ಕರ್ನಾಟಕದ ಜೊತೆಗೆ, ಕೇರಳ ಸಿಎಂ ಪರಿಹಾರ ನಿಧಿಗೆ ದೇವೇಗೌಡ ದೇಣಿಗೆ
ಬೆಂಗಳೂರು, ಏಪ್ರಿಲ್ 11: ಮಾಜಿ ಪ್ರಧಾನಿ ದೇವೇಗೌಡ ಪ್ರಧಾನಮಂತ್ರಿ ಪರಿಹಾರ ನಿಧಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ತಮ್ಮ ಪಿಂಚಣಿಯ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಸಹಾಯ ಆಗುವಂತೆ ನೆರವು ನೀಡಿದ್ದಾರೆ.
ಮೂರು ಪರಿಹಾರ ನಿಧಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು, ಒಟ್ಟು ಮೂರು ಲಕ್ಷ ರೂಪಾಯಿಗಳನ್ನು ದೇವೇಗೌಡರು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಅವರೇ ಮಾಹಿತಿ ನೀಡಿದ್ದಾರೆ.
''ನಾನು ಪಡೆಯುವ ಪಿಂಚಣಿ ಹಣವನ್ನು ಕೊರೊನಾ ನಿಯಂತ್ರಣ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಪ್ರಧಾನಮಂತ್ರಿ ಕೇರ್ಸ್ ಫಂಡ್, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 1 ಲಕ್ಷ ನೀಡುತ್ತಿದ್ದೇವೆ" ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಜೊತೆಗೆ ಕೇರಳ ರಾಜ್ಯಕ್ಕೆ ಸಹ ದೇವೇಗೌಡರು ನೆರವಾಗಿದ್ದಾರೆ. ಒಟ್ಟು ಮೂರು ಲಕ್ಷ ರೂಪಾಯಿಗಳನ್ನು ಅವರು ನೀಡಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಜನರಿಗೂ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು 218ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈ ಸಂಖ್ಯೆ 7500 ದಾಟಿದೆ.