ಕಾಂಗ್ರೆಸ್ ಗೆ ಸಂಪುಟ ಸಂಕಟ: ಸೆಟೆದು ನಿಂತರು ಸಚಿವ ಸ್ಥಾನಾಕಾಂಕ್ಷಿಗಳು
ಬೆಂಗಳೂರು, ಜೂನ್ 7: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಆದ ನಂತರ ಕೈ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ತುಂಬ ಸ್ಪಷ್ಟವಾಗಿ ಕಾಣುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದ್ದ ನಾಯಕರನ್ನೆಲ್ಲ ಗುಡಿಸಿ ಪಕ್ಕಕ್ಕೆ ಇಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಸ್ಥಿತಿ ಹಾಗೂ ಕೇಳಿಬರುತ್ತಿರುವ ಆರೋಪ.
ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಹೊಸಕೋಟೆ ಶಾಸಕ ಎನ್.ನಾಗರಾಜ್ (ಎಂಟಿಬಿ ನಾಗರಾಜ್), ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಒಟ್ಟಾಗಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ತಮ್ಮ ಅಸಮಾಧಾನ ತಿಳಿಸಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದಿರುವ ಕುರಿತು ತಮ್ಮ ಬೇಸರ ಹೇಳಿಕೊಂಡಿದ್ದಾರೆ.
ಆದರೆ, ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಂಪುಟ ವಿಸ್ತರಣೆಗೆ ಅವಕಾಶ ಇದೆ. ಈಗ ಯಾರಿಗೆ ಅವಕಾಶ ಸಿಕ್ಕಿಲ್ಲವೋ ಅಂಥವರಿಗೆ ಮುಂದೆ ಸಿಗುತ್ತದೆ. ಅಸಮಾಧಾನ ಆಗಿರುವವರ ಜತೆಗೆ ಮಾತನಾಡುತ್ತೇನೆ ಎಂದು ಕೂಡ ಹೇಳಿದ್ದಾರೆ.

ಇನ್ನು ಇದೇ ವೇಳೆ ಬಾದಾಮಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮಾತನಾಡಿ, ಮೈತ್ರಿ ಸರಕಾರದಲ್ಲಿ ಯಾರೂ ನನ್ನನ್ನು ಕಡೆಗಣಿಸಿಲ್ಲ. ಇದು ಕೇವಲ ಊಹಾಪೋಹ ಎಂದು ಹೇಳಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿರುವ ಪಕ್ಷದ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿ, ಬೇಸರ ವ್ಯಕ್ತಪಡಿಸಿರುವುದು ವರದಿಯಾಗಿದೆ.
ಮಾಜಿ ಸಚಿವ ಎಂ.ಬಿ.ಪಾಟೀಲ್ ಬೆಂಗಳೂರಿನಲ್ಲಿ ಮಾತನಾಡಿ, ಪಕ್ಷದೊಳಗೆ ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ತೋಡಿಕೊಂಡು, ವಿಜಯಪುರಕ್ಕೆ ತೆರಳಿದ ನಂತರ ಮುಂದಿನ ತೀರ್ಮಾನ ಘೋಷಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications