ರಾಜ್ಯಕ್ಕೆ ನೂತನ ಸಮಗ್ರ ಶಿಕ್ಷಣ ನೀತಿ ಬೇಕು: ಪರಮೇಶ್ವರ
ಬೆಂಗಳೂರು, ಸೆಪ್ಟೆಂಬರ್ 5: ಅತ್ಯಾಧುನಿಕ ಜಗತ್ತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಇಂದು ಶಿಕ್ಷಣ ನೀತಿ ತರುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.
ಡಾ.ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಹಿಂದೆ ರಾಜೀವ್ ಗಾಂಧಿ ಅವರು ಶಿಕ್ಷಣ ನೀತಿ ತಂದಿದ್ದರು. ಅಂದಿನಿಂದ ಇಂದಿನವರೆಗು ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಅಪ್ಡೇಟ್ ಆಗಿದ್ದಾರೆ. ಹೀಗಾಗಿ ಶಿಕ್ಷಣ ನೀತಿ ಅಗತ್ಯವಿದೆ ಎಂದು ಹೇಳಿದರು.
ಕೊರಿಯಾದಂಥ ಸಣ್ಣ ದೇಶ ಶಿಕ್ಷಣ ಕ್ಷೇತ್ರಕ್ಕೆ ತನ್ನ ಬಜೆಟ್ ನಲ್ಲಿ ಶೇ. 25 ರಷ್ಟು ಅನುದಾನ ಮೀಸಲಿಡುತ್ತದೆ. ಅಂತೆಯೇ ನಾವೂ ಕೂಡ ಅನುದಾನ ಹೆಚ್ಚಿಸಬೇಕು. ಶಾಲೆಗಳನ್ನು ಸದೃಢಗೊಳಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಿದೆ. ಶಿಕ್ಷಕರ ಕೊರತೆಯನ್ನೂ ನೀಗಿಸಬೇಕಿದೆ ಎಂದರು.

ಶಿಕ್ಷಿತರಾಗುವುದರ ಜೊತೆ ಉತ್ತಮ ನಾಗರಿಕರೂ ಆಗಬೇಕಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕಿದೆ. ಒಬ್ಬ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಬೇಕಿದ್ದರೆ ಅದಕ್ಕೆ ಶಿಕ್ಷಕರ ಪರಿಶ್ರಮ ದೊಡ್ಡದು. ಶಿಕ್ಷಕರ ನಡೆಯನ್ನೇ ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಹೀಗಾಗಿ ಶಿಕ್ಷಕರು ಬೋಧನೆ ಮಾಡುವ ಜೊತೆಗೆ ತಮ್ಮ ಉತ್ತಮ ನಡವಳಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕೇವಲ ಶೇ.12 ಇದ್ದ ಸಾಕ್ಷರತೆ ಪ್ರಮಾಣ ಇಂದು ಶೇ.80ಕ್ಕೆ ತಲುಪಿದೆ. ಇದರಿಂದಲೇ ನಮ್ಮದೇಶದ ಆರ್ಥಿಕಸ್ಥಿತಿ ಕೂಡ ಸಂಪೂರ್ಣ ಬದಲಾಗಿದೆ. ನಮ್ಮದೇಶದಲ್ಲಿ ತಾಂತ್ರಿಕ ಮಾನವ ಸಂಪನ್ಮೂಲವನ್ನು ಇಡೀ ವಿಶ್ವಕ್ಕೆ ನೀಡಿದ್ದೇವೆ. ಲಕ್ಷಾಂತರ ಶಿಕ್ಷಕರು, ಎಂಜಿನಿಯರ್ಸ್, ವೈದ್ಯರು ಹೊರಬರುತ್ತಿದ್ದಾರೆ. ಇದಕ್ಕೆಲ್ಲ ಶಿಕ್ಷಕರ ಕೊಡುಗೆಯೇ ಹೆಚ್ಚು ಎಂದು ಹೇಳಿದರು.












Click it and Unblock the Notifications