CryPMpayCM ಅಭಿಯಾನ: 'ಕರ್ನಾಟಕದಲ್ಲಿ ಮೋದಿ ಸುನಾಮಿಗೆ ಕಾಂಗ್ರೆಸ್ ಹೆದರಿದೆ ಎಂದು ಬಿಜೆಪಿ ತಿರುಗೇಟು
ಬೆಂಗಳೂರು, ಮೇ. 01: ಕರ್ನಾಟಕದ ವಿಧಾನಸಭಾ ಚುನಾವಣಾ ಕಣದಲ್ಲಿ ಮತ್ತೆ ಹೊಸ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ಇದಕ್ಕೆ 'CryPMpayCM' ಎಂದು ಹೆಸರಿಟ್ಟಿದೆ. ಅಭಿಯಾನಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ಕರ್ನಾಟಕ ರಾಜ್ಯದಲ್ಲಿ "ಮೋದಿ ಸುನಾಮಿ" ಇದೆ ಎಂದು ಸೋಮವಾರ ಹೇಳಿಕೊಂಡಿದೆ. ಜೊತೆಗೆ ಈ ಸುನಾಮಿಗೆ ಕಾಂಗ್ರೆಸ್ ಹೆದರಿದೆ ಎಂದು ಟೀಕಿಸಿದೆ.
"ಮೊದಲು ಕಾಂಗ್ರೆಸ್ ನಮ್ಮನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದರು. ಆಗ ನಮ್ಮ ವಿರುದ್ಧ ಈ ಪೇಸಿಎಂ ಅಭಿಯಾನವನ್ನು ನಡೆಸಿದ್ದಾರೆ. ಈ ಎರಡೂ ಅಭಿಯಾನಗಳು ಜನಸಾಮಾನ್ಯರನ್ನು ತಲುಪಲು ವಿಫಲವಾಗಿವೆ. ಈಗ ರಾಜ್ಯದಲ್ಲಿ ಮೋದಿ ಸುನಾಮಿ ಇದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯಿಂದ ವಿಚಲಿತರಾಗಿರುವ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ. ಕಾಂಗ್ರೆಸ್ನವರು ಭಯಗೊಂಡಿದ್ದಾರೆ" ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

'ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯನ್ನು ವಿಷಪೂರಿತ ಹಾವು ಎಂದಿದ್ದಾರೆ. ಸೋಲಿನ ಅರಿವಾಗಿರುವ ಕಾಂಗ್ರೆಸ್ ಬೇಸರ ಮತ್ತು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ' ಎಂದು ಕಾಂಗ್ರೆಸ್ ವಿರುದ್ಧ ಹರುಹಾಯ್ದಿದ್ದಾರೆ.
ಕಲಬುರಗಿಯಲ್ಲಿ ಕಳೆದ ಗುರುವಾರ ಚುನಾವಣಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪ್ರಧಾನಿ ಮೋದಿ ವಿಷಪೂರಿತ ಹಾವಿನಂತೆ, ಅದು ವಿಷವೋ ಅಲ್ಲವೋ ಎಂದು ನೀವು ಪರಿಶೀಲಿಸಬಹುದು. ಆದರೆ ನೀವು ಒಂದು ಹನಿ ನೆಕ್ಕಿದರೆ ನೀವು ಸತ್ತು ಹೋಗುತ್ತಿರಿ" ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಜೊತೆಗೆ ಪ್ರಧಾನಿ ಇದನ್ನೇ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಇನ್ನು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನಿ ಮೋದಿಯನ್ನು ನಿಂದಿಸುವುದು ಮತ್ತು ಅವಮಾನಿಸುವುದು ಕಾಂಗ್ರೆಸ್ನ ಏಕೈಕ ಉದ್ದೇಶವಾಗಿದೆ. "ಪ್ರಧಾನಿ ಮೋದಿ ಅವರ ನಾಯಕತ್ವದಿಂದ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ಅವರು ಕೇವಲ ದೇಶದ ನಾಯಕರಲ್ಲ, ವಿಶ್ವ ನಾಯಕರಾಗಿದ್ದಾರೆ. ಆದ್ದರಿಂದ, ಕಾಂಗ್ರೆಸ್ನ ಏಕೈಕ ಗುರಿಯು ಪ್ರಧಾನಿ ಮೋದಿಯವರನ್ನು ನಿಂದಿಸುವುದು" ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯನ್ನು ಟೀಕಿಸಲು ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ 'CryPMpayCM' ಅಭಿಯಾನವನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 91 ಬಾರಿ ತಮ್ಮನ್ನು ನಿಂದಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಲು ಕಾಂಗ್ರೆಸ್ ಈ ಅಭಿಯಾನ ನಡೆಸುತ್ತಿದೆ.












Click it and Unblock the Notifications