ರಸ್ತೆ ಅಭಿವೃದ್ಧಿ ಅಕ್ರಮ : ಸಿದ್ದು, ಜಾರ್ಜ್ ವಿರುದ್ಧ ದೂರು
ಬೆಂಗಳೂರು, ಅಕ್ಟೋಬರ್ 30 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಸಿಬಿಗೆ ಪ್ರತ್ಯೇಕ ದೂರುಗಳು ದಾಖಲಾಗಿವೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ ಎಂಬುದು ಆರೋಪವಾಗಿದೆ.
ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿದ್ದರಾಮಯ್ಯ ಮತ್ತು ಕೆ.ಜೆ.ಜಾರ್ಜ್ ವಿರುದ್ಧ ಪ್ರತ್ಯೇಕ ದೂರು ನೀಡಿದ್ದಾರೆ. ನಗರದ ರಸ್ತೆಗಳ ವೈಟ್ ಟ್ಯಾಪಿಂಗ್ ಹೆಸರಿನಲ್ಲಿ 600 ಕೋಟಿಗೂ ಹೆಚ್ಚು ಅವ್ಯವಹಾರವಾಗಿದೆ. ಸಿಎಂ ಮತ್ತು ಕೆ.ಜೆ.ಜಾರ್ಜ್ ಕಮೀಷನ್ ಪಡೆದಿದ್ದಾರೆ ಎಂದು ರಮೇಶ್ ಆರೋಪ ಮಾಡಿದ್ದಾರೆ.

ಎನ್.ಆರ್.ರಮೇಶ್ ಅವರು ದೂರಿನಲ್ಲಿ 1/4/2014ರಿಂದ 10/10/2017ರ ತನಕ ಪಾಲಿಕೆ ವ್ಯಾಪ್ತಿಯ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ 4,878 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಗರಣದಲ್ಲಿ ಗುತ್ತಿಗೆದಾರರು ಶಾಮೀಲಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ರಸ್ತೆಗಳ ನಿರ್ವಹಣಾ ಅವಧಿ ಚಾಲ್ತಿಯಲ್ಲಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಲು 130 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಹುತೇಕ ರಸ್ತೆಗಳಿಗೆ ಮೂರುವರೆ ವರ್ಷಗಳ ಅವಧಿಯಲ್ಲಿ 2ಕ್ಕೂ ಹೆಚ್ಚು ಸಲ ಡಾಂಬರು ಹಾಕಲಾಗಿದೆ ಎಂದು ಬಿಲ್ ಸೃಷ್ಟಿ ಮಾಡಲಾಗಿದೆ. ಆದ್ದರಿಂದ, ಟೆಂಡರ್ಗಳನ್ನು ಪರಿಶೀಲನೆ ಮಾಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಮೂರು ಪ್ಯಾಕೇಜ್ಗಳ ಮೂಲಕ 100.01 ಕಿ.ಮೀ. ಉದ್ದದ 29 ರಸ್ತೆಗಳು ಮತ್ತು 6 ಜಂಕ್ಷನ್ಗಳ ವೈಟ್ ಟ್ಯಾಪಿಂಗ್ ಕಾರ್ಯಕ್ಕೆ 1,059 ಕೋಟಿ ವೆಚ್ಚ ಮಾಡಲಾಗಿದೆ. ಪ್ರತಿ ಕಿ.ಮೀ.ಗೆ ಸುಮಾರು 10 ಕೋಟಿ ವೆಚ್ಚವಾಗಿದೆ. ಆದರೆ, ಪ್ರತಿ ಕಿ.ಮೀ.ಗೆ ಸರಾಸರಿ 4 ರಿಂದ 4.5 ಕೋಟಿ ಹಣ ವೆಚ್ಚವಾಗುತ್ತದೆ. 5 ರಿಂದ 6 ಕೋಟಿ ಹಣ ಹಗಲು ದರೋಡೆ ಆಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications