ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ; ಸರ್ಕಾರದ ಊಟ ಬೇಡ ಎಂದ ಕಾಂಗ್ರೆಸ್
ಬೆಂಗಳೂರು, ಫೆಬ್ರವರಿ 21: ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲಾಗಿ ಕೇಸರಿ ಧ್ವಜ ಹಾರಿಸಬಹುದು ಎಂಬ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ.
ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ವೇಳೆ ಸರ್ಕಾರದ ವತಿಯಿಂದ ಪೂರೈಸುತ್ತಿರುವ ಊಟ- ಉಪಚಾರವನ್ನು ನಿರಾಕರಿಸಿ, ಪಕ್ಷದ ವತಿಯಿಂದಲೇ ಶಾಸಕರಿಗೆ ಊಟ ನೀಡಲು ಕೆಪಿಸಿಸಿ ನಿರ್ಧರಿಸಿದೆ.
ಕಾಂಗ್ರೆಸ್ ಶಾಸಕರ ಧರಣಿ ಕುರಿತು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ನಿರ್ಧಾರಕ್ಕೆ ಬರಲಾಗಿದೆ. ವಿಧಾನಸೌಧ ಸಚಿವಾಲಯದ ಹಣವನ್ನು ಬಳಸಿ ಪ್ರತಿಭಟನಾನಿರತರಿಗೆ ಊಟ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಧರಣಿ ನಿರತರಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದರು.

"ಸರ್ಕಾರದ ಹಣದಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟ ಮಾಡ್ಕೊಂಡು ಮಲ್ಕೊಂಡಿದ್ದಾರೆ,'' ಎಂದು ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಕೆಪಿಸಿಸಿ ವತಿಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೊದಲೆರೆಡು ದಿನ ಸರ್ಕಾರ ವ್ಯವಸ್ಥೆ ಮಾಡಿದ್ದ ಊಟದ ಹಣವನ್ನೂ ಚೆಕ್ ಮೂಲಕ ಸ್ಪೀಕರ್ ಅವರಿಗೆ ಮರುಪಾವತಿಸಲು ಕೆಪಿಸಿಸಿ ನಿರ್ಧರಿಸಿದೆ.
ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಟೀಕೆ
ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂಬ ಕಾಂಗ್ರೆಸ್ ಆಗ್ರಹಕ್ಕೆ ಉತ್ತರಿಸಿದ ಸಚಿವ ಆರ್. ಅಶೋಕ್, ಈಶ್ವರಪ್ಪರನ್ನು ನೇಮಕ ಮಾಡಿದ್ದು ಬಿಜೆಪಿ ಪಕ್ಷ. ಈಶ್ವರಪ್ಪನ ಕಾಂಗ್ರೆಸ್ ನೇಮಕ ಮಾಡಿದೆಯಾ? ಕಾಂಗ್ರೆಸ್ನ ಎಲ್ಲರೂ ಬಿಜೆಪಿಗೆ ಸೇರಿಕೊಂಡು ಬಿಡಿ. ಆಮೇಲೆ ನೀವು ಬಿಜೆಪಿಗೆ ಸಲಹೆ ಕೊಡಿ ಎಂದು ತಿರುಗೇಟು ನೀಡಿದ್ದಾರೆ.
Recommended Video
ಕಾಂಗ್ರೆಸ್ ಪಕ್ಷ ಬಹಳ ಗೊಂದಲದಲ್ಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಡಕು ಬೀದಿಯಲ್ಲಿದೆ. ಹಿಜಾಬ್ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನ ಬಂಡವಾಳ ಏನು ಎಂಬುದು ಜನಕ್ಕೆ ಅರ್ಥ ಆಗುತ್ತಿದೆ. ನಾವು, ಹಿಜಾಬ್ ರಾಜ್ಯದಲ್ಲೇ ಚರ್ಚೆಯಾಗುತ್ತಿರುವ ವಿಚಾರ, ಹಿಜಾಬ್ ವಿಚಾರ ಚರ್ಚೆ ಮಾಡಿ ಅಂದರೆ ಕಾಂಗ್ರೆಸ್ ನಾಯಕರು ಕೇಳುತ್ತಿಲ್ಲ. ಹಿಜಾಬ್ ವಿಚಾರದಲ್ಲಿ ಸರ್ಕಾರದಿಂದ ತಪ್ಪಾಗಿದ್ದರೆ ಅದನ್ನು ಹೇಳಬೇಕಾದವರು ಸುಮ್ಮನಿದ್ದಾರೆ. ಸರ್ಕಾರದ ಕಿವಿ ಹಿಂಡಬೇಕಾದರ ಕಿವಿಯನ್ನು ನಾವೇ ಹಿಂಡಬೇಕಾಗಿದೆ ಎಂದು ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.












Click it and Unblock the Notifications