ನರೇಂದ್ರ ಮೋದಿ ವಿರುದ್ಧ ದೊರೆಸ್ವಾಮಿ ಹೇಳಿದ್ದೇನು?

ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಏಕೀಕರಣ ಸಾಧಕರಿಗೆ ಸನ್ಮಾನಸಮಾರಂಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬೃಹತ್ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಪ್ರತಿಮೆಗಾಗಿ ಪ್ರತಿಯೊಬ್ಬ ದೇಶವಾಸಿಯೂ ಗುಜರಿಯಲ್ಲಿನ ಕಬ್ಬಿಣ ನೀಡುವಂತೆ ಕರೆ ನೀಡಿದ್ದಾರೆ.
ಗುಜರಿ ಕಬ್ಬಿಣದಿಂದ ಪ್ರತಿಮೆ ನಿರ್ಮಾಣವಾಗಬೇಕಾದ ದುರ್ಗತಿ ಉಕ್ಕಿನ ಮನುಷ್ಯ ಪಟೇಲ್ ಅವರಿಗೆ ಬರಬಾರದಾಗಿತ್ತು. ಪ್ರತಿಮೆ ನಿರ್ಮಾಣ ಹೆಸರಿನಲ್ಲಿ ಮೋದಿ ತಾವು ಪಟೇಲ್ರಷ್ಟೇ ಎತ್ತರದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭಾರತವೆಂಬ ಬೃಹತ್ ರಾಷ್ಟ್ರವನ್ನು ಕಟ್ಟಿದ ಪಟೇಲ್ ಅವರಿಗೆ ತನ್ನನ್ನು ಹೋಲಿಕೆ ಮಾಡಿಕೊಳ್ಳಲು ಮೋದಿಗೆ ಮನಸ್ಸು ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದರು.
ಪಟೇಲರಿಗೂ ಮೋದಿಗೂ ಎಲ್ಲಿಯ ಹೋಲಿಕೆ ಇದೆ. ಯಾವುದರಲ್ಲಿ ಈ ಇಬ್ಬರಿಗೆ ಹೋಲಿಕೆ ಇದೆ?, ದೇಶದೆಲ್ಲೆಡೆ ಸಮಾವೇಶ ನಡೆಸಿ ಭಾಷಣ ಮಾಡಿದರೆ ನರೇಂದ್ರ ಮೋದಿ ಪಟೇಲ್ ಅವರಂತೆ ದೊಡ್ಡ ವ್ಯಕ್ತಿ ಆಗಿಬಿಡುತ್ತಾರಾ? ಎಂದು ದೊರಸ್ವಾಮಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿಚಾರವಾದಿ ಜಿ.ಕೆ. ಗೋವಿಂದರಾವ್ ಮಾತನಾಡಿ, ದೇಶದ ನಾಯಕನಾಗುವ ಕನಸು ಹೊತ್ತವನಿಗೆ ಕನಿಷ್ಠ ಪಕ್ಷ ಆತ್ಮಾಭಿಮಾನ ಹಾಗೂ ಘನತೆ ಇರಬೇಕು. ಇದ್ಯಾವುದೂ ಇಲ್ಲದೆ ಹಿಂಸೆಯ ಮಾರ್ಗದಲ್ಲಿ ನಡೆದಿರುವ ಮೋದಿ ದೇಶದ ನಾಯಕನಾಗಲು ಅರ್ಹತೆ ಹೊಂದಿರುವರೇ? ಎಂಬ ಬಗ್ಗೆ ಜನರು ಆತ್ಮಾವಲೋಕನ ನಡೆಸಬೇಕು ಎಂದು ಕರೆ ನೀಡಿದರು.
ಮೊದಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮೋದಿ ವಿರುದ್ಧ ಹೇಳಿಕೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಸದ್ಯ ಎಚ್.ಎಸ್.ದೊರೆಸ್ವಾಮಿ ಮತ್ತು ಜಿ.ಕೆ.ಗೋವಿಂದರಾವ್ ಮೋದಿ ಅವರನ್ನು ಟೀಕಿಸಿದ್ದಾರೆ. (ಮೋದಿಯ ಭಾರತದಲ್ಲಿ ನಾನಿರೋಲ್ಲ : ಅನಂತಮೂರ್ತಿ)












Click it and Unblock the Notifications