ಸೆಪ್ಟಿಕ್ ಟ್ಯಾಂಕ್ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ
ಬೆಂಗಳೂರು, ಜೂನ್ 14: ಬೆಂಗಳೂರಿನ ಅತಿ ದೊಡ್ಡ ಕೆರೆಯಾದ ಬೆಳ್ಳಂದೂರು ಕೆರೆಯನ್ನು ಸೆಪ್ಟಿಕ್ ಟ್ಯಾಂಕ್ ಆಗಿ ಪರಿವರ್ತನೆಯಾಗಿದ್ದು, ಅದಕ್ಕೆ ಸ್ಥಳೀಯ ಸರ್ಕಾರವೇ ಕಾರಣವಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠ ನೇಮಕ ಮಾಡಿದ್ದ ತನಿಖಾ ಆಯೋಗ ಅಂತಿಮ ವರದಿ ನೀಡಿದೆ.
ಎನ್ಜಿಟಿ ನೇಮಕ ಮಾಡಿದ್ದ ತನಿಖಾ ಆಯೋಗ ಬೆಳ್ಳಂದೂರು ಸೇರಿದಂತೆ ನಗರದ ಪ್ರಮುಖ ಮೂರು ಕೆರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಿದೆ. ಬೆಳ್ಳಂದೂರು ಕೆರೆಗೆ ಘನತ್ಯಾಜ್ಯ, ಕಟ್ಟಡ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಮಾನವ ತ್ಯಾಜ್ಯ ಹೀಗೆ ಎಲ್ಲ ಬಗೆಯ ನಿರುಪಯುಕ್ತ ವಸ್ತುಗಳನ್ನು ಕೆರೆಗೆ ತುಂಬಿ, ಇಡೀ ಕೆರೆ ಪ್ರದೇಶವನ್ನು ಎಲ್ಲೆಂದರಲ್ಲಿ ಒತ್ತುವರಿ ಮಾಡಲು ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ಮಾಡಿಕೊಟ್ಟಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಮೇ 31ರಂದು ಎನ್ಜಿಟಿಗೆ ವರದಿ ನೀಡಿರುವ ಆಯೋಗ, ಬೆಳ್ಳಂದೂರು ಕೆರೆಯ ದುರವಸ್ತೆಯನ್ನು ಸಂಪೂರ್ಣ ವಿವರಿಸಿದೆ. ಬೆಳ್ಳಂದೂರು ಕೆರೆಯಲ್ಲದೇ ಅಗರ ಹಾಗೂ ವರ್ತೂರು ಕೆರೆಗಳ ಸ್ಥಿತಿಗತಿಯ ಬಗೆಗೂ ಆಯೋಗ ವಾಸ್ತವಾಂಶ ತಿಳಿಸಿದೆ.

ಸ್ಥಳೀಯ ನಗರ ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಹೀಗೆ ಎಲ್ಲ ಪ್ರಾಧಿಕಾರಗಳ ನಿರ್ಲಕ್ಷ್ಯ ಹಾಗೂ ತಾರತಮ್ಯದ ಕಾರಣದಿಂದ ಇಡೀ ಬೆಳ್ಳಂದೂರು ಕೆರೆ ವಿನಾಶದ ಅಂಚಿನಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳೆದ 2016ರ ಆಗಸ್ಟ್ 12ರಂದು ಬೆಳ್ಳಂದೂರು ಕೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಬೆಂಕಿ ಬಿದ್ದಿತ್ತು. ಅದಾದ ಬಳಿಕ ಈ ತನಕ 12 ಬಾರಿ ಬೆಂಕಿ ಬಿದ್ದಿದೆ. ಹಸಿರು ನ್ಯಾಯಾಧೀಕರಣ ನೇಮಿಸಿರುವ ತಂಡವು ಏ.14 ಮತ್ತು 15ರಂದು ಬೆಳ್ಳಂದೂರು, ಅಗರ, ವರ್ತೂರು ಕೆರೆಗಳ ಪರಿಶೀಲನೆ ನಡೆಸಿತ್ತು.
ಎನ್ಜಿಟಿಗೆ ಮಾಹಿತಿ ನೀಡಿರುವಂತೆ ಸರ್ಕಾರ ಕೆರೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮ, ವಾಸ್ತವದಲ್ಲಿ ನಡೆದಿರುವ ಕಾಮಗಾರಿಗಳು, 75 ಮೀಟರ್ವರೆಗೆ ಬಫರ್ ಜೋನ್, ಎಸ್ಜಿಟಿಗಳ ನಿರ್ವಹಣೆ ವೀಕ್ಷಿಸಿ ವರದಿಯನ್ನು ನ್ಯಾಯಾಧೀಕರಣಕ್ಕೆ ನೀಡಿತ್ತು.












Click it and Unblock the Notifications