದ 58 ಆಸ್ತಿಗಳ ಪೈಕಿ 12 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ.
ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಕಾಮಗಾರಿಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಯೋಜನೆಯ ವೆಚ್ಚ 50 ಕೋಟಿ ರೂಪಾಯಿ ಮೀರಿದ್ದರಿಂದ ಬಿಬಿಎಂಪಿ ಸರ್ಕಾರ ನೇಮಿಸಿದ ಸಮಿತಿಯ ಟೆಂಡರ್ನ ಅನುಮೋದನೆಗಾಗಿ ಕಾಯುತ್ತಿದೆ ಎಂದರು.

ಯೋಜನೆ ಪೂರ್ಣಗೊಳಿಸಿದವರಿಗೆ ಟೆಂಡರ್ ನೀಡಿ
ಬಿಬಿಎಂಪಿ ಅಧಿಕಾರಿಗಳು ಗಡುವು ನಿಗದಿಪಡಿಸಿ ನಗರದಲ್ಲಿ ಈಗಾಗಲೇ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದ ಕಂಪನಿಗಳನ್ನು ಟೆಂಡರ್ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಯೋಜನೆ ಆರಂಭಿಸಿ ಐದು ವರ್ಷ ಕಳೆದರೂ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಯೋಜನೆ ಪೂರ್ಣಗೊಳಿಸುವುದು ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಸ್ತೆ ಬದಿ ಅವಶೇಷ ತೆರವಿಗೆ ಮನವಿ
ಕೋರಮಂಗಲ ಎಸ್ಟಿ ಬೆಡ್ ಲೇಔಟ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಎಂ. ರಾಜೇಂದ್ರ ಬಾಬು ಮಾತನಾಡಿ, ಕಾಮಗಾರಿಯ ಮೇಲ್ವಿಚಾರಣೆಗೆ ಬಿಬಿಎಂಪಿ ಪ್ರತ್ಯೇಕ ಎಂಜಿನಿಯರ್ಗಳನ್ನು ನೇಮಿಸಿರುವುದರಿಂದ, ಹೊಸ 2024 ರ ಗಡುವಿನೊಳಗೆ ಕೆಲಸ ಮುಗಿಸುವ ಭರವಸೆ ಇದೆ. ಅಲ್ಲಿಯವರೆಗೆ ತೊಂದರೆ ನೀಡಬಹುದಾದ ರಸ್ತೆ ಇಕ್ಕೇಲಗಳಲ್ಲಿ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದರು.
ಕಾಮಗಾರಿ ವಿಳಂಬದಿಂದ ಹಲವು ಸಮಸ್ಯೆ ಸೃಷ್ಟಿಯಾಗಿವೆ. ಅವುಗಳನ್ನು ಬಗೆಹರಿಸಬೇಕು. ಮಳೆಯಿಂದಾಗಿ ಕೆಲವು ವಿದ್ಯುತ್ ಕೇಬಲ್ಗಳು ತುಕ್ಕು ಹಿಡಿದಿವೆ. ಅನಾಹುತಗಳು ಸಂಭವಿಸುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಂಡು ಕೇಬಲ್ಗಳನ್ನು ಬದಲಾಯಿಸಬೇಕು ಎಂದರು.












Click it and Unblock the Notifications