ಸೂರ್ಯ ನಾಪತ್ತೆ, ಬೆಂಗಳೂರಿಗರಿಗೆ ಚಳಿ ತಾಪತ್ರೆ
ಬೆಂಗಳೂರು, ಅ. 20: ವಾರವಿಡೀ ಕೆಲಸ ಮಾಡಿದವರು ವೀಕೆಂಡ್ ನಲ್ಲಿ ದೇವಸ್ಥಾನ, ಪಾರ್ಕ್, ಶಾಪಿಂಗ್, ಪಿಕ್ ನಿಕ್, ಪಬ್, ಮಾಲ್ ಎಂದು ಓಡಾಡಿಕೊಂಡು ಕೊಂಚ ರಿಲೀಫ್ ಆಗುತ್ತಿದ್ದರು. ಆದರೆ ಕಳೆದ ಒಂದೆರಡು ವಾರದಿಂದ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ.
ಇದಕ್ಕೆ ಕಾರಣ ಥಂಡಿ ವಾತಾವರಣ. ಆಕಾಶ ನೋಡೋಕೆ ನೂಕುನುಗ್ಗಲೇಕೆ? ಎಂಬ ಗಾದೆ ಮಾತು ಬೆಂಗಳೂರು ಮಹಾನಗರದ ಜನರಿಗೆ ಅನ್ವಯಿಸಲ್ಲ ಬಿಡಿ. ಯಾಕಂದ್ರೆ ಬಹುಮಹಡಿ ಕಟ್ಟಡಗಳು ಸೂರ್ಯನನ್ನೇ ತಡೆದಂತೆ ಭ್ರಮೆ ಹುಟ್ಟಿಸಿವೆ. ಆದರೆ ಇದೀಗ ಸೂರ್ಯನೇ ನಾಪತ್ತೆಯಾಗಿದ್ದಾನೆ. ನಗರದ ರಸ್ತೆಗಳನ್ನು, ಬಹುಮಹಡಿ ಕಟ್ಟಡದ ಮೇಲಂತಸ್ತನ್ನಾದರೂ ಸ್ಪರ್ಶಿಸುತ್ತಿದ್ದ ಸೂರ್ಯ ಕಿರಣಗಳು ದಾರಿ ಮರೆತಿವೆ.[ದೀಪಾವಳಿಗೆ ಹೆಚ್ಚುವರಿ ಬಸ್]

ಬೆಳಿಗ್ಗೆಯಿಂದ ಸಂಜೆವರೆಗೂ ಒಂದೇ ರೀತಿಯ ವಾತಾವರಣ. ಅತ್ತ ಬಿಡದ ಚಳಿ, ಇತ್ತ ಸೇವಿಸಲಾಗದ ವಾಹನಗಳ ಹೊಗೆ, ನರಕಯಾತನೆ ಅಂದ್ರೆ ಇದೇನಾ? ಅನ್ನಿಸೋದು ಸುಳ್ಳಲ್ಲ. ಬೆಳಗ್ಗೆ ಒಂಭತ್ತು ಗಂಟೆಯೊಳಗೆ ಕಚೇರಿ ಸೇರಿಕೊಂಡವರು ಸಂಜೆ ಏಳು ಗಂಟೆಗೆ ಹೊರಬಿದ್ದರೆ ಅವರ ಕತೆ ಮುಗಿದಂತೆ. ವಿಟಮಿನ್ ಡಿ ಗಾಗಿ ಮಾತ್ರೆ ಸೇವಿಸಬೇಕಷ್ಟೇ. ಇವರಿಗೆ ಸೂರ್ಯನ ಪರಿಚಯ ಮರೆತು ಹೋಗೋದು ಗ್ಯಾರಂಟಿ!
ಥಂಡಿ ವಾತಾವರಣ ಪ್ರತಿಯೊಬ್ಬರ ಆರೋಗ್ಯದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಆಂಧ್ರ ಕರಾವಳಿ ತೀರಗಳಿಗೆ ಅಪ್ಪಳಿಸಿದ ಚಂಡಮಾರುತ, ಆರಂಭವಾದ ಹಿಂಗಾರು, ಗಾಳಿಯ ಒತ್ತಡ ಕಡಿಮೆಯಾಗಿರುವುದು ಎಲ್ಲವೂ ಸೇರಿ ವಾತಾವರಣ ಹದಗೆಡಲು ಕಾರಣವಾಗಿದೆ.[ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃǃǃ]

ನೆಗಡಿ, ಕೆಮ್ಮು, ಮೈ ಕೈ ನೋವು ಮತ್ತು ಉಸಿರಾಟದ ತೊಂದರೆ ಸಾಮಾನ್ಯ ಎಂಬಂತಾಗಿ ಹೋಗಿದೆ. ವಾರವಿಡೀ ಕೆಲಸ ಮಾಡಿ ದಣಿದವ ವೈದ್ಯರು ಕೊಟ್ಟ ಮಾತ್ರೆ ನುಂಗಿ ವೀಕೆಂಡ್ ಕಳೆಯಬೇಕಾಗಿದೆ.
ಕಳೆದ ವಾರಗಳಲ್ಲಿ ತೀವ್ರ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಬೆಂಗಳೂರು ನಾಗರಿಕರನ್ನು ಈಗ ಸಣ್ಣ ಚಳಿ ಕಾಡಲಾರಂಭಿಸಿದೆ. ಇನ್ನು ಒಂದು ವಾರ ಇದೇ ರೀತಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹೇಳುತ್ತದೆ. ಅಲ್ಲದೇ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಂಭವವೂ ಇದೆ.

ಬೆಂಗಳೂರಿನಲ್ಲಿ ಸೋಮವಾರದ ತಾಪಮಾನ 26 ಡಿಗ್ರಿ ದಾಖಲಾಗಿದ್ದು ಮುಂದಿನ ಎರಡು ವಾರ ಕಾಲ ಇದರ ಸುತ್ತನೇ ಗಿರಕಿ ಹೊಡೆಯಲಿದೆ. ತಾಪಮಾನ ಏರದಿದ್ದರೂ ಪರವಾಗಿಲ್ಲ ಸೂರ್ಯ ಕಾಣಿಸಿದರೆ ಸಾಕು ಎಂದು ಬಯಸಿದ್ದವರಿಗೂ ನಿರಾಸೆಯೇ ಗತಿ. ಈ ವಾರ ಪೂರ್ತಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣವೇ ಇರುವುದು ಎಂದು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಕಳೆದ ವಾರ 32 ಡಿಗ್ರಿಗೆ ತಲುಪಿದ್ದ ತಾಪಮಾನ ಏಕಾಏಕಿ ಕುಸಿತ ಕಂಡದೆ. ಅಲ್ಲದೇ ಮಧ್ಯೆ ಮಧ್ಯೆ ಮಳೆಯನ್ನು ಸುರಿಸಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಾಗ ಮಳೆ ಸುರಿಯುವುದು ಸಾಮಾನ್ಯ. ಆದರೆ ವಾತಾವರಣ ತಂಪಿದ್ದಾಗಲೂ ಮಳೆ ಸುರಿಯುತ್ತಿರುವುದು ವಿಚಿತ್ರವಾಗಿದೆ.
ನೀವೇನು ಮಾಡಬಹುದು
* ಸದಾ ಬೆಚ್ಚನೆಯ ಉಡುಗೆ ಧರಿಸಿ
* ಗಾಳಿಯಲ್ಲಿ ಓಡಾಡುವಾಗ ಎಚ್ಚರವಿರಲಿ
* ಯಾವ ಕಾರಣಕ್ಕೂ ಮಳೆಯಲ್ಲಿ ನೆನೆಯುವ ದುಸ್ಸಾಹಸ ಮಾಡಬೇಡಿ
* ಮಕ್ಕಳನ್ನು ಕರೆದುಕೊಂಡು ಪಿಕ್ ನಿಕ್, ತಿರುಗಾಟ ಬೇಡವೇ ಬೇಡ
* ಹೆಚ್ಚುವರಿ ಕೆಲಸಕ್ಕೆ ಕೆಲ ದಿನ ಬ್ರೇಕ್ ಹಾಕಿ












Click it and Unblock the Notifications