ಚರ್ಚ್ಸ್ಟ್ರೀಟ್ : ಪಾಟ್ನಾದಲ್ಲಿದ್ದ ಇಬ್ಬರ ವಿಚಾರಣೆ
ಬೆಂಗಳೂರು, ಫೆ. 27 : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಡಿ.28ರಂದು ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಜೈಲಿನಿಂದ ಇಬ್ಬರು ಉಗ್ರರನ್ನು ವಿಚಾರಣೆಗಾಗಿ ಕರೆತರಲಾಗಿದೆ. ಪಾಟ್ನಾಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರ ತಂಡ ಇಬ್ಬರನ್ನು ಬೆಂಗಳೂರಿಗೆ ಕರೆತಂದಿದೆ.
ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಮತ್ತು ಬೋಧಗಯಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪಾಟ್ನಾದಲ್ಲಿ ಬಂಧಿಸಲಾಗಿತ್ತು. ಬಂಧಿತ ಹೈದರ್ ಅಲಿ ಮತ್ತು ರಿಯಾಜ್ನನ್ನು ಬೆಂಗಳೂರು ಪೊಲೀಸರು ವಿಚಾರಣೆಗಾಗಿ ಕರೆತಂದಿದ್ದಾರೆ. [ಬೆಂಗಳೂರು ಸ್ಫೋಟ ಆರೋಪಿ ಎಲ್ಲಿ?]

ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಭಾಷಣ ನಡೆಯುತ್ತಿದ್ದ ಪಾಟ್ನಾದ ಮೈದಾನದಲ್ಲಿ ಬಾಂಬ್ ಸ್ಫೋಟ ನಡೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಇವರಿಗೆ ಮಾಹಿತಿ ಇರಬಹುದು ಎಂಬ ಹಿನ್ನಲೆಯಲ್ಲಿ ವಿಚಾರಣೆಗಾಗಿ ಕರೆತರಲಾಗಿದೆ. [ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]
ಪಾಟ್ನಾ ಜೈಲಿನಲ್ಲಿದ್ದ ಇವರನ್ನು ಬಾಡಿ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತರಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ.
ಸಿಮಿ ಉಗ್ರರೆಂಬ ಶಂಕೆ : ಹೈದರ್ ಅಲಿ ಮತ್ತು ರಿಯಾಜ್ ಸಿಮಿ ಉಗ್ರರು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಟ್ನಾ ಮತ್ತು ಬೋಧಗಯಾ ಪ್ರಕರಣದಲ್ಲಿ ಇವರ ಪಾತ್ರದ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ. ಎನ್ಐಎ ಕೆಲವು ತಿಂಗಳ ಹಿಂದೆ ಇವರನ್ನು ಬಂಧಿಸಿದ್ದು, ಪಾಟ್ನಾ ಜೈಲಿನಲ್ಲಿದ್ದರು.
ಬೋಧಗಯಾ, ಪಾಟ್ನಾ ಮತ್ತು ಬೆಂಗಳೂರಿನ ಸ್ಫೋಟಕ್ಕೆ ಬಳಿಸಿದ ಸ್ಫೋಟಕಗಳಲ್ಲಿ ಸಾಮ್ಯತೆ ಇದೆ. ಈ ಸ್ಫೋಟಕಗಳನ್ನು ಎಲ್ಲಿಂದ ಪಡೆಯಲಾಯಿತು, ಪೂರೈಕೆ ಮಾಡಿದ ವ್ಯಕ್ತಿಗಳಾರು? ಎಂಬ ಬಗ್ಗೆ ಮಾಹಿತಿ ಪಡೆಯಲು ಇಬ್ಬರನ್ನು ಬೆಂಗಳೂರಿಗೆ ಕರೆತರಲಾಗಿದೆ.
ಅಂದಹಾಗೆ ಡಿ. 28ರಂದು ಚರ್ಚ್ಸ್ಟ್ರೀಟ್ನಲ್ಲಿರುವ ಕೋಕೋನಟ್ ಗ್ರೋವ್ ಎಂಬ ಹೋಟೆಲ್ ಬಳಿ ರಾತ್ರಿ 8.30ಕ್ಕೆ ಬಾಂಬ್ ಸ್ಫೋಟ ಸಂಭವಿಸಿತ್ತು. ಓರ್ವ ಮಹಿಳೆ ಸ್ಫೋಟದಲ್ಲಿ ಮೃತಪಟ್ಟರೆ, ಮೂವರು ಗಾಯಗೊಂಡಿದ್ದರು.












Click it and Unblock the Notifications