ಮಳೆ ನಿಂತ ತಕ್ಷಣ ಯುದ್ಧೋಪಾದಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯ: ಸಿಎಂ
ಬೆಂಗಳೂರು, ಅ.18: ನಗರದಲ್ಲಿ ಮಳೆ ಕಡಿಮೆಯಾದ ತಕ್ಷಣ ಯುದ್ಧೋಪಾದಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಿಗ್ಗೆ 7.30ರಿಂದ ಆರಂಭಿಸಿ 10.15ರವರೆಗೆ ಮಡಿವಾಳ ಕೆರೆ, ಮಳೆಹಾನಿ, ರಾಜಾ ಕಾಲುವೆಗಳು, ರಸ್ತೆಗುಂಡಿಗಳು ಸೇರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮೊದಲಿಗೆ ಎಚ್ಎಸ್ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ ಹತ್ತಿರದ ಪ್ರದೇಶಕ್ಕೆ ಭೇಟಿ ನೀಡಿದರು. ಸಿಲ್ಕ್ ಬೋರ್ಡ್ ವೃತ್ತದ ಬಳಿ ಮಳೆಯಿಂದ ಆಗಿರುವ ಹಾನಿಯ ಕುರಿತು ಪರಿಶೀಲನೆ ನಡೆಸಿದರು. ಶಾಸಕ ಸತೀಶ್ ರೆಡ್ಡಿ ಮುಖ್ಯಮಂತ್ರಿಯ ಸಿಟಿ ರೌಂಡ್ಸ್ಗೆ ಸಾಥ್ ನೀಡಿದರು. ಬೆಂಗಳೂರು ಜಲಮಂಡಳಿ ಒಳಚರಂಡಿ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಕ್ಸ್ಫರ್ಡ್ ಇಂಜಿನಿಯರಿಂಗ್ ಕಾಲೇಜ್ ಎದುರುಗಡೆಯ ಬೃಹತ್ ಮಳೆನೀರು ಚರಂಡಿಯ ಕಾಮಗಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಣೆ ಮಾಡಿದರು. ಕಾಮಗಾರಿಯನ್ನು ಸಮರ್ಪಕವಾಗಿ ಹಾಗೂ ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ಬಿಬಿಎಂಪಿ ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಗುಂಡಿ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದೇನೆ. ಅದಕ್ಕೆ ವಿಶೇಷ ಸಭೆ ಕರೆಯುತ್ತೇನೆ. ಮಳೆ ಬರುತ್ತಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ನಂತರ ಯುದ್ದೋಪಾದಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಸಲಾಗುವುದು'' ಎಂದು ಹೇಳಿದರು.

"ಅಗರ ಭಾಗದಲ್ಲಿ ಮನೆಗಳಿಗೆ ಮಳೆ ನೀರು ಮತ್ತು ಕೊಳಚೆ ನೀರು ಹರಿದು ಬರುತ್ತಿದೆ. 15 ರಿಂದ 20 ಲೇಔಟ್ಗಳಿಂದ ಕೆರೆಗೆ ನೀರು ಹರಿದು ಬರುತ್ತಿದೆ. ಈ ಸಮಸ್ಯೆ ತಡೆಗಟ್ಟಲು ಮುಖ್ಯ ಡ್ರೈನೇಜ್ ಕಾಲುವೆಯ ದುರಸ್ತಿ ಮತ್ತು ಅಗಲೀಕರಣ ಮಾಡುವ ಅಗತ್ಯವಿದೆ. ಅಗರ ಪಕ್ಕದ ಲೇಔಟ್ಗಳಿಗೆ ವಿಶೇಷ ಡ್ರೈನೇಜ್ ಲೈನ್ ಮಾಡುವ ಕಾರ್ಯ ನಡೆಯುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಮುಗಿಸಲು ಸೂಚನೆ. ಇಲ್ಲಿನ ಕೊಳಚನೆ ನೀರು ಶುದ್ಧೀಕರಣದಲ್ಲಿ 20 ಎಂಎಲ್ಡಿ ಮಾತ್ರ ಶುದ್ಧೀಕರಣ. ಇದನ್ನು 35 ಎಂಎಲ್ಡಿ ಹೆಚ್ಚಿಸಲು ಸೂಚನೆ ನೀಡಲಾಗಿದೆ" ಎಂದರು.
ಮಡಿವಾಳ ಕೆರೆಗೆ ಹೊಂದಿಕೊಂಡ 4 ಎಂಎಲ್ಡಿ ಶುದ್ಧೀಕರಣ ಕೆಲಸ ಸ್ಥಗಿತವಾಗಿದೆ. ಇದನ್ನು ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಲೇಔಟ್ಗಳಲ್ಲಿ ಸಮತಟ್ಟು ನಿರ್ವಹಣೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ನಗರದ ಕೆಲವು ಕಾಮಗಾರಿಗಳಲ್ಲಿ ಹೊಂದಾಣಿಕೆ ಕೊರತೆ ಕಂಡುಬರುತ್ತಿದೆ. ಅರಗ, ಮಡಿವಾಳ ಅಷ್ಟೇ ಆಲ್ಲ, ನಗರದ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಇದೆ. ಬಿಬಿಎಂಪಿ ಬಿಡ್ಲ್ಯುಎಸ್ಎಸ್ಬಿ ಮತ್ತು ಬೆಸ್ಕಾಂ ವಿಶೇಷ ಸಭೆ ಕರೆಯಲಾಗುವುದು ಸಮನ್ವಯ ಸಾಧಿಸಲಾಗುವುದು. ಮಳೆ ನೀರು ಮತ್ತು ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಮಾಸ್ಟರ್ ಪ್ಲ್ಯಾನ್ ಮಾಡಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿದರು.
ಬೊಮ್ಮನಹಳ್ಳಿಯಲ್ಲಿ ಕುಂದುಕೊರತೆ ಸಭೆ:
ಬೊಮ್ಮನಹಳ್ಳಿ ಕ್ಷೇತ್ರದ ನಿವಾಸಿಗಳ ಕುಂದು ಕೊರತೆ ಸಭೆ ನಡೆಸಿದರು. ಮಳೆ ಬಂದಾಗ ಏನೆಲ್ಲ ಸಮಸ್ಯೆ ಆಗುತ್ತದೆ, ರಸ್ತೆಗಳು ಸರಿ ಇವೆಯಾ ಎಂದು ಮುಖ್ಯಮಂತ್ರಿ ಜನರನ್ನು ಪ್ರಶ್ನಿಸಿದರು.
"ಮಳೆ ಬಂದಾಗ ನಿರಂತರ ಸಮಸ್ಯೆ ಕಾಡುತ್ತದೆ. ಈ ವರ್ಷ ಅಷ್ಟೇ ಅಲ್ಲ, ಕಳೆದ 20 ವರ್ಷಗಳಿಂದಲೂ ಈ ಸಮಸ್ಯೆ ಇದೆ. ಮಳೆ ಬಂದಾಗ ನೀರು ಬಂದಾಗ ಮನೆಗಳಿಗೆ ನುಗ್ಗುತ್ತಿದೆ. ಮಳೆ ಬಂದಾಗ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಶಾಶ್ವತ ಪರಿಹಾರ ಆಗುತ್ತಿಲ್ಲ" ಎಂದು ಜನರು ಮುಖ್ಯಮಂತ್ರಿ ಮುಂದೆ ಅಳಲು ತೋಡಿಕೊಂಡರು.












Click it and Unblock the Notifications